ಬರೇಲಿ: ಸಂಪ್ರದಾಯವನ್ನು ಮುಂದುವರೆಸುವ ಸದುದ್ದೇಶದೊಂದಿಗೆ ಉತ್ತರಪ್ರದೇಶದ ಮುಸ್ಲಿಂ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ಶಿವ ದೇಗುಲದಲ್ಲಿ ಪೂಜೆಯನ್ನು ನೆರವೇರಿಸಿದ್ದಾರೆ.
ಬರೇಲಿ ಜಿಲ್ಲೆಯ ಭಮೋರ ಪೊಲೀಸ್ ಠಾಣೆಯ ಸ್ಟೇಶನ್ ಹೌಸ್ ಆಫೀಸರ್ ಆಗಿರುವ 40 ವರ್ಷದ ಜಾವೆದ್ ಖಾನ್ ಅವರು ಅವರು, ಸಂಪ್ರದಾಯದಂತೆ ಸ್ಥಳೀಯ ಶಿವ ದೇಗುಲದಲ್ಲಿ ಪೂಜೆಯನ್ನು ನೆರೆವೇರಿಸಿದ್ದಾರೆ, ಶಿವಲಿಂಗಕ್ಕೆ ನೀರಿನ ಅಭಿಷೇಕವನ್ನು ಮಾಡಿದ್ದಾರೆ.
ಪ್ರತಿ ಸೋಮವಾರ ಭಕ್ತರಿಗಿಂತ ಮೊದಲು ಪೊಲೀಸ್ ಅಧಿಕಾರಿ ಬಂದು ಶಿವನಿಗೆ ಪೂಜೆ ಸಲ್ಲಿಸುವುದು ಇಲ್ಲಿನ ಪದ್ಧತಿ. ಪ್ರತಿವಾರ ಆನೊಲ ಸರ್ಕಲ್ ಆಫೀಸರ್ ಈ ಪದ್ಧತಿಯನ್ನು ನೆರವೇರಿಸುತ್ತಿದ್ದರು. ಆದರೆ ನಿನ್ನೆ ಅವರಿಗೆ ಬರಲಾಗದ ಹಿನ್ನಲೆಯಲ್ಲಿ ಪದ್ಧತಿ ಮುರಿಯಬಾರದೆಂದು ಖಾನ್ ಅವರು ಮುಂದೆ ನಿಂತು ಪೂಜೆ ನೆರವೇರಿಸಿದ್ದಾರೆ.
“ಖಾನ್ ಅವರಿಗೆ ಆಚರಣೆ ಮಾಡುವಂತೆ ಕೇಳಲು ಮೊದಲಿಗೆ ನಾನು ಹಿಂಜರಿದೆ, ಯಾಕೆಂದರೆ ಅವರ ಧರ್ಮವು ಅವರಿಗೆ ಪೂಜೆ ಸಲ್ಲಿಸಲು ಅನುಮತಿಸುವುದಿಲ್ಲ. ಆದರೆ, ಪ್ರಾರ್ಥನೆಯನ್ನು ಸಲ್ಲಿಸಲು ಅವರೇ ನಮ್ಮನ್ನು ಸಂಪರ್ಕಿಸಿದಾಗ ನಮಗೆ ಆಶ್ಚರ್ಯವಾಯಿತು. ನಾವೆಲ್ಲರೂ ತುಂಬಾ ಸಂತೋಷಪಟ್ಟೆವು. ಶಿವನು ನಿಷ್ಕಲ್ಮಶವಾದ ಹೃದಯದಿಂದ ಅರ್ಪಿಸಿದ ಪ್ರಾರ್ಥನೆಯನ್ನು ಸ್ವೀಕರಿಸುತ್ತಾನೆ. ಕೋಮು ಸೌಹಾರ್ದತೆಗೆ ಒಂದು ಪರಿಪೂರ್ಣ ಉದಾಹರಣೆಯನ್ನು ಕಣ್ಣಾರೆ ಕಂಡಿದ್ದಕ್ಕೆ ನನಗೆ ಸಂತೋಷವಾಗಿದೆ” ಎಂದು ದೇವಾಲಯದ ಅರ್ಚಕ ಪಂಡಿತ್ ಅಶೋಕ್ ಶರ್ಮಾ ಅವರು ಭಾವುಕರಾಗಿ ನುಡಿದಿದ್ದಾರೆ.
ಪೊಲೀಸ್ ಕರ್ತವ್ಯವನ್ನು ನಿರ್ವಹಣೆ ಮಾಡುವುದು ನನಗೆ ಎಲ್ಲದಕ್ಕಿಂತಲೂ ಮಿಗಿಲಾದ ಧರ್ಮ, ಪದ್ಧತಿಯಂತೆಯೇ ನಾನು ಶಿವ ಪೂಜೆಯನ್ನು ನೆರವೇರಿಸಿದ್ದೇನೆ ಎಂದು ಖಾನ್ ಹೇಳಿದ್ದಾರೆ.
“ಭಮೋರವನ್ನು ಕೋಮು ಸೂಕ್ಷ್ಮ ಪೊಲೀಸ್ ಠಾಣೆ ಎಂದು ಪರಿಗಣಿಸಲಾಗಿದೆ, ಆದರೆ ಜಾವೇದ್ ಖಾನ್ ಅವರು ಇಲ್ಲಿಗೆ ಬಂದಾಗಿನಿಂದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿದ್ದಾರೆ. ಈಗ ಅವರು ವೃತ್ತಿಪರ ಪೊಲೀಸ್ಗೆ ಒಂದು ಅತ್ಯುತ್ತಮ ಉದಾಹರಣೆಯನ್ನು ಪ್ರದರ್ಶಿಸಿದ್ದಾರೆ. ಅವರು ಕರ್ತವ್ಯಕ್ಕೆ ಮೊದಲ ಆದ್ಯತೆಯನ್ನು ನೀಡಿದ್ದಾರೆ” ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಅಪರಾಧ) ರಮೇಶ್ ಕುಮಾರ್ ಭಾರ್ತಿಯಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.