ಬೆಳ್ತಂಗಡಿ : ಸಮಾಜದಲ್ಲಿ ಯುವಜನತೆ ಅನೇಕ ರೀತಿಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಬಾಲ್ಯದಲ್ಲಿಯೇ ಅವರಿಗೆ ಉತ್ತಮ ಶಿಕ್ಷಣ ನೀಡಿ ದಾರಿ ತಪ್ಪದಂತೆ ಜಾಗೃತೆ ವಹಿಸುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು.
ಅವರು ಶುಕ್ರವಾರ ಲಾಲ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಶ್ರೀ ಧ. ಗ್ರಾ. ಯೋಜನೆ ಬೆಳ್ತಂಗಡಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಗ್ರಾ. ಪಂ. ಲಾಲ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಾದಕ ವಸ್ತು ವಿರುದ್ದ ಜಾಗೃತಿ ಹಾಗೂ ಅಂತರಾಷ್ಟ್ರೀಯ ಮಾದಕ ಪದಾರ್ಥ ಸೇವನೆ ನಿಷೇಧ ದಿನ ಉದ್ಘಾಟಿಸಿ ಮಾತನಾಡಿದರು.ಶಾಲಾ ಕಾಲೇಜುಗಳ ಬಳಿ ಮಾದಕ ವಸ್ತುಗಳ ಮಾರಾಟವಾಗುತ್ತಿದೆ. ಯುವ ಜನತೆಗೆ ಸರಿಯಾದ ಮಾರ್ಗದರ್ಶನ ನೀಡದೇ ಇರುವುದು ಇಂದು ಯುವ ಜನತೆ ದುಶ್ಚಟಕ್ಕೆ ಬಲಿಯಾಗಲು ಕಾರಣ. ಪೋಷಕರು ತಮ್ಮ ಮಕ್ಕಳಿಗೆ ಬಾಲ್ಯದಲ್ಲಿಯೇ ದುಶ್ಚಟಕ್ಕೆ ಬಲಿಯಾಗದಂತೆ ನೋಡಿಕೊಳ್ಳುವ ಅಗತ್ಯತೆಯಿದೆ ಎಂದರು.
ಇದೇ ಸಂದರ್ಭ ಶಾಸಕರಿಗೆ ಜನಜಾಗೃತಿ ವೇದಿಕೆ ವತಿಯಿಂದ ಮನವಿ ನೀಡಿದರು. ಇದಕ್ಕುತ್ತರಿದ ಶಾಸಕರು ಸರಕಾರದಿಂದ ಯಾವುದೇ ಹೊಸ ಮದ್ಯದಂಗಡಿಗಳಿಗೆ ಪರವಾನಿಗೆ ನೀಡುತ್ತಿಲ್ಲ. ಅಬಕಾರಿ ಇಲಾಖೆ ಹಾಗೂ ಪೋಲಿಸ್ ಇಲಾಖೆಯವರು ಅನಧಿಕೃತವಾಗಿ ಮದ್ಯ ಮಾರಾಟ ಮಾಡುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಕಾರ್ಯದರ್ಶಿ ವಿವೇಕ್ ವಿನ್ಸೆಂಟ್ ಪಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಜನಜಾಗೃತಿ ವೇದಿಕೆಯಿಂದ ರಾಜ್ಯಾದ್ಯಂತ ಅಂತರಾಷ್ಟ್ರೀಯ ಮಾದಕ ಪದಾರ್ಥ ಸೇವನೆ ನಿಷೇಧ ದಿನವನ್ನು ೧೧೨ ಕಡೆಗಳಲ್ಲಿ ಮಾಡುತ್ತಿದ್ದು 1 ಲಕ್ಷಕ್ಕೂ ಅಧಿಕ ಸ್ವಯಂಸೇವಕರಿಗೆ ತರಬೇತು ನೀಡಲಾಗುತ್ತಿದೆ. ರಾಜ್ಯದಲ್ಲಿ 6.5ಕೋಟಿ ಜನಸಂಖ್ಯೆಯಲ್ಲಿ 1.75 ಕೋಟಿ ಜನ ದುಶ್ಚಟಕ್ಕೆ ಬಲಿಯಾಗಿದ್ದಾರೆ. ಇಂದು ಪ್ರತಿಷ್ಠಿತ ಕಾಲೇಜು ಕ್ಯಾಂಪಸ್ ಗಳಲ್ಲಿ ಡ್ರಗ್ ಮಾರಾಟ ಹೆಚ್ಚಾಗುತ್ತಿದೆ. ಅಲ್ಲದೆ ಅಮಲು ಮಿಶ್ರಿತ ಮಾತ್ರೆಗಳು ರಾಜರೋಷವಾಗಿ ಮಾರಾಟವಾಗುತ್ತಿರುವುದೇ ಇಂದು ಯುವ ಜನತೆ ದುಶ್ಚಟಕ್ಕೆ ಬಲಿಯಾಗಲು ಕಾರಣ. ದೇಶದಾಧ್ಯಂತ ಪ್ರತೀ ವರ್ಷ ಸಿಗರೇಟ್ ಸೇವನೆಯಿಂದ 10 ಲಕ್ಷ ಜನ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕುವ ಅಗತ್ಯವಿದೆ ಎಂದರು.
ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಕೆ ವಸಂತ ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮಾಡಿಸುವ ಭಿತ್ತಿ ಪತ್ರವನ್ನು ಬೆಳ್ತಂಗಡಿ ವೃತ್ತ ನಿರೀಕ್ಷಕ ಬಿ. ಆರ್. ಲಿಂಗಪ್ಪ ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಯೋಜನೆಯ ತಾಲೂಕು ಯೋಜನಾಧಿಕಾರಿ ರೂಪಾ ಜೈನ್, ತಾ. ಪಂ. ಸಹಾಯಕ ಲೆಕ್ಕಾಧಿಕಾರಿ ರಾಜಶೇಖರ್, ಜನಜಾಗೃತಿ ವೇದಿಕೆ ನಿಕಟಪೂರ್ವಾಧ್ಯಕ್ಷರುಗಳಾದ ಅಡೂರು ವೆಂಕಟ್ರಾಯ, ಬಾಲಕೃಷ್ಣ ಶೆಟ್ಟಿ ಸವಣಾಲು, ತಿಮ್ಮಪ್ಪ ಗೌಡ ಬೆಳಾಲು, ಲಾಲ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ನೊಚ್ಚ ಉಪಸ್ಥಿತರಿದ್ದರು.
ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಕಿಶೋರ್ ಹೆಗ್ಡೆ ಸ್ವಾಗತಿಸಿದರು. ಶ್ರೀ ಧ. ಗ್ರಾ. ಯೋಜನೆಯ ಕೃಷಿ ಅಧಿಕಾರಿ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಯೋಜನೆಯ ಮೇಲ್ವಚಾರಕ ಸುರೇಶ್ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.