ಶ್ರೀನಗರ: ಜಮ್ಮು ಕಾಶ್ಮೀರದ ಹಣ್ಣು ಬೆಳೆಗಾರರಿಗೆ ಅಲ್ಲಿನ ರಾಜ್ಯಪಾಲರಾದ ಸತ್ಯ ಪಾಲ್ ಮಲಿಕ್ ಅವರು ಹೊಸ ಯೋಜನೆಯೊಂದನ್ನು ಆರಂಭಿಸಿದ್ದಾರೆ. ಮಾರ್ಕೆಟಿಂಗ್ ಇಂಟರ್ವೆನ್ಶನ್ ಸ್ಕೀಮ್ (ಎಂಐಎಸ್) ಯೋಜನಗೆ ಗುರುವಾರ ಅವರು ಚಾಲನೆಯನ್ನು ನೀಡಿದ್ದು, ಈ ಯೋಜನೆಯಡಿ ಬೆಳೆಗಾರರು ತಾವು ಬೆಳೆದ ಹಣ್ಣು ಹಂಪಲುಗಳನ್ನು ನೇರವಾಗಿ ಸರ್ಕಾರಿ ನೇತೃತ್ವದ ನ್ಯಾಷನಲ್ ಅಗ್ರಿಕಲ್ಚರ್ ಕೊ-ಆಪರೇಟಿವ್ ಮಾರ್ಕೆಟಿಂಗ್ ಫೆಡೆರೇಶನ್ ಆಫ್ ಇಂಡಿಯಾ (NAFED)ಗೆ ಗೊತ್ತುಪಡಿಸಿದ ಐದು ಸ್ಥಳಗಳಲ್ಲಿ ಮಾರಾಟ ಮಾಡಬಹುದಾಗಿದೆ.
ಜಮ್ಮು ಮತ್ತು ಕಾಶ್ಮೀರದ ಬೆಳೆಗಾರರಿಂದ ಸೇಬುಗಳನ್ನು ಖರೀದಿ ಮಾಡುವ ಮತ್ತು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಪಾವತಿ ಮಾಡುವ ಯೋಜನೆಯನ್ನು ಕೇಂದ್ರ ಘೋಷಿಸಿದ ಎರಡು ದಿನಗಳ ನಂತರ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಹಣ್ಣು ಬೆಳೆಗಾರರು ತಮ್ಮ ಉತ್ಪನ್ನಗಳನ್ನು NAFEDಗೆ ಮಾರಾಟ ಮಾಡಲು ಸಾಧ್ಯವಾಗುವಂತೆ ಸೊಪೋರ್, ಪರಿಂಪೋರಾ (ಶ್ರೀನಗರ), ಶೋಪಿಯಾನ್, ಪುಲ್ವಾಮಾ ಮತ್ತು ಅನಂತ್ನಾಗ್ ಈ ಐದು ಸ್ಥಳಗಳನ್ನು ನಿಗದಿಪಡಿಸಿದೆ.
ಕಾಶ್ಮೀರ ಭಾರತದ ಅತಿದೊಡ್ಡ ಸೇಬು ಬೆಳೆಯುವ ರಾಜ್ಯವಾಗಿದ್ದು ಇಲ್ಲಿ ವಾರ್ಷಿಕವಾಗಿ ಸರಾಸರಿ 2,200 ಮೆಟ್ರಿಕ್ ಟನ್ ಸೇಬು ಉತ್ಪಾದನೆಯಾಗುತ್ತದೆ. ಸೇಬು ಉದ್ಯಮವು ಸುಮಾರು 1,300 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸುತ್ತದೆ ಎಂದು ಅಲ್ಲಿನ ರಾಜ್ಯ ಸರ್ಕಾರದ ವೆಬ್ಸೈಟ್ ತಿಳಿಸುತ್ತದೆ.
ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ ಇಲ್ಲಿ ಎಲ್ಲಾ ಬಗೆಯ ಹಣ್ಣುಗಳನ್ನು ಬೆಳೆಯುವ ಋತುವಾಗಿದ್ದು, ಈ ವೇಳೆ ಅತ್ಯಧಿಕ ಪ್ರಮಾಣದ ಹಣ್ಣುಗಳನ್ನು ದೇಶದ ವಿವಿಧ ಭಾಗಗಳಿಗೆ ಮತ್ತು ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ.
ಮಾರ್ಕೆಟಿಂಗ್ ಇಂಟರ್ವೆನ್ಶನ್ ಸ್ಕೀಮ್ ಅನುಷ್ಠಾನದ ಮೇಲ್ವಿಚಾರಣೆಗಾಗಿ ರಾಜ್ಯ ಸರ್ಕಾರ ಮತ್ತು NAFEDನ ಉನ್ನತ ಮಟ್ಟದ ಅಧಿಕಾರಿಗಳ ತಂಡವನ್ನು ರಚಿಸಲಾಗಿದೆ. ಈ ಯೋಜನೆಯಡಿ ಗೊತ್ತುಪಡಿಸಲಾದ ಸ್ಥಳಗಳಲ್ಲಿ ಮಾತ್ರ ಬೆಳೆಗಾರರಿಂದ ಅವರ ಉತ್ಪನ್ನಗಳನ್ನು ತೆಗೆದುಕೊಳ್ಳಲಾಗುತ್ತದೆ. ಹಣ್ಣುಗಳನ್ನು ದೇಶಾದ್ಯಂತ ರವಾನಿಸಲು NAFED ಸಾರಿಗೆ ವ್ಯವಸ್ಥೆಯನ್ನೂ ಮಾಡಲಿದೆ. ಬೆಳೆಗಾರರು ಮಧ್ಯವರ್ತಿಗಳಿಗೆ ಕಮಿಷನ್ ಪಾವತಿಸದೆಯೇ ತಮ್ಮ ಬೆಳೆಯನ್ನು ಮಾರಾಟ ಮಾಡಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.