ನವದೆಹಲಿ: ಭಾರತೀಯ ರೈಲ್ವೆಯ ಮಹತ್ವಕಾಂಕ್ಷೆಯ ವಂದೇ ಭಾರತ್ ಎಕ್ಸ್ಪ್ರೆಸ್ ಸಂಪೂರ್ಣ ನಿಖರತೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಕೇವಲ 12 ರಿಂದ 15 ತಿಂಗಳುಗಳಲ್ಲಿ ಅದರ ಉತ್ಪಾದನೆಗೆ ತಗುಲಿದ ವೆಚ್ಚವನ್ನು ಮರಳಿಪಡೆಯುವ ನಿರೀಕ್ಷೆ ಇದೆ ಎಂಬ ಆಶಯವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಈ ರೈಲಿನ ಪ್ರಸ್ತುತ ಗಳಿಕೆಯು ತಿಂಗಳಿಗೆ 7 ಕೋಟಿ ರೂ.ಆಗಿದ್ದು, ಇದರಲ್ಲಿ ಲಭ್ಯವಿರುವ ಎಲ್ಲಾ ಆಸನಗಳನ್ನು ಪ್ರಯಾಣಿಕರು ಮುಂಗಡವಾಗಿ ಕಾಯ್ದಿರಿಸುತ್ತಿದ್ದಾರೆ. ರೈಲ್ವೆ ಮಂಡಳಿ ಸದಸ್ಯ ರಾಜೇಶ್ ಅಗರ್ವಾಲ್ ಅವರ ಪ್ರಕಾರ, ಭಾರತೀಯ ರೈಲ್ವೆಯು ಕೇವಲ ಒಂದು ವರ್ಷದಲ್ಲಿ ‘ವಂದೇ ಭಾರತ್ ಎಕ್ಸ್ಪ್ರೆಸ್’ ರೈಲು ತಯಾರಿಕೆಗೆ ತಗುಲಿದ ಸುಮಾರು 100 ಕೋಟಿ ರೂ.ಗಳ ವೆಚ್ಚವನ್ನು ಮರಳಿ ಪಡೆಯುವ ವಿಶ್ವಾಸವನ್ನು ಹೊಂದಿದೆ. ಈ ರೈಲಿಗೆ ಹೆಚ್ಚುತ್ತಿರುವ ಬೇಡಿಕೆಗೆ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ.
ರೈಲಿನಲ್ಲಿ ಯಾವುದೇ ರಿಯಾಯಿತಿಯನ್ನು ನೀಡಲಾಗುತ್ತಿಲ್ಲ ಎಂಬುದು ಕೂಡ ಇದರ ಆದಾಯ ಹೆಚ್ಚಾಗಲು ಕಾರಣವಾಗಿದೆ ಮತ್ತು ಇತರ ಪ್ರೀಮಿಯಂ ರೈಲುಗಳಿಗೆ ಹೋಲಿಸಿದರೆ ಈ ರೈಲಿನ ದರ ಸ್ವಲ್ಪ ಹೆಚ್ಚಾಗಿದೆ. ಈ ಹಿಂದೆ ರೈಲುಗಳಲ್ಲಿ ಪ್ರಯಾಣಿಸದ ಜನರನ್ನೂ ಕೂಡ ಈ ಸೆಮಿ ಹೈಸ್ಪೀಡ್ ರೈಲು ಆಕರ್ಷಿಸುತ್ತಿದೆ ಎಂದು ಅಗರ್ವಾಲ್ ಹೇಳಿದ್ದಾರೆ.
ಪ್ರಸ್ತುತ, ವಂದೇ ಭಾರತ್ ಎಕ್ಸ್ಪ್ರೆಸ್ ನವದೆಹಲಿ ಮತ್ತು ವಾರಣಾಸಿಯನ್ನು ವಾರಕ್ಕೆ ಐದು ದಿನ ಸಂಪರ್ಕಿಸುತ್ತದೆ. ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಈಗಾಗಲೇ ಎರಡನೇ ಟ್ರೈನ್ 18 ಅನ್ನು ಭಾರತೀಯ ರೈಲ್ವೆಗೆ ಪೂರೈಕೆ ಮಾಡಿದೆ ಎಂದೂ ವರದಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.