ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದರೆ, 2022 ರಲ್ಲಿ ಅಂದರೆ 75ನೇ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿರುವ ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಡಿಸ್ಟ್ರಿಕ್ಟ್ ಹೊಸ ವೈಭವವನ್ನು ಪಡೆದುಕೊಳ್ಳಲಿದೆ.
ರಾಜಧಾನಿಯಲ್ಲಿ ಸೆಂಟ್ರಲ್ ಅಡ್ಮಿನಿಸ್ಟ್ರೇಟಿವ್ ಡಿಸ್ಟ್ರಿಕ್ಟ್ ಅನ್ನು ಆಧುನೀಕರಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖಗೊಂಡಿದೆ. ಭವ್ಯವಾದ ಸಂಸತ್ತು ಕಟ್ಟಡದ ರಚನೆ, ಹೊಸ ಸೆಂಟ್ರಲ್ ಸೆಕ್ರೆಟೇರಿಯೇಟ್ ಸಂಕೀರ್ಣ ಮತ್ತು ಸೆಂಟ್ರಲ್ ವಿಸ್ಟಾದ ಪುನರಾಭಿವೃದ್ಧಿಯನ್ನು ಈ ಯೋಜನೆಯು ಒಳಗೊಂಡಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಕಳೆದ ವಾರ ಈ ಬಗೆಗಿನ ಪ್ರಸ್ತಾವನೆಗಾಗಿ ಮನವಿಯನ್ನು ಸಲ್ಲಿಸಿದೆ, ಉಳಿದ ಎರಡು ಯೋಜನೆಗಳಿಗೆ ಆರ್ಕಿಟೆಕ್ಚರ್ ಸಂಸ್ಥೆಗಳಿಗೂ ಆಹ್ವಾನವನ್ನು ನೀಡಿದೆ. ಸಚಿವಾಲಯದ ಅಧಿಕಾರಿಗಳು ಹಲವಾರು ಆರ್ಕಿಟೆಕ್ಚರ್ ಸಂಸ್ಥೆಗಳೊಂದಿಗೆ ಗುರುವಾರ ಬಿಡ್ಡಿಂಗ್ ಪೂರ್ವ ಸಭೆ ನಡೆಸಿದ್ದಾರೆ. ಅಕ್ಟೋಬರ್ ಮಧ್ಯದ ವೇಳೆಗೆ ಸರ್ಕಾರವು ಈ ಭವ್ಯ ಯೋಜನೆಗಾಗಿ ಜಾಗತಿಕ ಟೆಂಡರ್ ಕರೆಯಲಿದೆ ಎಂದು ಮೂಲಗಳು ತಿಳಿಸಿವೆ.
ಈ ಯೋಜನೆಗಾಗಿ ತಗುಲುವ ಅಂದಾಜು ವೆಚ್ಚವನ್ನು ಸರ್ಕಾರ ಇನ್ನೂ ಅಂತಿಮಗೊಳಿಸಿಲ್ಲ. ಸಚಿವಾಲಯದ ಮೂಲಗಳ ಪ್ರಕಾರ, ಯೋಜನೆಯ ವೆಚ್ಚದ ಹೆಚ್ಚಿನ ಭಾಗವನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಿಧಿಯ ಮೂಲಕ ಪೂರೈಸಲಾಗುತ್ತದೆ.
“ಯೋಜನೆ ಪೂರ್ಣಗೊಂಡ ನಂತರ, ನಾವು ಕಚೇರಿ ಬಾಡಿಗೆ ಮತ್ತು ನಿರ್ವಹಣೆಗಾಗಿ ವರ್ಷಕ್ಕೆ ವ್ಯಯಿಸುವ 1,000 ಕೋಟಿ ರೂಪಾಯಿಗಳನ್ನು ಉಳಿಸುತ್ತೇವೆ” ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಗಸ್ಟ್ 2022 ರ ವೇಳೆಗೆ ಹೊಸ ಸಂಸತ್ತಿನ ಸಂಕೀರ್ಣವನ್ನು ನಿರ್ಮಿಸುವುದು ಅಥವಾ ಅಸ್ತಿತ್ವದಲ್ಲಿರುವ ಕಟ್ಟಡಗಳ ಪುನರಾಭಿವೃದ್ಧಿಯನ್ನು ಮಾಡಿ ಮುಗಿಸುವ ಗುರಿಯನ್ನು ಹೊಂದಲಾಗಿದೆ. ಈ ವೇಳಗೆ ಭಾರತವು ತನ್ನ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಲಿದೆ ಎಂದಿದ್ದಾರೆ.
ಕಳೆದ ತಿಂಗಳು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಸತ್ತನ್ನು ಆಧುನೀಕರಿಸುವಂತೆ ಒತ್ತಾಯಿಸಿದ್ದರು, ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು ಅವರೂ ಇದೇ ರೀತಿಯ ಕರೆ ನೀಡಿದ್ದರು.
ಪ್ರಸ್ತುತ ಇರುವ ಸಂಸತ್ತು ಭವನವನ್ನು 1921 ಮತ್ತು 1927 ರ ನಡುವೆ ಬ್ರಿಟಿಷ್ ವಾಸ್ತುಶಿಲ್ಪಿ ಜೋಡಿ ಸರ್ ಎಡ್ವಿನ್ ಲುಟಿಯೆನ್ಸ್ ಮತ್ತು ಸರ್ ಹರ್ಬರ್ಟ್ ಬೇಕರ್ ಅವರು ನಿರ್ಮಿಸಿದ್ದರು. ಇದರಲ್ಲಿ ಸಂದೀಯ ಮಂಡಳಿಯನ್ನು ಸ್ಥಾಪಿಸಲು ಅಂದಿನ ಭಾರತದ ವೈಸ್ರಾಯ್ ಲಾರ್ಡ್ ಇರ್ವಿನ್ ಅವರು ಇದನ್ನು ಉದ್ಘಾಟಿಸಿದರು. ನಂತರ, ಜನವರಿ 26, 1950 ರಂದು ಸಂವಿಧಾನ ಜಾರಿಗೆ ಬಂದ ನಂತರ ಇದನ್ನು ಭಾರತದ ಸಂಸತ್ತು ಎಂದು ಮರುನಾಮಕರಣ ಮಾಡಲಾಯಿತು.
ಈ ಕಟ್ಟಡಗಳು ತುಂಬಾ ಹಳೆಯದಾಗಿರುವುದರಿಂದ ಇವುಗಳ ನಿರ್ವಹಣಾ ವೆಚ್ಚ ತೀರಾ ದುಬಾರಿಯಾಗಿದೆ. ಹೀಗಾಗಿ ಹೊಸ ಕಟ್ಟಡಗಳನ್ನು ನಿರ್ಮಿಸಿದರೆ, ಅದು ಇಂಧನ ಸಮರ್ಥವಾಗಿರುತ್ತದೆ, ಆಧುನಿಕ ಸೌಲಭ್ಯಗಳನ್ನು ಒಳಗೊಂಡಿರುತ್ತದೆ, ಬಹುಮಟ್ಟದ ಪಾರ್ಕಿಂಗ್ ಸೌಲಭ್ಯವನ್ನು ಹೊಂದಲಿದೆ, ಕೇಂದ್ರೀಕೃತ ಏರ್ ಕಂಡಿಷನ್ ವ್ಯವಸ್ಥೆಯನ್ನೂ ಹೊಂದಲಿದೆ, ಸೋಲಾರ್ ಪ್ಯಾನಲ್ ಕೂಡ ಇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.