ನವದೆಹಲಿ: ಕಳೆದ ವಾರಾಂತ್ಯದಲ್ಲಿ ಸೌದಿ ಅರೇಬಿಯಾದ ತೈಲ ಸೌಲಭ್ಯಗಳ ಮೇಲೆ ನಡೆದ ದಾಳಿಯಿಂದಾಗಿ ಭಾರತದ ತೈಲ ಸರಬರಾಜಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಸೋಮವಾರ ಭರವಸೆ ನೀಡಿದ್ದಾರೆ.
“ಸೆಪ್ಟೆಂಬರ್ ತಿಂಗಳಿಗೆ ನಾವು ನಮ್ಮ ಕಚ್ಚಾ ತೈಲ ಸರಬರಾಜನ್ನು ನಮ್ಮ ಎಲ್ಲಾ ತೈಲ ಮಾರುಕಟ್ಟೆ ಕಂಪನಿಗಳೊಂದಿಗೆ ಪರಿಶೀಲಿಸಿದ್ದೇವೆ. ಭಾರತಕ್ಕೆ ಸರಬರಾಜಿನಲ್ಲಿ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ನಮಗೆ ವಿಶ್ವಾಸವಿದೆ. ಸದ್ಯಕ್ಕೆ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
“ಸೌದಿ ಅರಾಮ್ಕೊದ ತೈಲ ಸ್ಥಿರೀಕರಣ ಕೇಂದ್ರಗಳ ಮೇಲಿನ ದಾಳಿಯ ನಂತರ, ಅರಾಮ್ಕೊದ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ. ರಿಯಾದಿನಲ್ಲಿರುವ ಭಾರತೀಯ ರಾಯಭಾರಿಯವರು ಅರಾಮ್ಕೊದ ಹಿರಿಯ ನಿರ್ವಾಹಕರನ್ನು ಸಂಪರ್ಕಿಸಿದ್ದಾರೆ ಮತ್ತು ಭಾರತಕ್ಕೆ ಸ್ಥಿರವಾದ ಪೂರೈಕೆಯನ್ನು ಖಚಿತಪಡಿಸಿಕೊಂಡಿದ್ದಾರೆ” ಎಂದಿದ್ದಾರೆ.
ಸೌದಿ ಅರೇಬಿಯಾ ವಿಶ್ವದ ಅತಿದೊಡ್ಡ ತೈಲ ರಫ್ತುದಾರ ರಾಷ್ಟ್ರವಾಗಿದೆ. ಅಲ್ಲಿನ ಸರ್ಕಾರಿ ಸ್ವಾಮ್ಯದ ತೈಲ ಕಂಪನಿ ಸೌದಿ ಅರಾಮ್ಕೊದ ಅಬ್ಕೈಕ್ ಮತ್ತು ಖುರೈಸ್ನಲ್ಲಿನ ಕಚ್ಚಾ ಸಂಸ್ಕರಣಾ ಸೌಲಭ್ಯಗಳು ದಿನಕ್ಕೆ 5.7 ಮಿಲಿಯನ್ ಬ್ಯಾರೆಲ್ಗಳಷ್ಟು ಉತ್ಪಾದನೆಯನ್ನು ಕಡಿತಗೊಳಿಸಿದೆ. ಪೂರ್ಣ ಉತ್ಪಾದನೆಯನ್ನು ಯಾವಾಗ ಪುನರಾರಂಭಿಸಲಾಗುತ್ತದೆ ಎಂಬುದನ್ನು ಕಂಪನಿಯು ಇದುವರೆಗೆ ಹೇಳಿಲ್ಲ.
ಈ ಬೆಳವಣಿಗೆಯಿಂದಾಗಿ ಭಾರತಕ್ಕೆ ಕಚ್ಛಾತೈಲ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಹೇಳಲಾಗಿತ್ತು, ಆದರೆ ಸಚಿವರು ಆ ಆತಂಕವನ್ನು ದೂರ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.