ಬೆಳ್ತಂಗಡಿ : ನಾಯಕನಾದವನಿಗೆ ಸಮಾಲೋಚನಾ, ಸಾಮರ್ಥ್ಯ, ಚೈತನ್ಯ ಬಲ ಬೇಕು. ಸಮಾಜದ ಪ್ರತಿಯೊಬ್ಬರ ಕಷ್ಟಸುಖಗಳನ್ನು ಅರಿತವನೇ ನಿಜವಾದ ನಾಯಕ ಎಂದು ನಾವೂರಿನ ವೈದ್ಯ ಡಾ| ಪ್ರದೀಪ ಹೇಳಿದರು.ಅವರು ಗುರುವಾರ ಬೆಳ್ತಂಗಡಿ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್ ಸಭಾ ಭವನದಲ್ಲಿ ಗುರುದೇವ ಪ್ರಥಮ ದರ್ಜೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿಗೆ ಸೇರುವುದು ಕೇವಲ ವಿದ್ಯಾರ್ಜನೆಗಲ್ಲ. ನಮ್ಮಲ್ಲಿರುವ ಪ್ರತಿಭೆಯನ್ನು ಪ್ರಕಟಿಸಲು, ನಮ್ಮ ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಲು. ನಾಯಕನಾಗಿ ಮೇಲೇರುವುದು ಮುಖ್ಯ ಅಲ್ಲ. ಅಲ್ಲಿಯೇ ಉಳಿಯುವುದು ಮುಖ್ಯ. ಎಲ್ಲ ಕೆಲಸ ಕಾರ್ಯಗಳನ್ನು ಮಾಡಿ ತಾನು ಮಾಡಿದ್ದಲ್ಲ ಎಂಬ ವಿನೀತ ಭಾವ ಪ್ರದರ್ಶಿಸುವವನು ಉತ್ತಮ ನಾಯಕನಾಗುತ್ತಾನೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಾಸಕ ಕೆ. ವಸಂತ ಬಂಗೇರ ಅವರು, ಗುರುದೇವ ಕಾಲೇಜು ಬಡವರಿಗೆ ಮತ್ತು ಮದ್ಯಮ ವರ್ಗದವರಿಗೆ ಉತ್ತಮ ಶಿಕ್ಷಣ ನೀಡಲು ಸಂಸ್ಥೆಯನ್ನು ಹುಟ್ಟು ಹಾಕಿದೆ ಹೊರತು ಯಾವುದೇ ಲಾಭದ ದೃಷ್ಟಿಯಿಂದ ಅಲ್ಲ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಚುನಾವಣೆಗಳು ಭ್ರಷ್ಟಾಚಾರದಿಂದ ಕೂಡಿದ್ದು ಇದನ್ನು ಅನುಸರಿಸಿ ಕೆಲವು ಕಾಲೇಜುಗಳಲ್ಲಿ ರಾಜಕೀಯ ಪ್ರವೇಶಿಸಿ ಚುನಾವಣೆಗಳು ನಡೆಯುತ್ತಿವೆ. ಆದರೆ ಗುರುದೇವ ಕಾಲೇಜಿನಲ್ಲಿ ಯಾವುದೇ ರಾಜಕೀಯ ಹಾಗೂ ಭ್ರಷ್ಟಾಚಾರಕ್ಕೆ ಅವಕಾಶ ನೀಡದೆ ವಿದ್ಯಾರ್ಥಿ ಸಂಘದ ಚುನಾವಣೆ ನಡೆಯುತ್ತಿದ್ದು ರಾಜ್ಯಕ್ಕೆ ಮಾದರಿಯಾಗಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಪೂರೈಸುವವರೆಗೆ ಉತ್ತಮ ಗುರಿಯನ್ನು ಹೊಂದಿ ಸಾಧಿಸಿ ತೋರಿಸಬೇಕು ಎಂದರು.
ಕಾಲೇಜಿನ ಟ್ರಸ್ಟಿ ಪಿತಾಂಬರ ಹೆರಾಜೆ, ಪದವಿ ಕಾಲೇಜು ವಿಭಾಗದ ವಿದ್ಯಾರ್ಥಿ ನಾಯಕ ವಿಜಿತ್ ವಿ. ಥೋಮಸ್, ಉಪನಾಯಕ ವಿನೋದರ, ಕಾರ್ಯದರ್ಶಿ ಗಾಯತ್ರಿ, ಜತೆ ಕಾರ್ಯದರ್ಶಿ ಇಸುರ, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ನಾಯಕ ಕೃತಿಕ್ ಪೂಜಾರಿ, ಉಪ ನಾಯಕ ಶ್ರೇಯಸ್, ಕಾರ್ಯದರ್ಶಿ ಅನುಷಾ ಆರ್., ಜತೆ ಕಾರ್ಯದರ್ಶಿ ಪ್ರತೀಕ್ಷಾ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಕಾಲೇಜಿನಲ್ಲಿ ಅತ್ಯುತ್ತಮ ಫಲಿತಾಂಶ ಬರಲು ಕಾರಣವಾದ ಉಪನ್ಯಾಸಕರುಗಳಿಗೆ ಅಭಿನಂದಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.