ನವದೆಹಲಿ: ಅಯೋಧ್ಯಾ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸುವುದಾಗಿ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
“ಶ್ರೀರಾಮ ಜನ್ಮಭೂಮಿಗೆ ಸಂಬಂಧಿಸಿದಂತೆ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಈ ದೇಶದ ಜನರ ಭಾವನೆ, ನಂಬಿಕೆ ಮತ್ತು ಶ್ರದ್ಧೆಗೆ ನ್ಯಾಯ ಸಲ್ಲುವಂತೆ ನೀಡಿದ ತೀರ್ಪನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ವಾಗತಿಸುತ್ತದೆ. ದಶಕಗಳ ಸುದೀರ್ಘ ನ್ಯಾಯಾಂಗ ಪ್ರಕ್ರಿಯೆಯ ನಂತರ ಈ ಕಾನೂನು ಸಮ್ಮತ ತೀರ್ಪು ಬಂದಿದೆ. ಈ ಸುದೀರ್ಘ ಪ್ರಕ್ರಿಯೆಯಲ್ಲಿ, ಶ್ರೀ ರಾಮನ ಜನ್ಮಸ್ಥಳಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳನ್ನು ಸೂಕ್ಷ್ಮವಾಗಿ ಪರಿಗಣಿಸಲಾಗಿದೆ. ಎಲ್ಲಾ ಪಕ್ಷಗಳು ಆಯಾ ದೃಷ್ಟಿಕೋನಗಳಿಂದ ಮಂಡಿಸಿದ ವಾದಗಳನ್ನು ಮೌಲ್ಯಮಾಪನ ಮಾಡಲಾಯಿತು. ಧೈರ್ಯದಿಂದ ಸುದೀರ್ಘ ಮಂಥನವನ್ನು ನಡೆಸುವ ಮೂಲಕ ಸತ್ಯ ಮತ್ತು ನ್ಯಾಯವನ್ನು ತಾಳ್ಮೆಯಿಂದ ಘೋಷಿಸಿದ ಎಲ್ಲಾ ನ್ಯಾಯಮೂರ್ತಿಗಳಿಗೂ ಮತ್ತು ಎಲ್ಲಾ ಪಕ್ಷಗಳ ವಕೀಲರಿಗೂ ನಾವು ಪ್ರಾಮಾಣಿಕವಾಗಿ ಧನ್ಯವಾದಗಳನ್ನು ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಈ ಸುದೀರ್ಘ ಪ್ರಯತ್ನದಲ್ಲಿ ಅನೇಕ ರೀತಿಯಲ್ಲಿ ಕೊಡುಗೆ ನೀಡಿದ ಮತ್ತು ತ್ಯಾಗಗಳನ್ನು ಮಾಡಿದ ಎಲ್ಲಾ ಸಹವರ್ತಿಗಳನ್ನೂ ನಾವು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತೇವೆ” ಎಂದಿದ್ದಾರೆ.
“ತೀರ್ಪನ್ನು ಸ್ವೀಕರಿಸುವ ಮನಸ್ಥಿತಿ ಮತ್ತು ಸಹೋದರತ್ವವನ್ನು ಕಾಪಾಡಿಕೊಳ್ಳುತ್ತಾ ಸಂಪೂರ್ಣ ಸುವ್ಯವಸ್ಥೆಯನ್ನು ರಕ್ಷಣೆ ಮಾಡಲು ಸರ್ಕಾರ ಮತ್ತು ಸಮಾಜ ಮಟ್ಟದಲ್ಲಿ ಮಾಡಿದ ಎಲ್ಲಾ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ ಮತ್ತು ಅಭಿನಂದಿಸುತ್ತೇವೆ. ಅಂತಿಮ ನ್ಯಾಯಕ್ಕಾಗಿ ಕಾತುರದಿಂದ ಕಾಯುತ್ತಿದ್ದ ಭಾರತೀಯರು ಕೂಡ ಅಭಿನಂದನೆಗೆ ಅರ್ಹರು” ಎಂದಿದ್ದಾರೆ.
“ಈ ತೀರ್ಪನ್ನು ಜಯ-ಪರಾಜಯದ ದೃಷ್ಟಿಯಿಂದ ನೋಡಬಾರದು. ಸತ್ಯ ಮತ್ತು ನ್ಯಾಯದ ಮಂಥನದಿಂದ ಪಡೆದ ಈ ಆದೇಶವನ್ನು ಭಾರತ ವರ್ಷದ ಸಂಪೂರ್ಣ ಸಮಾಜದಲ್ಲಿ ಐಕ್ಯತೆ ಮತ್ತು ಭ್ರಾತೃತ್ವವನ್ನು ಉಂಟುಮಾಡುವ ನಿರ್ಧಾರವಾಗಿ ನೋಡಬೇಕು ಮತ್ತು ಉಪಯೋಗಿಸಿಕೊಳ್ಳಬೇಕು. ಇಡೀ ದೇಶವಾಸಿಗಳು ಕಾನೂನು ಮತ್ತು ಸಂವಿಧಾನದ ಮಿತಿಯಲ್ಲಿ ಇದ್ದು ತಮ್ಮ ಸಂತೋಷವನ್ನು ಸಂಯಮ ಮತ್ತು ಸಾತ್ವಿಕ ರೀತಿಯಲ್ಲಿ ವ್ಯಕ್ತಪಡಿಸಬೇಕು” ಎಂದಿದ್ದಾರೆ.
“ಈ ವಿವಾದದ ಸಮಾಪಣೆಯ ದಿಸೆಯಲ್ಲಿ ಸರ್ವೋಚ್ಛ ನ್ಯಾಯಾಲಯವು ನೀಡಿದ ತೀರ್ಪಿಗೆ ಅನುಗುಣವಾಗಿ, ವಿವಾದವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸರ್ಕಾರದ ಉಪಕ್ರಮವು ಕ್ಷಿಪ್ರಗತಿಯಲ್ಲಿ ನಡೆಯುತ್ತದೆ ಎಂಬ ವಿಶ್ವಾಸ ನಮಗಿದೆ. ಹಿಂದಿನ ಎಲ್ಲಾ ವಿಷಯಗಳನ್ನು ಮರೆತು, ಶ್ರೀರಾಮನ ಜನ್ಮಸ್ಥಳದಲ್ಲಿ ಭವ್ಯವಾದ ದೇವಾಲಯದ ನಿರ್ಮಾಣದಲ್ಲಿ ನಾವೆಲ್ಲರೂ ಒಟ್ಟಾಗಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸೋಣ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.