ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವ ಕೇಂದ್ರದ ನಿರ್ಧಾರವು ಸಂಭ್ರಮಾಚರಣೆಯ ವಿಷಯವಲ್ಲ, ಆದರೆ ನಿರ್ಧಾರ ತೃಪ್ತಿ ತಂದಿದೆ ಎಂದು ಭಾರತೀಯ ಜನ ಸಂಘ ಸಂಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಸೋದರಳಿಯ ನ್ಯಾಯಮೂರ್ತಿ ಚಿತ್ತತೋಶ್ ಮುಖರ್ಜಿ ಅವರು ಸೋಮವಾರ ಹೇಳಿದ್ದಾರೆ.
”ಇದು ಆಚರಣೆಯ ವಿಷಯವಲ್ಲ. ನಾವು ಅವರಿಗಾಗಿ (ಶ್ಯಾಮ್ ಪ್ರಸಾದ್ ಮುಖರ್ಜಿ) ದುಃಖಿಸುತ್ತಲೇ ಇದ್ದೇವೆ. ಅವರು ತಮ್ಮ ಜೀವನದ ಉತ್ತುಂಗದಲ್ಲಿ ನಿಧನರಾದರು” ಎಂದು ನ್ಯಾಯಮೂರ್ತಿ ಮುಖರ್ಜಿ ಹೇಳಿದ್ದಾರೆ.
ರಾಜಕಾರಣಿ, ವಕೀಲ ಮತ್ತು ಶಿಕ್ಷಣ ತಜ್ಞರಾಗಿದ್ದ ಶ್ಯಾಮಾ ಪ್ರಸಾದ್ ಮುಖರ್ಜಿ ಅವರು 1951 ರಲ್ಲಿ ಭಾರತೀಯ ಜನ ಸಂಘವನ್ನು ಸ್ಥಾಪಿಸಿದ್ದರು. 370 ನೇ ವಿಧಿಯನ್ನು ಅವರು ತೀವ್ರವಾಗಿ ವಿರೋಧಿಸಿದ್ದರು. ಭಾರತದ ಏಕತೆಗೆ ಧಕ್ಕೆ ಯಾಗುತ್ತಿದೆ, ಅದನ್ನು ರದ್ದುಪಡಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.
ಶ್ಯಾಮಾ ಪ್ರಸಾದ್ ಮುಖರ್ಜಿ ಅವರ ಕುಟುಂಬದ ಪ್ರಕಾರ, 370 ನೇ ವಿಧಿಯನ್ನು ರದ್ದುಪಡಿಸುವ ದಿನ ಯಾವಾಗ ಬರುತ್ತದೆ ಎಂಬ ಕನಸನ್ನು ನಿತ್ಯ ಅವರು ಕಾಣುತ್ತಿದ್ದರು.
1953 ರಲ್ಲಿ ಮುಖರ್ಜಿಯವರು ಕಾಶ್ಮೀರವನ್ನು ಪ್ರವೇಶಿಸುತ್ತಿದ್ದಂತೆ ಅವರನ್ನು ಜೈಲಿನಲ್ಲಿ ಬಂಧಿಸಲಾಯಿತು, ಬಳಿಕ ಅಲ್ಲೇ ಅವರು ನಿಧನರಾದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿತ್ತತೋಶ್ ಮುಖರ್ಜಿ, ” ಸರ್ಕಾರ ಇಂದು ಮಾಡಿದ ಸಾಧನೆಯಲ್ಲಿ ತೃಪ್ತಿ ಇದೆ” ಎಂದು ಹೇಳಿದ್ದಾರೆ.
“ಅವರು ಸಾಧಿಸಲು ಬಯಸಿದ್ದನ್ನು ಈಗ ಸಾಧಿಸಲಾಗಿದೆ ಎಂಬ ತೃಪ್ತಿ ನಮಗಿದೆ. ಇದು ನಮಗೆ ಆಚರಣೆಯ ವಿಷಯವಲ್ಲ. ಕನಿಷ್ಠ ಈಗಲಾದರೂ ಆಯಿತಲ್ಲ ಎಂಬ ಭಾವ” ಎಂದಿದ್ದಾರೆ.
ಚಿತ್ತತೋಶ್ ಮುಖರ್ಜಿಯವರು ಕೋಲ್ಕತ್ತಾ ಮತ್ತು ಬಾಂಬೆ ಹೈಕೋರ್ಟ್ ಗಳಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.