ತಿರುಪತಿ: ಹಿಂದೂಗಳ ಅತ್ಯಂತ ಶ್ರೀಮಂತ ದೇವಾಲಯವಾದ ತಿರುಪತಿ ತಿರುಮಲದಲ್ಲಿ ಇರುವ ಹಿಂದೂಯೇತರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಾಗುತ್ತದೆ, ಹಿಂದೂಗಳೆಂದು ಸುಳ್ಳು ಹೇಳಿಕೊಂಡು ಕೆಲಸಕ್ಕೆ ಸೇರಿದವರನ್ನು ಪತ್ತೆ ಹಚ್ಚಲು ಗುಪ್ತ ತನಿಖೆ ನಡೆಸಲಾಗುತ್ತದೆ ಎಂದು ಇತ್ತೀಚಿಗೆ ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿ ಎಲ್.ವಿ ಸುಬ್ರಹ್ಮಣ್ಯಂ ಅವರು ಘೋಷಣೆ ಮಾಡಿದ್ದಾರೆ.
ತಿರುಪತಿಯಲ್ಲಿ ಉದ್ಯೋಗದಲ್ಲಿರುವಾಗಲೇ ಮತಾಂತರವಾಗಿದ್ದರೆ ತಪ್ಪಿಲ್ಲ, ಅದು ಅವರ ಆಯ್ಕೆ. ಆದರೆ ಅವರು ಮತಾಂತರವಾದ ಬಳಿಕ ಉದ್ಯೋಗದಲ್ಲಿ ಮುಂದುವರೆಯಬಾರದು ಎಂದು ಅವರು ಹೇಳಿದ್ದಾರೆ. ಅವರು ಉದ್ಯೋಗದಲ್ಲಿ ಮುಂದುವರೆಯುವುದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದಿದ್ದಾರೆ. ತಿರುಮಲದಲ್ಲಿ ಕೆಲಸ ಮಾಡುವವರ ಮನೆಗಳಲ್ಲಿ ತನಿಖೆಯನ್ನೂ ಮಾಡಲಾಗುತ್ತದೆ. ಈಗಾಗಲೇ ಟಿಟಿಡಿಯ ಕಣ್ಗಾವಲು ಪಡೆ ಹಿಂದೂಯೇತರರನ್ನು ಪತ್ತೆ ಹಚ್ಚುವ ಕಾರ್ಯವನ್ನು ಆರಂಭಿಸಿದೆ ಎಂದಿದ್ದಾರೆ.
ಕಳೆದ ವಾರ, ತಿರುಪತಿಯ ತೀರ್ಥಯಾತ್ರೆಯ ಬಸ್ ಟಿಕೆಟುಗಳಲ್ಲಿ ಕ್ರಿಸ್ತರ ಜೆರುಸಲೇಂ ಮತ್ತು ಹಜ್ ಯಾತ್ರೆಯ ಬಗೆಗಿನ ಜಾಹೀರಾತುಗಳು ಪ್ರಕಟಗೊಂಡಿದ್ದವು. ಇದು ಜನರ ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು. ಬಳಿಕ ಆಡಳಿತ ಮಂಡಳಿ ಈ ಟಿಕೆಟುಗಳನ್ನು ವಾಪಾಸ್ ಪಡೆದಿತ್ತು ಮತ್ತು ಈ ಬಗ್ಗೆ ತನಿಖೆಗೆ ಆದೇಶಿಸಿತ್ತು. ಪ್ರಸ್ತುತ ಆಂಧ್ರದ ಮುಖ್ಯಮಂತ್ರಿಯಾಗಿರುವ ವೈಎಸ್ ಜಗನಮೋಹನ್ ರೆಡ್ಡಿ ಅವರು ಕ್ರಿಶ್ಚಿಯನ್ ಎನ್ನುವುದು ಈ ವಿವಾದಕ್ಕೆ ಇನ್ನಷ್ಟು ಕಿಡಿಯನ್ನು ಹಚ್ಚಿದೆ. ಈ ಹಿಂದೆ ಇವರ ತಂದೆ 2004 ಮತ್ತು 2009ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದಾಗಲೂ ತಿರುಪತಿಯಲ್ಲಿ ಕ್ರಿಶ್ಚಿಯನ್ನರಿಗೆ ಮುಕ್ತ ಸ್ವಾತಂತ್ರ್ಯವನ್ನು ಕೊಡಲಾಗಿತ್ತು. ಜಗನಮೋಹನ್ ರೆಡ್ಡಿ ಅವರು ಚುನಾವಣೆಗೂ ಮುನ್ನ ಜೆರುಸಲೇಂಗೆ ಭೇಟಿ ನೀಡಿದ್ದರು. 2009ರಲ್ಲಿ ಆಂಧ್ರವು ಜೆರುಸಲೇಂ ಯಾತ್ರೆಗೆ ಸಬ್ಸಿಡಿಯನ್ನೂ ಘೋಷಣೆ ಮಾಡಿತ್ತು.
ಈ ವಿವಾದ ಇದೇ ಮೊದಲಲ್ಲ, 2018ರಲ್ಲೂ ದೇವಾಲಯದ ಹಿರಿಯ ಅಧಿಕಾರಿಯೊಬ್ಬರು ಚರ್ಚ್ಗೆ ಭೇಟಿ ನೀಡುವ ವೀಡಿಯೋ ಎಲ್ಲೆಡೆ ಹಂಚಿಕೆಯಾಗಿತ್ತು. 1986ರಲ್ಲಿ ದೇಗುಲ ಆಡಳಿತ ಮಂಡಳಿಯು ಹಿಂದೂಯೇತರರಿಗೆ ಉದ್ಯೋಗ ಇಲ್ಲ ಎಂಬ ನಿರ್ಣಯವನ್ನು ಕೈಗೊಂಡಿತ್ತು. ಆದರೆ ಚರ್ಚ್ಗೆ ಭೇಟಿ ನೀಡಿದ್ದ ಮಹಿಳಾ ಅಧಿಕಾರಿಯನ್ನು 1989ರಲ್ಲಿ ನೇಮಕಗೊಳಿಸಲಾಗಿತ್ತು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
2007ರಲ್ಲಿ, ಟಿಟಿಡಿ ನಡೆಸುವ ಶಾಲಾ ಕಾಲೇಜುಗಳಲ್ಲಿ ಹಿಂದೂಯೇತರರನ್ನು ನೇಮಿಸಿಕೊಳ್ಳಬಾರದು ಎಂಬ ಆದೇಶವನ್ನು ಹೊರಡಿಸಲಾಗಿತ್ತು. ಆದೇಶದ ಹೊರತಾಗಿಯೂ ದೇಗುಲದ ವಿವಿಧ ಹುದ್ದೆಗಳಲ್ಲಿ 40 ಮಂದಿ ಹಿಂದೂಯೇತರರನ್ನು ನೇಮಕ ಮಾಡಿಕೊಳ್ಳಲಾಗಿತ್ತು.
2018ರಲ್ಲಿ ವೀಡಿಯೋ ವಿವಾದಕ್ಕೆ ಸಂಬಂಧಿಸಿದಂತೆ 44 ಮಂದಿ ಹಿಂದೂಯೇತರ ಉದ್ಯೋಗಿಗಳನ್ನು ಪತ್ತೆ ಹಚ್ಚಿ ದೇಗುಲದ ಧಾರ್ಮಿಕ ಕರ್ತವ್ಯದಿಂದ ತೆಗೆದು ಹಾಕಲಾಗಿತ್ತು. ಬಳಿಕ ಅವರಿಗೆ ಗಾರ್ಡನರ್, ಡ್ರೈವರ್ ಮುಂತಾದ ಇತರ ಕರ್ತವ್ಯಗಳನ್ನು ನೀಡಲಾಗಿತ್ತು. ಈ ನಿರ್ಧಾರವನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಲಾಗಿತ್ತು ಮತ್ತು 2018ರ ಫೆಬ್ರವರಿಯಲ್ಲಿ ಕೋರ್ಟ್ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ಈಗಲೂ ಮುಂದವರೆದಿದೆ.
ತಿರುಪತಿ ಬಸ್ ಟಿಕೆಟುಗಳಲ್ಲಿ ಜೆರುಸಲೇಂ ಜಾಹೀರಾತುಗಳು ಮೂಡಿಬಂದ ಹಿನ್ನಲೆಯಲ್ಲಿ ಜಗನಮೋಹನ್ ರೆಡ್ಡಿ ಮೇಲೆ ಅನೇಕ ಟೀಕೆಗಳು ವ್ಯಕ್ತವಾದವು. ಇದೀಗ ಡ್ಯಾಮೇಜ್ ಕಂಟ್ರೋಲ್ ಮಾಡುವ ಸಲುವಾಗಿ ಜಗನಮೋಹನ್ ರೆಡ್ಡಿಯವರ ಸರ್ಕಾರ ಹಿಂದೂಯೇತರರನ್ನು ಕೆಲಸದಿಂದ ತೆಗೆದು ಹಾಕುವ ಘೋಷಣೆ ಮಾಡಿದಂತೆ ಕಂಡು ಬರುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.