ನವದೆಹಲಿ: ಜಮ್ಮು ಕಾಶ್ಮೀರದ ಬಗ್ಗೆ ತೆಗೆದುಕೊಳ್ಳಲಾದ ಐತಿಹಾಸಿಕ ನಿರ್ಧಾರ ಬಗ್ಗೆ ಆಡಳಿತರೂಢ ಎನ್ಡಿಎ ಸಂಭ್ರಮಾಚರಣೆಯಲ್ಲಿ ತೊಡಗಿದರೆ, ಇನ್ನೊಂದು ಕಡೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ನಿರ್ಧಾರದ ವಿಷಯದಲ್ಲಿ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಲಾಗದೆ ತೊಳಲಾಡುತ್ತಿದೆ. ಅದರ ಕೆಲ ನಾಯಕರು ನಿರ್ಧಾರವನ್ನು ಬೆಂಬಲಿಸಿದರೆ, ಇನ್ನೂ ಕೆಲವರು ವಿರೋಧಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರು, ಈ ದಿನ ಭಾರತದ ಸಾಂವಿಧಾನಿಕ ಇತಿಹಾಸದಲ್ಲೇ ಕೆಟ್ಟ ದಿನ ಎಂದು ಘೋಷಿಸಿದ್ದಾರೆ. ಈ ವಿಷಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ನಿಂತು ಹೋರಾಡಬೇಕು ಎಂದು ಕರೆ ನೀಡಿದ್ದಾರೆ.
ಕಾಶ್ಮೀರಿಗ ಮತ್ತು ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರೂ, 370 ನೇ ವಿಧಿಯನ್ನು ರದ್ದುಪಡಿಸಿರುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿದ್ದಾರೆ. ಸಂವಿಧಾನದ ಹತ್ಯೆ ಎಂದು ಇದನ್ನು ಬಣ್ಣಿಸಿದ್ದಾರೆ.
ಆದರೆ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯ ದೀಪೇಂದರ್ ಹೂಡಾ ಅವರು, ಸರ್ಕಾರದ ನಿರ್ಧಾರದ ಪರವಾಗಿ ಟ್ವಿಟ್ ಮಾಡಿದ್ದಾರೆ. 21ನೇ ಶತಮಾನದಲ್ಲಿ 370ನೇ ವಿಧಿ ಪ್ರಸ್ತುತತೆಯನ್ನು ಕಳೆದುಕೊಂಡಿದೆ ಮತ್ತು ಅದನ್ನು ರದ್ದುಪಡಿಸಲೇ ಬೇಕಾಗಿತ್ತು ಎಂದಿದ್ದಾರೆ.
“210 ನೇ ಶತಮಾನದಲ್ಲಿ 370 ನೇ ವಿಧಿಗೆ ಯಾವುದೇ ಪ್ರಸ್ತುತತೆ ಇಲ್ಲ ಮತ್ತು ಅದನ್ನು ಹಿಂತೆಗೆದುಕೊಳ್ಳಬೇಕು ಎಂಬುದು ನನ್ನ ಅಭಿಪ್ರಾಯ. ಇದು ದೇಶದ ಏಕತೆ ಮತ್ತು ಅವಿಭಾಜ್ಯ ಅಂಗವಾಗಿರುವ ಜಮ್ಮು ಮತ್ತು ಕಾಶ್ಮೀರದ ಜನರ ಹಿತದೃಷ್ಟಿಯಿಂದಲೂ ಒಳ್ಳೆಯ ನಿರ್ಧಾರ ಆಗಿದೆ. ಆದರೆ ಶಾಂತಿ ಮತ್ತು ನಂಬಿಕೆಯ ವಾತಾವರಣದಲ್ಲಿ ಇದನ್ನು ಕಾರ್ಯಗತಗೊಳಿಸುವುದು ಪ್ರಸ್ತುತ ಸರ್ಕಾರದ ಜವಾಬ್ದಾರಿ “ಎಂದು ಹೂಡಾ ಟ್ವೀಟ್ ಮಾಡಿದ್ದಾರೆ.
ಮತ್ತೋರ್ವ ಕಾಂಗ್ರೆಸ್ ಮುಖಂಡ, ರಾಯ್ ಬರೇಲಿ ಸಾದರ್ ಶಾಸಕ ಅದಿತಿ ಸಿಂಗ್ ಅವರು ಕೂಡ ಸರ್ಕಾರದ ನಿರ್ಧಾರದ ಪರವಾಗಿ ಟ್ವಿಟ್ ಮಾಡಿದ್ದಾರೆ.
ಒಟ್ಟಿನಲ್ಲಿ 370ನೇ ವಿಧಿಯನ್ನು ರದ್ದುಪಡಿಸಿದ ಬಗೆಗಿನ ಕಾಂಗ್ರೆಸ್ ನಿಲುವು ಗೊಂದಲಮಯವಾಗಿದೆ. ಪಕ್ಷದ ಅಧಿನಾಯಕರಾದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇದುವರೆಗೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ. ದೇಶದ ಜನರ ಭಾವನೆ ಸದ್ಯಕ್ಕೆ ಸರ್ಕಾರದ ಪರವಾಗಿ ಇರುವುದರಿಂದ ಈ ಸಮಯದಲ್ಲಿ ಯಾವ ಹೇಳಿಕೆ ನೀಡಿದರೂ ಅದು ಬ್ಯಾಕ್ ಫಯರ್ ಆಗಬಹುದು ಎಂಬ ಆತಂಕ ಪಕ್ಷಕ್ಕೆ ಇದ್ದಂತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.