ನವದೆಹಲಿ: ರೈತ ಕಲ್ಯಾಣಕ್ಕೆ ಬದ್ಧತೆಯನ್ನು ತೋರಿಸಿರುವ ನರೇಂದ್ರ ಮೋದಿ ಸರ್ಕಾರವು ತನ್ನ ಎರಡನೇಯ ಅವಧಿಯಲ್ಲೂ ಕೃಷಿ ಪರಿವರ್ತನೆಗಾಗಿ ಕೆಲಸ ಮಾಡುತ್ತಿದೆ. 2022 ರ ಹೊತ್ತಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಯತ್ನದಲ್ಲಿರುವ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು, ಗ್ರಾಮೀಣ ಭಾರತದಲ್ಲಿ ಕೃಷಿ ಚಟುವಟಿಕೆಗಳನ್ನು ಆಧುನೀಕರಿಸಲು ಮತ್ತು ಸಂಘಟಿಸಲು ಡಿಜಿಟಲ್ ತಂತ್ರಜ್ಞಾನವನ್ನು ಬಳಸಲು ಮುಂದಾಗಿದೆ.
ಕೃಷಿ ಯೋಜನೆಗಳ ಯಶಸ್ಸಿಗೆ ಕೃತಕ ಬುದ್ಧಿಮತ್ತೆ, ದೊಡ್ಡ ದತ್ತಾಂಶ ವಿಶ್ಲೇಷಣೆ, ಬ್ಲಾಕ್ಚೈನ್ ತಂತ್ರಜ್ಞಾನ ಮತ್ತು ಅಂತರ್ಜಾಲದ ವಸ್ತು (ಐಒಟಿ)ಗಳು ಮುಂತಾದ ತಂತ್ರಜ್ಞಾನಗಳನ್ನು ಅಳವಡಿಸುವುದು ಮುಖ್ಯ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರಾಜ್ಯಸಭೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಿದ್ದಾರೆ.
AI, ಬಿಗ್ ಡಾಟಾ ಅನಾಲಿಟಿಕ್ಸ್, ಬ್ಲಾಕ್ಚೈನ್ ಟೆಕ್ನಾಲಜಿ, ಇಂಟರ್ನೆಟ್ ಮುಂತಾದ ಡಿಜಿಟಲ್ ತಂತ್ರಜ್ಞಾನವು ಗ್ರಾಮೀಣ ಭಾರತವನ್ನು ಮತ್ತು ಅದರ ಕೃಷಿ ಚಟುವಟಿಕೆಗಳನ್ನು ಆಧುನೀಕರಿಸುವಲ್ಲಿ ಮತ್ತು ಸಂಘಟಿಸುವಲ್ಲಿ ಪರಿವರ್ತನಾದಾಯಕ ಪಾತ್ರವನ್ನು ವಹಿಸುತ್ತದೆ ಎಂದು ಸಚಿವರು ಅಭಿಪ್ರಾಯಿಸಿದ್ದಾರೆ.
ರೈತರ ಕಲ್ಯಾಣಕ್ಕಾಗಿ, ರೈತರ ಆದಾಯವನ್ನು ದ್ವಿಗುಣಗೊಳಿಸಲು ತೊಡಕಾಗುವ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು 2022 ರ ಹೊತ್ತಿಗೆ ಆ ಗುರಿಯನ್ನು ಸಾಧಿಸುವ ಕಾರ್ಯತಂತ್ರವನ್ನು ಶಿಫಾರಸು ಮಾಡಲು ಸರ್ಕಾರವು ಅಂತರ್ ಸಚಿವಾಲಯದ ಸಮಿತಿಯನ್ನು ರಚಿಸಿದೆ.
ಸಮಿತಿಯು ಡಿಜಿಟಲ್ ತಂತ್ರಜ್ಞಾನದ ಪಾತ್ರವನ್ನು ಶ್ಲಾಘಿಸಿದೆ ಮತ್ತು ಕೃಷಿಯ ಬಗ್ಗೆ ಅಮೂಲ್ಯವಾದ ಮಾಹಿತಿಯನ್ನು ಪ್ರಸಾರ ಮಾಡಲು ಮೊಬೈಲ್ ಅಪ್ಲಿಕೇಶನ್ಗಳ ಅಭಿವೃದ್ಧಿಗೆ ಶಿಫಾರಸು ಮಾಡಿದೆ. ಎಸ್ಎಂಎಸ್ ಮತ್ತು ಆನ್ಲೈನ್ ಪೋರ್ಟಲ್ ಮೂಲಕ ಬೆಳೆ ಸಂಬಂಧಿತ ಸಲಹೆಗಳನ್ನು ಕಳುಹಿಸುವುದು, ಆನ್ಲೈನ್ ವ್ಯಾಪಾರ ವೇದಿಕೆಯನ್ನು ಪ್ರಾರಂಭಿಸುವುದು, ವೈಜ್ಞಾನಿಕ ಶೇಖರಣಾ ಸಾಮರ್ಥ್ಯವನ್ನು ಸುಧಾರಿಸುವುದು ಅಥವಾ ರಚಿಸುವುದು, ಮಣ್ಣಿನ ಆರೋಗ್ಯ ಕಾರ್ಡ್ ಪರಿಚಯಿಸುವುದು, ಯೋಜನೆ ಮತ್ತು ಸಬ್ಸಿಡಿಗಳನ್ನು ಒದಗಿಸುವುದು ಮುಂತಾದ ಕಾರ್ಯಗಳಿಗೆ ಆ್ಯಪ್ ಅಭಿವೃದ್ಧಿಪಡಿಸುವ ಬಗ್ಗೆ ಸಲಹೆಯನ್ನು ನೀಡಿದೆ.
“ಭಾರತೀಯ ಕೃಷಿ ಮಂಡಳಿ (ಐಸಿಎಆರ್) ಯು, ಕೃಷಿ ವಿಶ್ವವಿದ್ಯಾಲಯಗಳು ಮತ್ತು“ ಕೃಷಿ ವಿಜ್ಞಾನ ಕೇಂದ್ರ ”ಅಭಿವೃದ್ಧಿಪಡಿಸಿದ 100 ಕ್ಕೂ ಹೆಚ್ಚು ಮೊಬೈಲ್ ಅಪ್ಲಿಕೇಶನ್ಗಳನ್ನು ಸಂಗ್ರಹಿಸಿ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ” ಎಂದು ರಾಜ್ಯಸಭೆಗೆ ನೀಡಿದ ಮಾಹಿತಿಯಲ್ಲಿ ತಿಳಿಸಲಾಗಿದೆ. ಅಭಿವೃದ್ಧಿಪಡಿಸಿದ ಈ ಮೊಬೈಲ್ ಅಪ್ಲಿಕೇಶನ್ಗಳು ರೈತರಿಗೆ ಅಮೂಲ್ಯವಾದ ಮಾಹಿತಿಯನ್ನು ನೀಡುತ್ತವೆ.
ಅಲ್ಲದೇ, “ಕೃಷಿ ಉತ್ಪಾದನೆ ಮುನ್ಸೂಚನೆ, ಕೃಷಿ-ಹವಾಮಾನ ಮತ್ತು ಭೂ-ಆಧಾರಿತ ಅವಲೋಕನಗಳು, ತೋಟಗಾರಿಕೆ ಮೌಲ್ಯಮಾಪನ, ಮತ್ತು ನಿರ್ವಹಣೆ, ಬರ, ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ ಮತ್ತು ಬೆಳೆ ವಿಮೆಯಂತಹ ವಿವಿಧ ಕಾರ್ಯಕ್ರಮಗಳಿಗೆ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
ಕೃಷಿ ಸಮುದಾಯದಲ್ಲಿ ತಂತ್ರಜ್ಞಾನಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಸರ್ಕಾರವು ಜಿಲ್ಲಾ ಮಟ್ಟದಲ್ಲಿ 713 ‘ಕೃಷಿ ವಿಕಾಸ್ ಕೇಂದ್ರ’ ಮತ್ತು 684 ಕೃಷಿ ತಂತ್ರಜ್ಞಾನ ನಿರ್ವಹಣಾ ಏಜೆನ್ಸಿಗಳನ್ನು ಸ್ಥಾಪಿಸಿದೆ.
ಈ ಹೊಸ ಕಾರ್ಯಕ್ರಮಗಳೊಂದಿಗೆ, ಕೇಂದ್ರೀಕೃತ ಪ್ರಚಾರ ಅಭಿಯಾನಗಳು, ಕಿಸಾನ್ ಕಾಲ್ ಸೆಂಟರ್, ಕೃಷಿ-ಚಿಕಿತ್ಸಾಲಯಗಳು ಮತ್ತು ಉದ್ಯಮಿಗಳ ಕೃಷಿ-ವ್ಯಾಪಾರ ಕೇಂದ್ರಗಳು, ಕೃಷಿ ಮೇಳಗಳು ಮತ್ತು ಪ್ರದರ್ಶನ ಮತ್ತು ಕಿಸಾನ್ ಪೋರ್ಟಲ್ ಮೂಲಕ ರೈತರಿಗೆ ಮಾಹಿತಿಯನ್ನು ನೀಡಲಾಗುತ್ತದೆ ಎಂದು ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.