ಬೆಳ್ತಂಗಡಿ: ಆದರೆ ಬೆಳ್ತಂಗಡಿ ಶಾಸಕರು ಗುರುವಾಯನಕೆರೆಯಲ್ಲಿನ ಸಂಚಾರ ವ್ಯವಸ್ಥೆಗೆ ಕಂಡು ಕೊಂಡ ಮಾರ್ಗ ಸಾಮಾನ್ಯ ನಾಗರಿಕರಿಗೆ ಅಸಮಾಧಾನವನ್ನುಂಟು ಮಾಡುವ ಲಕ್ಷಣ ಕಾಣುತ್ತಿದೆ.
ಗುರುವಾಯನಕರೆ ಪೇಟೆ ಎಂಬುದು ನಾಲ್ಕೈದು ಊರುಗಳಿಂದ ಬರುವ ರಸ್ತೆಗಳು ಒಂದುಗೂಡುವ ಸ್ಥಳ. ಇಲ್ಲಿ ದಿನನಿತ್ಯ ಅದರಲ್ಲೂ ಬೆಳಿಗ್ಗೆ ಮತ್ತು ಸಂಜೆ ಸಂಚಾರ ದಟ್ಟಣೆ ಮಾಮೂಲು. ವೇಣೂರು, ಕಾರ್ಕಳ ಕಡೆಯಿಂದ ಬಸ್ಸಿನಲ್ಲಿ ಬರುವ ಪ್ರಯಾಣಿಕರು ಉಪ್ಪಿನಂಗಡಿ, ಮಂಗಳೂರಿಗೆ ಹೋಗಬೇಕಾದರೆ ಗುರುವಾಯನಕರೆಯಲ್ಲಿ ಇಳಿದು ಬೇಕಾದ ಬಸ್ಸಿಗೆ ಹೋಗಬೇಕು.
ಉಪ್ಪಿನಂಗಡಿ, ಮಂಗಳೂರು ಕಡೆಯಿಂದ ಬಸ್ಸಿನಲ್ಲಿ ಬರುವ ಪ್ರಯಾಣಿಕರು ವೇಣೂರು, ಮೂಡಬಿದರೆ, ಕಾರ್ಕಳಕ್ಕೆ ಹೋಗಬೇಕಾದರೂ ಗುರುವಾಯನಕರೆಯಲ್ಲಿಯೇ ಇಳಿದು ಬೇಕಾದ ಬಸ್ಸು ಹತ್ತಬೇಕು. ಹೀಗಾಗಿ ಆಯಾ ಕಡೆಯಿಂದ ಬರುವ ಬಸ್ಸುಗಳು ಪೇಟೆಯಲ್ಲಿ ನಿಂತಾಗ ಸಂಚಾರಕ್ಕೆ ಆಗ್ಗಾಗ್ಗೆ ತಡೆ ಉಂಟಾಗುತ್ತದೆ. ಇದಕ್ಕೆ ಕಾರಣ ಇಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳು ಅಗಲಗೊಳ್ಳದಿರುವುದೇ ಆಗಿದೆ. ಎರಡೂ ಹೆದ್ದಾರಿಗಳಲ್ಲಿ ಅಂಗಡಿ ಮುಂಗಟ್ಟುಗಳು ವಿರಾಜಮಾನವಾಗಿರುವುದರಿಂದ ಮತ್ತು ಐವತ್ತಕ್ಕೂ ಹೆಚ್ಚು ರಿಕ್ಷಾಗಳು ಆಕ್ರಮಿಸಿರುವುದರಿಂದ ಅಗಲೀಕರಣ ಮಾಡುವುದು ಸದ್ಯಕ್ಕೆ ದೂರದ ಮಾತಾಗಿದೆ.
ಇಲ್ಲಿನ ಸಂಚಾರ ದಟ್ಟಣೆಗೆ ಖಾಸಗಿ ಮತ್ತು ಸರಕಾರಿ ಬಸ್ಸುಗಳೇ ಕಾರಣ ಎಂದರಿತಿರುವ ಬೆಳ್ತಂಗಡಿ ಶಾಸಕರು ಸ್ಥಳೀಯ ಗ್ರಾ.ಪಂ. ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂಟರ ಭವನ ಹಾಗೂ ಅಂಚೆ ಕಚೇರಿಯ ಬಳಿ, ಇನ್ನೊಂದೆಡೆ ರಾಜ್ಯ ಹೆದ್ದಾರಿಯಲ್ಲಿ ಗುರುವಾಯನಕೆರೆ ಕೆರೆ ಮತ್ತು ಸಹಕಾರಿ ಸಂಘದ ಬಳಿ ಬಸ್ಸು ನಿಲುಗಡೆಯೆಂದು ನಾಮ ಫಲಕಗಳನ್ನು ಅಳವಡಿಸಿದ್ದಾರೆ.
ಆದರೆ ಜನಪ್ರತಿನಿಧಿಗಳು ಅಲ್ಲಿನ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ವೇಣೂರು, ಕಾರ್ಕಳ ಕಡೆಯಿಂದ ಬರುವ ಪ್ರಯಾಣಿಕರು ಉಪ್ಪಿನಂಗಡಿ ಅಥವಾ ಮಂಗಳೂರಿಗೆ ಹೋಗಬೇಕಾದರೆ ಗುರುವಾಯನಕರೆಯ ಕೆರೆ ಬಳಿ ಇರುವ ನಿಲ್ದಾಣದಲ್ಲಿ ಇಳಿದು ಸಹಕಾರಿ ಸಂಘದ ಬಳಿ ಅಥವಾ ಅಂಚೆಕಚೇರಿಯ ಬಳಿಯ ಬಸ್ ನಿಲ್ದಾಣಕ್ಕೆ ಹೋಗಬೇಕಾಗುತ್ತದೆ. ಯುವಕ, ಯುವತಿಯರು ಹೋದಾರು ಎಂದು ಇಟ್ಟುಕೊಳ್ಳೋಣ. ಆದರೆ ಲಗೇಜು, ಒಂದೆರೆಡು ಸಣ್ಣ ಮಕ್ಕಳು ಇರುವ ತಾಯಂದಿರು, ಅಶಕ್ತರು, ವೃದ್ಧರು ಅಥವಾ ಸದೃಢರೇ ಆಗಿರಲಿ ಅಷ್ಟು ದೂರದ ತನಕ ನಡೆದುಕೊಂಡು ಹೋಗುವುದು ಅಸಾಧ್ಯವೆನಿಸಿದೆ.
ಅದೂ ಅಲ್ಲಿನ ರಿಕ್ಷಾಗಳನ್ನು, ವಾಹನ ದಟ್ಟಣೆಯನ್ನು, ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ. ಒಟ್ಟಾರೆ ಬಸ್ಸಿನಲ್ಲಿ ಸಂಚರಿಸುವ ಶ್ರೀಸಾಮಾನ್ಯನ ಪಾಡು ಅರ್ಥಮಾಡಿಕೊಳ್ಳಲಾಗದು.
ಇಲ್ಲಿನ ಸಮಸ್ಯೆಗೆ ಮೂಲ ಕಾರಣ ಅಂಗಡಿ ಮುಂಗಟ್ಟುಗಳನ್ನು ಸ್ಥಾಪಿಸಲು ಗ್ರಾ.ಪಂ. ಆಡಳಿತಗಳು ದೂರದೃಷ್ಟಿಯಿಲ್ಲದೆ ಅನುಮತಿ ನೀಡಿರುವುದೇ ಆಗಿದೆ. ಹೀಗಾಗಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಯಲ್ಲಿರುವ ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವುದು, ರಿಕ್ಷಾ ನಿಲ್ದಾಣವನ್ನು ಸ್ಥಳಾಂತರಿಸುವುದು ಅಥವಾ ಪರ್ಯಾಯ ರಸ್ತೆ (ಬೈಪಾಸ್)ಗಳನ್ನು ನಿರ್ಮಿಸುವುದೇ ಇಲ್ಲಿನ ಸಮಸ್ಯೆಗೆ ಪರಿಹಾರವೇ ಹೊರತು ಸ್ವಂತ ವಾಹನದಲ್ಲಿ ಸಂಚರಿಸುವವರಿಗೆ, ವ್ಯಾಪಾರಿಗಳ ಅನುಕೂಲಕ್ಕೋಸ್ಕರ ಸಾಮಾನ್ಯರಿಗೆ ತೊಂದರೆಯೊಡ್ಡಿ ಸಮಸ್ಯೆ ನಿವಾರಣೆಗೆ ಯತ್ನಿಸುವುದು ಎಳ್ಳಷ್ಟೂ ಸರಿಯಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಫೊಟೊಗಳು ಇವೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.