ನವದೆಹಲಿ: ದೇಶಾದ್ಯಂತ ಸಾರ್ವತ್ರಿಕ ಚುನಾವಣೆ ನಡೆಯುತ್ತಿದೆ. ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾದ ಚುನಾವಣೆಗಳ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆಯುವುದು ಸರ್ವೇ ಸಾಮಾನ್ಯ. ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಿರಂತರವಾಗಿ ಹೋರಾಡುತ್ತಿರುವ ಸೇನಾಪಡೆಗಳು ಪ್ರಸ್ತುತ ಚುನಾವಣೆ ಪ್ರಕ್ರಿಯೆಯನ್ನು ಸುಲಲಿತವಾಗಿ ನಡೆಯುವಂತೆ ಮಾಡಲು ಅವಿರತ ಪರಿಶ್ರಮಪಡುತ್ತಿವೆ. ಸಿಆರ್ಪಿಎಫ್ ಯೋಧರೊಬ್ಬರ ಸಮಯ ಪ್ರಜ್ಞೆ ಮತ್ತು ಎಚ್ಚರಿಕೆಯ ಕಾರಣದಿಂದಾಗಿ ಚುನಾವಣಾ ಅಧಿಕಾರಿಯೊಬ್ಬರ ಪ್ರಾಣ ಉಳಿದುಕೊಂಡಿದೆ.
ಬೆಳಗ್ಗೆ 9 ಗಂಟೆಗೆ ಜಮ್ಮು ಕಾಶ್ಮೀರದ ಬೂತ್ ನಂಬರ್ 13 ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚುನಾವಣಾ ಅಧಿಕಾರಿಯೊಬ್ಬರು ಹೃದಯಾಘಾತಕ್ಕೆ ಒಳಗಾಗಿದ್ದರು. ಅಲ್ಲೇ ಕಾರ್ಯ ನಿರ್ವಹಿಸುತ್ತಿದ್ದ ಸಿಆರ್ಪಿಎಫ್ ಯೋಧ ತಕ್ಷಣವೇ ಜಾಗೃತಗೊಂಡು ತನ್ನ ಯುನಿಟ್ನಲ್ಲಿ ಇದ್ದ ವೈದ್ಯರ ಸಲಹೆಯನ್ನು ಫೋನ್ ಮೂಲಕ ಪಡೆದುಕೊಂಡು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಅಧಿಕಾರಿಯ ಪ್ರಾಣವನ್ನು ಉಳಿಸಿದ್ದಾರೆ.
ಸಿಆರ್ಪಿಎಫ್ ಯೋಧ ಸುರಿಂದರ್ ಕುಮಾರ್ ಅವರು, ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿ ಹಸ್ಸನ್ ಉಲ್ ಹಕ್ ಅವರು ಹೃದಯಾಘಾತಕ್ಕೀಡಾಗಿದ್ದನ್ನು ಗಮನಿಸಿದರು. ತಕ್ಷಣವೇ ತನ್ನ ಸುನೀಮ್ ಯೂನಿಟ್ನಲ್ಲಿದ್ದ ಡಾಕ್ಟರ್ ಅವರಿಗೆ ಕರೆಯನ್ನು ಮಾಡಿ, ತಕ್ಷಣಕ್ಕೆ ಅನುಸರಿಸಬೇಕಾದ ಕ್ರಮಗಳೇನು ಎಂಬುದನ್ನು ವಿಚಾರಿಸಿದ್ದಾರೆ. ವೈದ್ಯರು ತಿಳಿಸಿದ ಸಲಹೆಯಂತೆ 30 ಬಾರಿ ಕಂಪ್ರೆಷನ್ಸ್ ಮಾಡಿದ್ದಾರೆ ಮತ್ತು ಬಾಯಿಂದ ಬಾಯಿಗೆ ಉಸಿರನ್ನು ನೀಡಿದ್ದಾರೆ. ಆ್ಯಂಬುಲೆನ್ಸ್ ಬರಲು 50 ನಿಮಿಷಗಳು ತಗುಲಿತ್ತು. ಆದರೆ ಸುರಿಂದರ್ ಅವರ ಸಮಯ ಪ್ರಜ್ಞೆಯಿಂದಾಗಿ ಹಕ್ ಅವರ ಜೀವ ಉಳಿದಿದೆ.
ಸುರೇಂದರ್ ಅವರು ಸನ್ನಿವೇಶವನ್ನು ಅತ್ಯಂತ ಜಾಣತನದಿಂದ ನಿಭಾಯಿಸಿದರು ಮತ್ತು ನನ್ನ ಸಲಹೆಯನ್ನು ಅತ್ಯಂತ ಸೂಕ್ಷ್ಮವಾಗಿ ಅನುಸರಿಸಿದರು. ಇದರಿಂದಾಗಿ ರೋಗಿಯ ಜೀವ ಉಳಿಯಿತು ಎಂದು ಡಾಕ್ಟರ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.