ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಯಂದು ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರಿಗೆ ವೀರ ಚಕ್ರವನ್ನು ಪ್ರದಾನ ಮಾಡಲಾಗುತ್ತಿದೆ.
ಈ ವರ್ಷದ ಫೆಬ್ರವರಿಯಲ್ಲಿ ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆದ ವೈಮಾನಿಕ ಮುಖಾಮುಖಿಯ ಸಂದರ್ಭದಲ್ಲಿ ಅಭಿನಂದನ್ ವರ್ತಮಾನ್ ಅವರು ತೋರಿದ ದಿಟ್ಟತನದಿಂದ ದೇಶವ್ಯಾಪಿಯಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಈ ಸಾಹಸಕ್ಕಾಗಿ ಅವರಿಗೆ ವೀರ ಚಕ್ರವನ್ನು ನೀಡಲು ಭಾರತ ಸರ್ಕಾರ ನಿರ್ಧರಿಸಿದೆ.
ಭಾರತೀಯ ವಾಯುಸೇನೆಯು ಬಾಲಕೋಟ್ ವೈಮಾನಿಕ ದಾಳಿಯನ್ನು ನಡೆಸಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಪಾಕಿಸ್ಥಾನ ತನ್ನ ಎಫ್-16 ಯುದ್ಧ ವಿಮಾನವನ್ನು ಭಾರತದ ವಾಯು ಗಡಿಯೊಳಗೆ ನುಸುಳಿಸಲು ಪ್ರಯತ್ನಿಸಿತ್ತು. ಈ ವೇಳೆ ಅಭಿನಂದನ್ ವರ್ತಮಾನ್ ಅವರು ತಮ್ಮ ಮಿಗ್ ವಿಮಾನದಲ್ಲಿ ಪಾಕ್ ಎಫೆ-16 ಅನ್ನು ಹೊಡೆದುರುಳಿಸಿದರು. ಬಳಿಕ ಅವರ ವಿಮಾನವೂ ಪತನಗೊಂಡು ಪ್ಯಾರಾಚೂಟ್ ಮೂಲಕ ಪಾಕ್ ಪ್ರದೇಶಕ್ಕೆ ಬಿದ್ದರು. ಆ ವೇಳೆ ಅವರನ್ನು ಪಾಕಿಗಳು ಬಂಧಿಸಿದರು. ಎರಡು ದಿನಗಳ ಬಳಿಕ ಭಾರತಕ್ಕೆ ಮರಳಿ ಕಳುಹಿಸಿದ್ದರು. ಈ ವೇಳೆ ಅಭಿನಂದನ್ ತೋರಿದ ದೃಢತೆ ಮತ್ತು ಧೈರ್ಯ ಇಡೀ ದೇಶವನ್ನೇ ರೋಮಾಂಚನಗೊಳಿಸಿತ್ತು.
ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ಗೆ ವೀರ ಚಕ್ರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂಬ ವಿಷಯವನ್ನು ಮೂಲಗಳು ದೃಢಪಡಿಸಿವೆ.
ಅತ್ಯದ್ಭುತ ಸಾಹಸವನ್ನು ತೋರಿಸುವ ಸೇನಾಪಡೆಗಳ ಯೋಧರಿಗೆ ವೀರ ಚಕ್ರವನ್ನು ನೀಡಿ ಪುರಸ್ಕರಿಸಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.