ಬೆಳ್ತಂಗಡಿ : ಮಡಂತ್ಯಾರು ಸಮೀಪ ಮಚ್ಚಿನ ಗ್ರಾಮದ ಬಂಗೇರಕಟ್ಟೆ ಎಂಬಲ್ಲಿ ಹೆಚ್ ಪಿ ಸಿ ಎಲ್ ಡೀಸೆಲ್ ಪೈಪ್ ಲೈನಿಗೆ ಕನ್ನ ಕೊರೆದಿರುವ ಪ್ರಕರಣವೊಂದು ಶುಕ್ರವಾರ ಬೆಳಕಿಗೆ ಬಂದಿದೆ. ಇಲ್ಲಿ ಭಾರೀ ಪ್ರಮಾಣದಲ್ಲಿ ಡೀಸೆಲ್ ಸೋರಿಕೆಯಾಗುತ್ತಿದ್ದ ಹಿನ್ನಲೆಯ ಇಂದು ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಇದು ಪತ್ತೆಯಾಗಿದೆ.
ಇಲ್ಲಿ ಪೆಟ್ರೋಲಿಯಂ ಪೈಪ್ ಲೈನಿಗೆ ಕನ್ನಕೊರೆಯಲಾಗಿತ್ತು. ಪೈಪ್ ಲೈನಿಗೆ ಒಂದು ಇಂಚಿನ ಪೈಪ್ ಅನ್ನು ಸೆಟ್ ಮಾಡಿ ಅದಕ್ಕೆ ಗೇಟ್ ವಾಲ್ ಅಳವಡಿಸಲಾಗಿತ್ತು. ಅಲ್ಲಿಂದ ಮುಂದೆ 20 ಮೀಟರ್ ದೂರಕ್ಕೆ ಪೈಪ್ ಜೋಡಿಸಲಾಗಿರುವುದು ಪತ್ತೆಯಾಗಿದೆ. ಮಣ್ಣಿನ ಅಡಿಯಲ್ಲಿ ಅತ್ಯಂತ ವ್ಯವಸ್ತಿತವಾಗಿ ಇದನ್ನು ಮಾಡಲಗಿದೆ. ಈ ಗೇಟ್ವಾಲ್ನಲ್ಲಿ ಡೀಸೆಲ್ ಸೋರಿಕೆಯಾಗುತ್ತಿರುವುದು ಪರಿಶೀಲನೆ ನಡೆಸಿದಾಗ ಕಂಡು ಬಂದಿದೆ. ಕೆಲವು ವರ್ಷಗಳ ಹಿಂದೆ ಇಲ್ಲಿಯೇ ಸಮೀಪ ಭಾರೀ ಪ್ರಮಾಣದಲ್ಲಿ ಡೀಸೆಲ್ ಕಳ್ಳತನವಾಗಿತ್ತು. ಇದೀಗ ಮತ್ತೆ ಪತ್ತೆಯಾಗಿರುವ ಗೇಟ್ವಾಲ್ ಹಾಗು ಪೈಪುಗಳು ಕಳ್ಳತನದ ಸೂಚನೆಯನ್ನು ನೀಡುತ್ತಿದೆ.
ಮಡಂತ್ಯಾರು- ಬಳ್ಳಮಂಜ ರಸ್ತೆಯಲ್ಲಿ ಮಡಂತ್ಯಾರಿನಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ಬಂಗೇರು ಕಟ್ಟೆ ಎಂಬಲ್ಲಿ ರಸ್ತೆಯಿಂದ ಸುಮಾರು 200 ಮೀಟರ್ ದೂರದಲ್ಲಿ ಪೈಪ್ ಕೊರೆದಿರುವುದು ಕಂಡುಬಂದಿದೆ. ಕಳೆದ ಕೆಲ ದಿನಗಳಿಂದ ಇಲ್ಲಿ ಭಾರಿ ಪ್ರಮಾಣದಲ್ಲಿ ಡೀಸೆಲ್ ಸೋರಿಕೆಯಾಗಿ ಸಮೀಪದ ಗದ್ದೆಗಳಲ್ಲಿ ಹಾಗು ಕೆರೆ, ತೋಡುಗಳಲ್ಲಿ ನೀರಿನಲ್ಲಿ ಡೀಸೆಲ್ ತೇಲುತ್ತಿರುವುದು ಕಂಡು ಬಂದ ಹಿನ್ನಲೆಯಲ್ಲಿ ಸ್ಥಳೀಯರು ಹೆಚ್ ಪಿಸಿಎಲ್ ಕಂಪೆನಿಯ ಅದಿಕಾರಿಗಳಿಗೆ ಮಾಹಿತಿ ನೀಡಿದ್ದರು. ಕಂಪೆನಿಯ ಹಿರಿಯ ಅದಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಅಕ್ರಮವಾಗಿ ಜೋಡಿಸಿದ್ದ ಪೈಪ್ಗಳನ್ನು ತೆರವುಗೊಳಿಸಲಗಿದ್ದು ಸೋರಿಕೆ ತಡೆಗೆ ಕ್ರಮ ಕೈಗೊಂಡಿದ್ದಾರೆ.
ಇದೀಗ ಪತ್ತೆಯಾಗಿರುವ ಸ್ಥಳದಲ್ಲಿ ಈಗ ಡೀಸೆಲ್ ಕಳ್ಳತನವಾಗುತ್ತಿತ್ತೇ ಎಂಬ ಬಗ್ಗೆ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಇಷ್ಟು ವ್ಯವಸ್ತಿತವಾಗಿ ಕಳ್ಳತನ ನಡೆಸಲು ದೊಡ್ಡ ಜಾಲವೇ ಇರಬೇಕು ಎಂಬ ಅನುಮನವು ವ್ಯಕ್ತವಾಗುತ್ತಿದೆ. ಇದು ಹಿಂದೆ ನಡೆದಿದ್ದ ಭಾರೀ ಪ್ರಮಣದ ಕಳ್ಳತನದ ಉಳಿದ ಕುರುಹುಗಳೆ ಎಂಬ ಅನುಮಾನವನ್ನೂ ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ. ಘಟನಾಸ್ಥಳಕ್ಕೆ ಬಂಟ್ವಾಳ ಎಎಸ್ಪಿ ರಾಹುಲ್ಕುಮಾರ್, ಬೆಳ್ತಂಗಡಿ ವೃತ್ತನಿರೀಕ್ಷಕ ಬಿ ಆರ್ ಲಿಂಗಪ್ಪ, ಪೂಂಜಲಕಟ್ಟೆ ಠಾಣಾಧಿಕಾರಿ ಲತೇಶ್ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂಪೆನಿಯ ಅಧಿಕಾರಿಗಳು ನೀಡಿರುವ ದೂರಿನಂತೆ ಪೂಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಜನರಲ್ಲಿ ಅತಂಕ: ಡೀಸೆಲ್ ಸಾಗಟದ ಪೈಪ್ ಲೈನ್ನ ಸಮೀಪವೆ ಇದೇ ಕಂಪೆನಿಯ ಬೃಹತ್ ಪ್ರಮಾಣದಲ್ಲಿ ಗ್ಯಾಸ್ ಸಾಗಾಟದ ಪೈಪ್ ಅಳವಡಿಕೆಯ ಕಾರ್ಯ ನಡೆಯುತ್ತಿರುವಾಗ ಆಗಿರುವ ಈ ಡೀಸೆಲ್ ಸೋರಿಕೆ ಜನರಲ್ಲಿ ಆತಂಕವನ್ನು ಮೂಡಿಸಿದೆ. ಡೀಸೆಲ್ ಪೈಪ್ ಮಾದರಿಯಲ್ಲಿ ಗ್ಯಾಸ್ ಪೈಪ್ ಲೈನ್ಗೆ ಕನ್ನಕೊರೆದರೆ ಯಾವರೀತಿಯ ಅನಾಹುತಗಳು ಸಂಭವಿಸಬಹುದು ಎಂಬ ಭಯ ಜನರನ್ನು ಕಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.