ನವದೆಹಲಿ: ನವರಾತ್ರಿ ಸಮಯದಲ್ಲಿ ಪವಿತ್ರ ವೈಷ್ಣೋ ದೇವಿಯ ದೇಗುಲಕ್ಕೆ ಭೇಟಿ ನೀಡಲಿರುವ ಯಾತ್ರಾರ್ಥಿಗಳಿಗೆ ವಿಶೇಷ ಉಡುಗೊರೆಯಾಗಿ ಭಾರತೀಯ ರೈಲ್ವೆಯು ತನ್ನ ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ನವದೆಹಲಿ ಮತ್ತು ಕಾತ್ರ ನಡುವೆ ಪ್ರಾರಂಭಿಸಲು ನಿರ್ಧರಿಸಿದೆ. ದೆಹಲಿ-ಕಾತ್ರ ವಂದೇ ಭಾರತ್ ರೈಲಿನ ಪ್ರಾಯೋಗಿಕ ಪರೀಕ್ಷೆಗಳು ಮುಗಿದಿದ್ದು, ನವರಾತ್ರಿ ಸಮಯದಲ್ಲಿ ಇದು ತನ್ನ ಹಳಿಯಲ್ಲಿ ಸಂಚರಿಸಲು ಸಿದ್ಧವಾಗಿದೆ ಎಂದು ಭಾರತೀಯ ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ಹೇಳಿದ್ದಾರೆ.
ವರದಿಗಳ ಪ್ರಕಾರ, ಈ ರೈಲು ನವದೆಹಲಿ ಜಂಕ್ಷನ್ನಿಂದ ಬೆಳಿಗ್ಗೆ 6 ಗಂಟೆಗೆ ಸಂಚಾರ ಪ್ರಾರಂಭಿಸಲಿದ್ದು, ಅದೇ ದಿನ ಮಧ್ಯಾಹ್ನ 2 ಗಂಟೆಗೆ ಕಾತ್ರವನ್ನು ತಲುಪಲಿದೆ. ಈ ರೈಲು ಅಂಬಾಲಾ, ಲುಧಿಯಾನ ಮತ್ತು ಜಮ್ಮು ತಾವಿ ಮೂಲಕ ಪ್ರಯಾಣಿಸಲಿದೆ. ಟೈಮ್ ಟೇಬಲ್ ಪ್ರಕಾರ, ರೈಲು ಬೆಳಿಗ್ಗೆ 8.10 ಕ್ಕೆ ಅಂಬಾಲಾ ಜಂಕ್ಷನ್, ಬೆಳಿಗ್ಗೆ 9.22 ಕ್ಕೆ ಲುಧಿಯಾನ ಜಂಕ್ಷನ್ ಮತ್ತು ಮಧ್ಯಾಹ್ನ 12.40 ಕ್ಕೆ ಜಮ್ಮು ತಾವಿ ತಲುಪಲಿದೆ. ಪ್ರತಿ ನಿಲ್ದಾಣದಲ್ಲಿ ರೈಲಿನ ನಿಲುಗಡೆ ಸಮಯ ಕೇವಲ ಎರಡು ನಿಮಿಷಗಳು ಮಾತ್ರ.
ಮರಳಿ ಬರುವಾಗ ಈ ರೈಲು ಮಧ್ಯಾಹ್ನ 3 ಗಂಟೆಗೆ ಕಾತ್ರದಿಂದ ಹೊರಟು ರಾತ್ರಿ 11 ಕ್ಕೆ ನವದೆಹಲಿಗೆ ತಲುಪಲಿದೆ. ಜಮ್ಮು ತಾವಿಯನ್ನು ಸಂಜೆ 4.18, ಲುಧಿಯಾನವನ್ನು ಸಂಜೆ 7.36ಕ್ಕೆ ಮತ್ತು ಅಂಬಾಲವನ್ನು ರಾತ್ರಿ 8.56ಕ್ಕೆ ಇದು ತಲುಪಲಿದೆ. ಇಲ್ಲೂ ನಿಲುಗಡೆ ಎರಡು ನಿಮಿಷ ಮಾತ್ರ.
ಪ್ರಸ್ತುತ ವಂದೇ ಭಾರತ್ ಎಕ್ಸ್ಪ್ರೆಸ್ ನವದೆಹಲಿ ಮತ್ತು ವಾರಣಾಸಿ ನಡುವೆ ಮಾತ್ರ ಚಲಿಸುತ್ತದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ವಿನೋದ್ ಕುಮಾರ್ ಯಾದವ್, ರೈಲ್ವೆಯು ತನ್ನ ಹೆಚ್ಚು ನಿಬಿಡವಾದ ಮಾರ್ಗಗಳನ್ನು ನವೀಕರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ. ದೆಹಲಿ-ಮುಂಬಯಿ ಮತ್ತು ದೆಹಲಿ-ಹೌರಾ ಮಾರ್ಗ ಡಿಸೆಂಬರ್ 2021 ರ ವೇಳೆಗೆ ಸಿದ್ಧವಾಗಲಿದೆ. 2022 ರ ವೇಳೆಗೆ 40 ವಂದೇ ಭಾರತ್ ರೈಲುಗಳು ಸಂಚಾರ ಆರಂಭಿಸಲಿವೆ ಎಂದಿದ್ದಾರೆ. ರೈಲುಗಳಿಗೆ ಹೊಸ ವಿಶೇಷಣಗಳನ್ನು ಸೇರ್ಪಡೆ ಮಾಡುವ ಬಗ್ಗೆ ರೈಲ್ವೆ ಕೆಲಸ ಮಾಡುತ್ತಿದೆ ಮತ್ತು ಹೆಚ್ಚು ಪಾರದರ್ಶಕವಾಗಲು ಪ್ರಯತ್ನಿಸುತ್ತಿದೆ. ಇದು ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ನಿರ್ಮಾಣವಾಗಲಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.