News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗಾಂಧೀಜಿ ಮತ್ತು ಸಂಘದ ಸಂಬಂಧದ ಬಗ್ಗೆ ತಿಳಿಯದೆ ಪ್ರತಿಕ್ರಿಯಿಸುವುದು ಸತ್ಯಕ್ಕೆ ಹೊಡೆದಂತೆ

ಚುನಾವಣೆಯ ಶಂಖನಾದ ಮೊಳಗಿದೆ. ಎಲ್ಲಾ ಪಕ್ಷಗಳು ತಮ್ಮ ತಮ್ಮ ಸಂಸ್ಕೃತಿ ಮತ್ತು ಪರಂಪರೆಯ ಅನುಸಾರ ಚುನಾವಣಾ ಭಾಷಣವನ್ನು ನೀಡುತ್ತಿವೆ. ಒಬ್ಬ ನೇತಾರನಂತೂ, ಈ ಚುನಾವಣೆಯಲ್ಲಿ ಗಾಂಧಿ ಮತ್ತು ಗೋಡ್ಸೆಯ ನಡುವೆ ಆಯ್ಕೆ ಮಾಡಬೇಕಾಗಿದೆ ಎಂದಿದ್ದಾರೆ. ಒಂದು ಮಾತನ್ನಂತು ನಾನು ಗಮನಿಸಿದ್ದೇನೆ, ಗಾಂಧೀಜಿಯವರ ಅಸಲಿ ಅನುಯಾಯಿಗಳಾದವರು ತಮ್ಮ ಆಚರಣೆಗೆ ಹೆಚ್ಚಿನ ಧ್ಯಾನ ನೀಡುತ್ತಾರೆ, ಅವರು ಯಾವತ್ತೂ ಗೋಡ್ಸೆಯ ಹೆಸರನ್ನೂ ಎತ್ತುವುದಿಲ್ಲ. ಸಂಘದಲ್ಲೂ ಗಾಂಧೀಜಿಯವರ ಬಗ್ಗೆ ಅನೇಕ ಬಾರಿ ಚರ್ಚೆಗಳಾಗುವುದನ್ನು ನೋಡಿದ್ದೇನೆ, ಆದರೆ ಗೋಡ್ಸೆಯ ಬಗ್ಗೆ ಚರ್ಚೆಗಳಾಗುವುದನ್ನು ನಾನು ಎಂದೂ ಕೇಳಿಲ್ಲ. ಆದರೆ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಗಾಂಧೀಜಿಯವರ ಹೆಸರನ್ನು ಬಳಕೆ ಮಾಡಲು ಇಚ್ಛಿಸುವವರು, ಗೋಡ್ಸೆಯ ಹೆಸರನ್ನು ಪದೇ ಪದೇ ಹೇಳುತ್ತಿರುತ್ತಾರೆ. ಆದರೆ ಇಂತಹ ವ್ಯಕ್ತಿಗಳ ಆಚರಣೆ ಅಥವಾ ನೀತಿ ನಿಯಮಗಳಲ್ಲಿ ಗಾಂಧೀಜಿಯ ವಿಚಾರಧಾರೆಗಳು ಕಾಣಿಸುವುದೇ ಇಲ್ಲ. ಅಸತ್ಯ ಮತ್ತು ಹಿಂಸಾಚಾರದಲ್ಲಿ ಆಶ್ರಯವನ್ನು ಪಡೆದುಕೊಂಡಿರುವವರು, ಸ್ವಾರ್ಥ ರಾಜಕೀಯ ಲಾಭಕ್ಕಾಗಿ ಗಾಂಧೀಜಿಯವರ ಹೆಸರನ್ನು ಬಳಸುತ್ತಾರೆ.

ಸಂಘದ ಬಗೆಗಿನ ಹೆಚ್ಚಿನ ವಿಷಯಗಳಂತೆಯೇ, ಗಾಂಧಿಯವರ ಜತೆಗಿನ ಆರ್. ಎಸ್. ಎಸ್. ಸಂಬಂಧದ ವಿಷಯಕ್ಕೆ ಬಂದಾಗಲೂ, ಅನೇಕ ಜನರು ಸತ್ಯದ ಬಗ್ಗೆ ಪರಿಶೋಧನೆ ನಡೆಸದೆಯೇ ಕೇವಲ ಊಹೆಗಳನ್ನು ಮಾಡುತ್ತಾರೆ. ಪಂಡಿತರೆನೆಸಿಕೊಂಡವರು ಕೂಡ, ಈ ವಿಷಯದ ಬಗ್ಗೆ ಸಮಗ್ರವಾದ ಅಧ್ಯಯನವನ್ನು ನಡೆಸದೇ ಬರೆಯಲು ಆರಂಭಿಸುತ್ತಾರೆ. ಹೆಚ್ಚಿನ ಸಮಯಗಳಲ್ಲಿ ಇವರದ್ದು ಆಯ್ದ ಅಧ್ಯಯನವಾಗಿರುತ್ತದೆ ಮತ್ತು ನಿರ್ದಿಷ್ಟ ಸೈದ್ಧಾಂತಿಕ ದೃಷ್ಟಿಕೋನದಿಂದ ರಚಿಸಲಾದ ವಸ್ತುಗಳಿಂದ ಪಡೆದುಕೊಂಡ ವಿಷಯವಾಗಿರುತ್ತದೆ. ವಾಸ್ತವವೆಂದರೆ, ‘ಸತ್ಯ’ದೊಂದಿಗೆ ಈ ಆಲೋಚನೆಗಳಿಗೆ ಯಾವುದೇ ಸಂಬಂಧವಿಲ್ಲದೇ ಇರುವುದು.

ದಾಖಲೆಯನ್ನು ನೇರವಾಗಿ ಹೊಂದಿಸುವ ಸಲುವಾಗಿ, ಮಹಾತ್ಮಾ ಗಾಂಧಿ ಮತ್ತು  ಸಂಘದ ಸಂಬಂಧದ ಬಗ್ಗೆ ಲಭ್ಯವಿರುವ ವಿಷಯವನ್ನು ಎಚ್ಚರಿಕೆಯಿಂದ ಪರೀಕ್ಷಿಸಬೇಕಾಗಿದೆ. ಅವರನ್ನು ಮತ್ತು ಅವರ ಮುಸ್ಲಿಂ ಸಮುದಾಯದ ಉಗ್ರಗಾಮಿ, ಜಿಹಾದಿ ಶಕ್ತಿಗಳಿಗೆ ಶರಣಾಗತಿಯನ್ನು ಒಪ್ಪದಿದ್ದರೂ ಕೂಡ, ಆರ್. ಎಸ್. ಎಸ್. ಚರಕ ಮತ್ತು ಸತ್ಯಾಗ್ರಹದಂತಹ ಸರಳವಾದ ವಿಧಾನಗಳ ಮೂಲಕ ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಸಾರ್ವಜನಿಕ ಬೆಂಬಲವನ್ನು ವಿಸ್ತರಿಸಲು ನಡೆಸಿದ ಅವರ ಪರಿಶ್ರಮವನ್ನು ಸದಾ ಕೊಂಡಾಡುತ್ತದೆ ಮತ್ತು ಅದು ಅವರ ಶ್ರೇಷ್ಠತೆ ಎಂದು ಪರಿಗಣಿಸುತ್ತದೆ.

ಗ್ರಾಮ ಸ್ವರಾಜ್, ಸ್ವದೇಶಿ, ಗೋ ರಕ್ಷಣೆ ಮತ್ತು ಅಸ್ಪೃಶ್ಯತೆಯ ನಿರ್ಮೂಲನೆ ಮುಂತಾದ ರಚನಾತ್ಮಕ ಕಾರ್ಯಕ್ರಮಗಳ ಬಗ್ಗೆ ಗಾಂಧೀಜಿಯ ಪ್ರಯತ್ನವನ್ನು ಅರ್ಥಮಾಡಿಕೊಂಡರೆ, ಹಿಂದೂ ಚಿಂತನೆಗಳನ್ನು ಶಾಶ್ವತವಾಗಿಡಲು ಅವರು ನಡೆಸಿದ ಪರಿಶ್ರಮವನ್ನು ನಿರಾಕರಿಸಲಾಗುವುದಿಲ್ಲ. ದೇಶಸೇವೆಗಾಗಿ ಜೀವನವನ್ನು ಅರ್ಪಿಸಲು ಈ ದೇಶದ ಯುವಜನರಿಗೆ ಗಾಂಧೀಜಿಯವರ ಮೌಲ್ಯ ಆಧಾರಿತ ಜೀವನವು ಸ್ಪೂರ್ತಿಯಾಗಿದೆ.

ಆರ್. ಎಸ್. ಎಸ್. ಸಂಸ್ಥಾಪಕರಾದ ಡಾ. ಹೆಡ್ಗೇವಾರ್ ಅವರು 1921 ರ ಅಸಹಕಾರ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಮತ್ತು 1930 ರ ನಾಗರಿಕ ಅಸಹಕಾರ ಚಳವಳಿಯಲ್ಲೂ ಭಾಗಿಯಾಗಿದ್ದರು. ಇದಕ್ಕಾಗಿ ಅವರು ಆಗಸ್ಟ್ 19 ರಿಂದ 12 ಜುಲೈವರೆಗೆ ಮತ್ತು 1930ರ ಜುಲೈ 21 ರಿಂದ 1931ರ ಫೆ.14ರವರೆಗೆ ಎರಡು ಅವಧಿಯ ಕಠಿಣ ಜೈಲು ಶಿಕ್ಷೆಗಳನ್ನು ಅನುಭವಿಸಿದ್ದಾರೆ.

ಮಹಾತ್ಮ ಗಾಂಧಿಯವರಿಗೆ 1922 ರ ಮಾರ್ಚ್ 18 ರಂದು 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದಾಗ, ಪ್ರತಿ ತಿಂಗಳ 18 ನೇ ತಾರೀಕನ್ನು ಗಾಂಧಿಯ ದಿನವಾಗಿ ಆಚರಿಸಲಾಯಿತು. ಗಾಂಧಿಯವರು ಜೈಲಿನಲ್ಲಿದ್ದಾಗ, ಅವರ ಕೆಲವು ಅನುಯಾಯಿಗಳು ತಮ್ಮ ಸ್ವಹಿತಾಸಕ್ತಿಗಾಗಿ ದೇಶಭಕ್ತಿಯ ಹೆಸರನ್ನು ಬಳಸುತ್ತಿದ್ದರು. 1922 ರ ಅಕ್ಟೋಬರ್­ನಲ್ಲಿ ನಡೆದ ಗಾಂಧಿ ದಿನದ ಭಾಷಣದಲ್ಲಿ ಡಾಕ್ಟರ್ ಜಿ ಅವರು ಈ ಕುತಂತ್ರದ ಬಗ್ಗೆ ಗಮನವನ್ನು ಹರಿಸಿದ್ದರು. ‘ಇಂದು ಬಹಳ ಮಂಗಳಕರ ದಿನ. ಮಹಾತ್ಮ ಗಾಂಧೀಜೀಯಂತಹ ಒಂದು ಉದಾತ್ತ ಆತ್ಮದ ಜೀವನದಲ್ಲಿನ  ಮೌಲ್ಯಗಳು ಮತ್ತು ಗುಣಗಳನ್ನು ಕೇಳುವ ದಿನ. ಅವರ ಅನುಯಾಯಿಗಳು ಎಂದು ಕರೆಯಲ್ಪಡಲು ಹೆಮ್ಮೆ ಪಡುವವರು ಈ ಗುಣಗಳನ್ನು ಅನುಸರಿಸುವಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರಬೇಕು’’ ಎಂದಿದ್ದರು.

1934 ರಲ್ಲಿ, ಗಾಂಧಿಜೀಯವರು ಜಮ್ನಾಲಾಲ್ ಬಜಾಜ್ ಜಿ ಅವರ ನಿವಾಸದಲ್ಲಿ ವಾಸಿಸುತ್ತಿದ್ದಾಗ, ಅಲ್ಲೇ ಸಮೀಪದಲ್ಲಿ ನಡೆಯುತ್ತಿದ್ದ ಆರ್. ಎಸ್. ಎಸ್. ನ  ಚಳಿಗಾಲದ ಶಿಬಿರಕ್ಕೆ ಆಗಮಿಸಿದ್ದರು ಮತ್ತು ಸ್ವಯಂಸೇವಕರೊಂದಿಗೆ ಮಾತುಕತೆ ನಡೆಸಿದರು. ಈ ಮಾತುಕತೆಯ ಸಮಯದಲ್ಲಿ, ಶಿಬಿರದಲ್ಲಿ ಪರಿಶಿಷ್ಟ ಜಾತಿಗಳ ಸ್ವಯಂಸೇವಕರು ಸೇರಿದಂತೆ ಎಲ್ಲರೂ ಒಟ್ಟಾಗಿ ಸಹೋದರರಾಗಿ ವಾಸಿಸುತ್ತಾರೆ ಎಂದು ತಿಳಿದುಕೊಂಡು ಸಂತೋಷಪಟ್ಟರು. ಸ್ವಾತಂತ್ರ್ಯದ ನಂತರ ಗಾಂಧಿಜೀಯವರು ಆಗ ಭಾಂಗಿ ಕಾಲನಿ ಎಂದು ಕರೆಯಲ್ಪಡುವ ಸ್ಥಳದಲ್ಲಿ ವಾಸವಾಗಿದ್ದರು, ಆ ವೇಳೆ ಬೆಳಗ್ಗಿನ ಶಾಖೆ ಅವರ ಮನೆಯ ಮುಂದೆಯೇ ನಡೆಯುತ್ತಿತ್ತು. ಗಾಂಧಿಜೀ ಅವರ ಆಶಯದಂತೆಯೇ, ಮಂಡಲ್ ಮಟ್ಟಕ್ಕಿಂತ ಮೇಲಿನ 500 ಕ್ಕೂ ಅಧಿಕ ಸ್ವಯಂಸೇವಕರು ಒಟ್ಟುಗೂಡಿದರು ಮತ್ತು ಗಾಂಧಿಜೀ ಅವರೆಲ್ಲರನ್ನೂ ಉದ್ದೇಶಿಸಿ ಮಾತನಾಡಿದರು.

ಈ ಮಾತುಗಳೊಂದಿಗೆ ಅವರು ತಮ್ಮ ಭಾಷಣವನ್ನು ಪ್ರಾರಂಭಿಸಿದರು –

“ಹಿಂದೆ ವಾರ್ಧಾದಲ್ಲಿ ನಾನು ಆರ್. ಎಸ್. ಎಸ್.  ಶಿಬಿರಕ್ಕೆ ಭೇಟಿ ನೀಡಿದ್ದೆ. ಆ ಸಮಯದಲ್ಲಿ ಸಂಸ್ಥಾಪಕರಾದ ಶ್ರೀ ಹೆಡ್ಗೇವಾರ್ ಬದುಕಿದ್ದರು. ದಿವಂಗತ ಶ್ರೀ ಜಾಮ್ನಾಲಾಲ್ ಬಜಾಜ್ ಜಿ ನನ್ನನ್ನು ಶಿಬಿರಕ್ಕೆ ಕರೆದೊಯ್ಯಿದಿದ್ದರು. ಶಿಬಿರದಲ್ಲಿನ ಕಠಿಣ ಶಿಸ್ತು, ಅಸ್ಪೃಶ್ಯತೆಯೇ ಇಲ್ಲದ ವಾತಾವರಣ ಮತ್ತು ಸರಳತೆಯ ಬಗ್ಗೆ ನಾನು ಸಂಪೂರ್ಣ ಪ್ರಭಾವಿತನಾದೆ. ಅಂದಿನಿಂದ ಸಂಘವು ಸಾಕಷ್ಟು ಬೆಳೆದಿದೆ. ಸೇವೆಯ ಆದರ್ಶ ಮತ್ತು ಸ್ವಯಂ ತ್ಯಾಗದಿಂದ ಪ್ರೇರೇಪಿಸಲ್ಪಟ್ಟ ಯಾವುದೇ ಸಂಘಟನೆಯು ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ ಎಂದು ನಾನು ಯಾವಾಗಲೂ ನಂಬಿದ್ದೇನೆ.”

(‘Complete works of Gandhi’ ವಿಭಾಗ 89, ಪುಟ 193-194 ರಲ್ಲಿ ಉಲ್ಲೇಖಿಸಲಾಗಿದೆ.)

1948 ರ ಜನವರಿ 30 ರಂದು, ಗಾಂಧಿಜೀ ಹತ್ಯೆಯ ಸುದ್ದಿ ಕೇಳಿದ ಸರಸಂಘಚಾಲಕ ಶ್ರೀ ಗುರೂಜೀ ಅವರು ಶ್ರೀ ದೇವದಾಸ್ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರು ಮತ್ತು ಶ್ರೀ ವಲ್ಲಭಭಾಯಿ ಪಟೇಲ್ ಅವರಿಗೆ ಸಂತಾಪದ ಟೆಲಿಗ್ರಾಮ್ ಕಳುಹಿಸಿದ್ದರು.

“ಹೀನ, ಕ್ರೂರ ದಾಳಿಯ ಸುದ್ದಿ ಮತ್ತು ಮಹಾನ್ ವ್ಯಕ್ತಿಯ ದುರಂತ ನಷ್ಟದ ಬಗ್ಗೆ ಆಘಾತಕ್ಕೊಳಗಾಗಿದ್ದೇನೆ. ಈ ಕಷ್ಟ ಕಾಲದಲ್ಲಿ ದೇಶದ ನಷ್ಟ ವಿವರಿಸಲು ಅಸಾಧ್ಯ. ಜವಾಬ್ದಾರಿಗಳನ್ನು ಹೊತ್ತುಕೊಳ್ಳಲು ಮತ್ತು ಬಣ್ಣಿಸಲು ಅಸಾಧ್ಯವಾದ ವ್ಯಕ್ತಿಯ ಅಗಲುವಿಕೆಯಿಂದ ಉಂಟಾಗಿರುವ ದುಃಖವನ್ನು ಭರಿಸಲು ದೇವರು ಸಹಾಯ ಮಾಡಲಿ” ಎಂದು ಇದರಲ್ಲಿ ಬರೆದಿದ್ದರು.

ಮಹಾತ್ಮಾ ಗಾಂಧಿಯ ಸ್ಮರಣಾರ್ಥ 13 ದಿನಗಳವರೆಗೆ ಎಲ್ಲಾ ಚಟುವಟಿಕೆಗಳನ್ನು ರದ್ದುಪಡಿಸುವಂತೆ ಆರ್. ಎಸ್. ಎಸ್. ನ ಎಲ್ಲಾ ಸ್ವಯಂಸೇವಕರಿಗೂ ಶ್ರೀ ಗುರೂಜೀ ಸೂಚನೆ ನೀಡಿದರು ಮತ್ತು ತಕ್ಷಣವೇ ತನ್ನ ಪ್ರಯಾಣವನ್ನು ಮುಕ್ತಾಯಗೊಳಿಸಿ ನಾಗ್ಪುರಕ್ಕೆ ಮರಳಿದರು. ಜನವರಿ 31 ರಂದು ಪ್ರಧಾನಮಂತ್ರಿ ಮತ್ತು ಗೃಹ ಸಚಿವರಿಗೆ ಪತ್ರ ಬರೆದು, ” ಆಲೋಚನೆ ರಹಿತ ವಿಕೃತ ಆತ್ಮವೊಂದು ಪೂಜ್ಯ ಮಹಾತ್ಮಾಜಿ ಅವರ ಜೀವನವನ್ನು ಹಠಾತ್ತನೆ ಮತ್ತು ಘೋರವಾದ ರೀತಿಯಲ್ಲಿ ಬುಲೆಟ್ ಮೂಲಕ ಅಂತ್ಯಗೊಳಿಸಿತು ಎಂಬ ಆಘಾತಕಾರಿ ಸುದ್ದಿಯನ್ನು ನಿನ್ನ ಮದ್ರಾಸ್­ನಲ್ಲಿದ್ದ ಸಂದರ್ಭದಲ್ಲಿ ಕೇಳಲ್ಪಟ್ಟೆ. ಈ ಕೆಟ್ಟ ಕೆಲಸವು, ಪ್ರಪಂಚದ ದೃಷ್ಟಿಯಲ್ಲಿ ನಮ್ಮ ಸಮಾಜವನ್ನು ಕುಗ್ಗಿಸಿದೆ’’. ಈ ಬಗೆಗಿನ ಸಂಪೂರ್ಣ ಪತ್ರ ವ್ಯವಹಾರವು ಜಸ್ಟಿಸ್ ಆನ್ ಟ್ರಯಲ್ ಆಂಡ್ ಕಂಪ್ಲೀಟ್ ವರ್ಕ್ಸ್ ಆಫ್ ಶ್ರೀ ಗುರೂಜಿ ಕೃತಿಗಳಲ್ಲಿ ಲಭ್ಯವಿದೆ.

ಮಹಾತ್ಮಾ ಗಾಂಧಿಯ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ, ಸಾಂಗ್ಲಿಯಲ್ಲಿ ಶ್ರೀ ಗುರೂಜಿ ಅವರು ಗಾಂಧಿಜೀ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು. ಆ ವೇಳೆ ನಡೆಸಿದ ಭಾಷಣದಲ್ಲಿ, “ನಾವು ಪ್ರಮುಖ ಮತ್ತು ಧಾರ್ಮಿಕ ಸಂದರ್ಭಗಳಲ್ಲಿ ಸಭೆ ಸೇರಿದ್ದೇವೆ. 100 ವರ್ಷಗಳ ಹಿಂದೆ, ಈ ದಿನ ಸೌರಾಷ್ಟ್ರದಲ್ಲಿ ಮಗುವೊಂದು ಜನಿಸಿತು. ಆ ದಿನದಂದು ಹಲವಾರು ಇತರ ಮಕ್ಕಳು ಕೂಡ ಜನ್ಮವನ್ನು ಪಡೆದಿರುತ್ತಾರೆ, ಆದರೆ ಅವರ ಜನ್ಮ ಶತಮಾನೋತ್ಸವವನ್ನು ನಾವು ಆಚರಿಸುವುದಿಲ್ಲ. ಮಹಾತ್ಮಾ ಗಾಂಧಿ ಕೂಡ ಯಾವುದೇ ಸಾಮಾನ್ಯ ಮನುಷ್ಯನಂತೆಯೇ ಜನಿಸಿದರು, ಆದರೆ ತಮ್ಮ ಕಾರ್ಯಗಳ ಕಾರಣದಿಂದ ಅವರು ಒಬ್ಬ ಮಹಾನ್ ಮನುಷ್ಯನ ಸ್ಥಾನಮಾನವನ್ನು ಹೊಂದಿದರು. ಅವರ ಹಾದಿಯಲ್ಲಿ ನಾವು ನಮ್ಮ ಜೀವನವನ್ನು ಅಳವಡಿಸಿಕೊಳ್ಳಬೇಕು. ನಾವು ಸಾಧ್ಯವಾದಷ್ಟು ಅವರ ಜೀವನವನ್ನು ಅನುಸರಿಸಲು ಪ್ರಯತ್ನಿಸಬೇಕು”

ಮತ್ತೆ ಮಾತನಾಡಿ “ಮಹಾತ್ಮ ಗಾಂಧಿಯವರು ಧೂಳನ್ನು ಚಿನ್ನದ ಬಣ್ಣಕ್ಕೆ ತಿರುಗಿಸಿದರು. ಸಾಮಾನ್ಯ ಮನುಷ್ಯನಲ್ಲಿ ಅಸಾಮಾನ್ಯವಾದುದನ್ನು ತಂದರು. ಇದೇ ಕಾರಣಕ್ಕೆ ಬ್ರಿಟೀಷರು ದೇಶವನ್ನು ಬಿಡಬೇಕಾಯಿತು. ಮಹಾತ್ಮ ಜಿ ಹೇಳುತ್ತಿದ್ದರು, “ನಾನೊಬ್ಬ ಕಟ್ಟಾ ಹಿಂದೂ; ಆದ್ದರಿಂದ ನಾನು ಮನುಷ್ಯರನ್ನು ಮಾತ್ರವಲ್ಲ, ಜೀವನದ ಪ್ರತಿ ಅಭಿವ್ಯಕ್ತಿಯನ್ನೂ ಪ್ರೀತಿಸುತ್ತೇನೆ. ಅವರ ಜೀವನ ಮತ್ತು ರಾಜಕೀಯದಲ್ಲಿ ಸತ್ಯ ಮತ್ತು ಅಹಿಂಸೆಗೆ ಪ್ರಾಮುಖ್ಯತೆ ಸಿಕ್ಕಿದ್ದು ಹಿಂದುತ್ವದ ಕಾರಣದಿಂದ. ‘ಹಿಂದೂ ಧರ್ಮದ ಭವಿಷ್ಯ’ದಲ್ಲಿ ಗಾಂಧಿಯವರು – ‘ಹಿಂದೂ ಧರ್ಮ ಎಂದರೆ ನಿಲ್ಲದೆ ಇರುವಂತಹುದು, ಅದು ನಿರಂತರವಾಗಿ ಬೆಳೆಯುತ್ತದೆ ಮತ್ತು ಸತ್ಯದ ಹುಡುಕಾಟದದ ಒಂದು ಮಾರ್ಗ. ಇಂದು ಈ ದಣಿದ ಧರ್ಮ, ಮುಂದುವರೆಯಲು ಸ್ಪೂರ್ತಿದಾಯಕವಾಗಿ ಸಹಾಯಕವಾಗುವಂತೆ ಕಾಣುತ್ತಿಲ್ಲ. ಈ ದಣಿವು ಹೊರಟುಹೋದ ದಿನ ಹಿಂದೂ-ಧರ್ಮದ ಮಹಾ ಸ್ಫೋಟ ಹಿಂದೆಂದೂ ನಡೆಯದ ರೀತಿಯಲ್ಲಿ ಆಗುತ್ತದೆ – ಇಡೀ ಜಗತ್ತಿನಲ್ಲಿ ಹಿಂದೂ ಧರ್ಮವು ತನ್ನದೇ ಆದ ಬೆಳಕನಲ್ಲಿ ಹೊಳೆಯುವಷ್ಟು ಬೆಳೆಯುತ್ತದೆ’’. ಮಹಾತ್ಮರ ಈ ಆಶಯವನ್ನು ಈಡೇರಿಸುವುದು ನಮ್ಮ ಜವಾಬ್ದಾರಿ.

ದೇಶಕ್ಕೆ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯದ ಅಗತ್ಯವಿದೆ. ಅಂತೆಯೇ, ಯಾರೊಬ್ಬರೂ ಅಗೌರವ ಮಾಡದಂತಹ ಧಾರ್ಮಿಕ ಸ್ವಾತಂತ್ರ್ಯದ ಅವಶ್ಯಕತೆಯೂ ಇದೆ. ವಿಭಿನ್ನ ಪಂಥಗಳು ಮತ್ತು ಧರ್ಮಗಳ ಜನರು ಒಟ್ಟಿಗೆ ಬದುಕಬಲ್ಲರು. ವಿದೇಶಿ ಆಲೋಚನೆಗಳ ಸಂಕೋಲೆಗಳಿಂದ ಕೂಡ ಸ್ವಾತಂತ್ರ್ಯ ಬೇಕಿದೆ. ಇದು ಗಾಂಧಿಯವರ ಪಾಠವೂ ಆಗಿತ್ತು. ನಾನು ಹಲವಾರು ಬಾರಿ ಗಾಂಧಿಜೀ ಅವರನ್ನು ಭೇಟಿಯಾಗಿದ್ದೇನೆ. ನಾನು ಅವರೊಂದಿಗೆ ಚರ್ಚೆಗಳನ್ನು ಮಾಡಿದ್ದೇನೆ. ಅವರಿಂದ ವ್ಯಕ್ತವಾದ ಆಲೋಚನೆಗಳನ್ನು ಅಧ್ಯಯನ ಮಾಡಿದ ನಂತರ ನಾನು ಈ ಮಾತುಗಳನ್ನು ಹೇಳುತ್ತಿದ್ದೇನೆ. ಆದ್ದರಿಂದ ನನ್ನ ಆತ್ಮಸಾಕ್ಷಿಯ ಅನುಭವಗಳ ಮೂಲಕ, ನನಗೆ ಗಾಂಧಿಜೀ ಅವರ ಬಗ್ಗೆ ಹೆಚ್ಚಿನ ಗೌರವವಿದೆ.

ಮಹಾತ್ಮಾ ಜೀ ಜೊತೆ ನನ್ನ ಕೊನೆಯ ಸಭೆ 1947 ರಲ್ಲಿ ನಡೆಯಿತು. ಆ ಸಮಯದಲ್ಲಿ ದೆಹಲಿಯಲ್ಲಿ ಗಲಭೆಗಳು ಉದ್ಭವಿಸಿತು. ಸಂಪ್ರದಾಯಿಕವಾಗಿ ಅಹಿಂಸಾತ್ಮಕರಾಗಿದ್ದವರು ಗಲಭೆ ವೇಳೆ ಕ್ರೂರ, ರಾಕ್ಷಸ ಮತ್ತು ನಿರ್ದಯರಾದರು. ಆ ಸಮಯದಲ್ಲಿ ಅದೇ ಸಂದರ್ಭದಲ್ಲಿ ನಾನು ಶಾಂತಿ ಸ್ಥಾಪಿಸಲು ಕೆಲಸ ಮಾಡುತ್ತಿದ್ದೆ. ಅಂತಹ ಪರಿಸರದಲ್ಲಿ ನಾನು ಮಹಾತ್ಮ ಗಾಂಧಿಯವರನ್ನು ಭೇಟಿಯಾದೆ.

ಮಹಾತ್ಮ ಜೀ ನನಗೆ ಹೇಳಿದರು “ನೋಡಿ, ಏನು ನಡೆಯುತ್ತಿದೆ?”

ನಾನು ಹೇಳಿದೆ- “ಇದು ನಮ್ಮ ದುರದೃಷ್ಟ. ದೇಶವನ್ನು ತೊರೆಯುವ ವೇಳೆ ಬ್ರಿಟಿಷರು ಹೇಳುತ್ತಿದ್ದರು; ನೀವು ಪರಸ್ಪರರ ಕುತ್ತಿಗೆಯನ್ನು ಕತ್ತರಿಸುತ್ತೀರಿ ಎಂದು. ಇಂದು ಅವರ ಮಾತು ನಿಜವಾಗುತ್ತಿದೆ. ಇಂತಹ ಘಟನೆಗಳು ಇಡೀ ಪ್ರಪಂಚದಲ್ಲಿ ನಮಗೆ ಅಪಖ್ಯಾತಿಯನ್ನು ತರುತ್ತಿದೆ. ಇದನ್ನು ನಿಲ್ಲಿಸಬೇಕು. ಆ ದಿನದ ಪ್ರಾರ್ಥನಾ ಸಭೆಯಲ್ಲಿ, ಗಾಂಧಿಜೀ ಅವರು ನನ್ನ ಹೆಸರನ್ನು ಹೆಮ್ಮೆಯಿಂದ ತೆಗೆದುಕೊಂಡು ನನ್ನ ಆಲೋಚನೆಗಳನ್ನು ವ್ಯಕ್ತಪಡಿಸಿದರು. ಗಾಂಧಿಜೀ ನನ್ನ ಹೆಸರನ್ನು ಉಲ್ಲೇಖಿಸಿರುವುದು ನನ್ನ ದೊಡ್ಡ ಅದೃಷ್ಟ. ಈ ಇಡೀ ಸನ್ನಿವೇಶದಲ್ಲಿ, ನಾವು ಗಾಂಧೀಜಿಯನ್ನು ಅನುಕರಿಸಬೇಕೆಂದು ನಾನು ಪುನರುಚ್ಚರಿಸುತ್ತೇನೆ.

ನಾವು ಮಹಾತ್ಮ ಜೀ ಅವರ ಆಲೋಚನೆಗಳನ್ನು ಅನುಸರಿಸಿದರೆ, ಅಂತಹ ಪಾಠಗಳನ್ನು ನೀಡುವ ಮಹಾನ್ ಹಿಂದೂ ಧರ್ಮವನ್ನು ಪುನಃ ಸ್ಥಾಪನೆ ಮಾಡಿದಂತಾಗುತ್ತದೆ. ಧರ್ಮ ಇಲ್ಲದ  ಮಾನವ ಸಮಾಜವು ಪ್ರಾಣಿಗಳ ಸಮಾಜದಂತೆ ಇರುತ್ತದೆ, ಪರಸ್ಪರರನ್ನು ನಾಶಪಡಿಸುತ್ತದೆ. ಹಿಂದೂ ಧರ್ಮವನ್ನು ಜಾಗೃತಗೊಳಿಸುವ ಮೂಲಕ, ಅದರ ಅತ್ಯುತ್ತಮ ಗುಣಗಳನ್ನು ಸಮಾಜದ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಭದ್ರಪಡಿಸಬೇಕಾಗಿದೆ. ಪ್ರಪಂಚದ ವೇದಿಕೆಯ ಮೇಲೆ ನಾವು ಆದರ್ಶ ಸಮಾಜವಾಗಿ ಪ್ರೀತಿಯ, ಸಾಮರಸ್ಯದ ರಾಷ್ಟ್ರವಾಗಿ ನಿಲ್ಲುವ ನಿರ್ಧಾರವನ್ನು ಮಾಡಬೇಕು. ಅದಕ್ಕಾಗಿಯೇ ನಾನು ಮಹಾತ್ಮಾಜಿಯಂತಹ ಪೂಜ್ಯ ವ್ಯಕ್ತಿತ್ವದ ಬಗ್ಗೆ ನನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದೇನೆ “

ಈ ಭಾಷಣ ಮತ್ತು ಲೇಖನವನ್ನು ಶ್ರೀ ಗುರೂಜೀ, ಸಂಪುಟ 1 ಪುಟ 208-221 ರ ಸಾಮೂಹಿಕ ಕೃತಿಗಳಲ್ಲಿ ಪ್ರಕಟಿಸಲಾಗಿದೆ.

ನಾನು ವಡೋದರದಲ್ಲಿ (1987-90) ಪ್ರಚಾರಕ ಆಗಿದ್ದಾಗ, ನಾನು ಸಹ-ಸರಕಾರ್ಯವಾಹ ಶ್ರೀ ಯಾದವ್ ರಾವ್  ಜೋಶಿ ಅವರ ಉಪನ್ಯಾಸಕ್ಕೆ ಹಾಜರಾಗಿದ್ದೆ. ಗಾಂಧೀಜೀ ಬಗ್ಗೆ ಬಹಳ ಗೌರವಯುತ ಮಾತುಗಳನ್ನು ಆಡಿದ ಅವರಿಗೆ, ಕಾರ್ಯಕರ್ತರೊಬ್ಬರು ನೀವು ಹೃದಯದಿಂದ ಮಾತನಾಡುತ್ತಿದ್ದೀರೇ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರ ನೀಡಿದ ಯಾದವ್ ರಾವ್ ಜೀ ಅವರು, “ನಾನು ರಾಜಕೀಯ ನಾಯಕನಲ್ಲ, ಹಾಗಾಗಿ ನಾನು ಹೃದಯದಲ್ಲಿ ನಂಬದ್ದನ್ನು ಮಾತಿನಲ್ಲಿ ಹೇಳುವುದಿಲ್ಲ. ಯಾರನ್ನಾದರೂ ಗೌರವಿಸುತ್ತೇವೆ ಎಂದರೆ, ಅವರ ಎಲ್ಲಾ ಅಭಿಪ್ರಾಯಗಳನ್ನು ಒಪ್ಪಿಕೊಳ್ಳುತ್ತೇವೆ ಎಂದರ್ಥವಲ್ಲ, ಆದರೆ ನಾವು ಅವರನ್ನು ಆದರ್ಶಪ್ರಾಯರೆಂದು ಪರಿಗಣಿಸುತ್ತೇವೆ ಮತ್ತು ಅವರ ಪ್ರಭಾವಶಾಲಿ ಗುಣಗಳನ್ನು ಸ್ಮರಿಸುತ್ತೇವೆ’’ ಎಂದರು. ಅಲ್ಲದೇ, ಅವರು ಮಹಾಭಾರತದಲ್ಲಿ ಪಿತಾಮಹ ಭೀಷ್ಮರ ಉದಾಹರಣೆಯೊಂದಿಗೆ ಸ್ವಯಂಸೇವಕನಿಗೆ ಮತ್ತಷ್ಟು ವಿವರಣೆಯನ್ನು ನೀಡಿದರು. “ಭೀಷ್ಮನು ತನ್ನ ಪ್ರತಿಜ್ಞೆಗೆ ದೃಢವಾದ ಬದ್ಧತೆಗಾಗಿ ನೆನಪಿಸಿಕೊಳ್ಳಲ್ಪಟ್ಟಿದ್ದಾನೆಯೇ ವಿನಃ, ದ್ರೌಪತಿಗೆ ಕೌರವರ ಸಭೆಯಲ್ಲಿ ಅವಮಾನವಾಗುತ್ತಿದ್ದರೂ ಮೌನವಾಗಿ ಇದ್ದುದಕ್ಕಾಗಿ ಅಲ್ಲ. ಅದೇ ರೀತಿ, ಮೂಲಭೂತವಾದಿ ಮತ್ತು ಜಿಹಾದಿ ಮುಸ್ಲಿಂ ನಾಯಕತ್ವದ ಬಗ್ಗೆ ಗಾಂಧೀಜಿಯವರ ದೃಷ್ಟಿಕೋನದ ವಿರುದ್ಧ ನಾವು ಬಲವಾದ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದರೂ ಸಹ, ಸ್ವಾತಂತ್ರ್ಯ ಹೋರಾಟಕ್ಕೆ ಸಾಮಾನ್ಯ ಜನರನ್ನು ತರುವಲ್ಲಿ ಅವರ ಕೊಡುಗೆ, ಅವರ ಸತ್ಯಾಗ್ರಹ ಮತ್ತು ಭಾರತೀಯ ಚಿಂತನೆಗಳ ಆಧಾರದ ಮೇಲಿನ ಅವರ ಅನೇಕ ವಿಷಯಗಳು ಪ್ರಶಂಸನೀಯ ಮತ್ತು ಸ್ಪೂರ್ತಿದಾಯಕವಾಗಿದೆ.”

ಈ ಸತ್ಯಗಳನ್ನು ಪರಿಗಣಿಸದೆ ಗಾಂಧಿಯವರ ಮತ್ತು ಸಂಘದ ಸಂಬಂಧದ ಬಗ್ಗೆ ಪ್ರತಿಕ್ರಿಯೆ ನೀಡುವುದು ಸತ್ಯಕ್ಕೆ ಮಾಡುವ ಅನ್ಯಾಯವಾಗುತ್ತದೆ. ಸಂಘವು ಗ್ರಾಮೀಣ ಅಭಿವೃದ್ಧಿ, ಸಾವಯವ ಕೃಷಿ, ಹಸುವಿನ ಸಂರಕ್ಷಣೆ ಮತ್ತು ರಕ್ಷಣೆ, ಸಾಮಾಜಿಕ ಸಮಾನತೆ ಮತ್ತು ಸೌಹಾರ್ದತೆಗಳ ಮೂಲಕ, ಆಯಾ ಭಾಷೆಯಲ್ಲಿ ಶಿಕ್ಷಣವನ್ನು ನೀಡುವ ಮತ್ತು ಸ್ವದೇಶಿ ಆರ್ಥಿಕತೆ ಮತ್ತು ಜೀವನಶೈಲಿಯ ಕಾರ್ಯಗಳ ಮೂಲಕ ಗಾಂಧೀಜಿಯ ಆದರ್ಶಗಳನ್ನು ಜೀವಂತವಾಗಿಟ್ಟುಕೊಂಡಿದೆ ಮತ್ತು ಅದನ್ನು ಮುಂದುವರೆಸುತ್ತಿದೆ. ಚುನಾವಣೆಗಳು ಹತ್ತಿರದಲ್ಲಿರುವಾಗ ಮಾತ್ರ ಅವರನ್ನು ನೆನಪಿಸಿಕೊಳ್ಳುವವರಿಗೆ ನಾವಿದಕ್ಕಿಂತ ಹೆಚ್ಚಿನದ್ದನ್ನು ಹೇಳಲಾಗುವುದಿಲ್ಲ.

ಈ ವರ್ಷ ಗಾಂಧೀಜಿಯವರ 150 ನೇ ಜನ್ಮದಿನವಾಗಿದೆ. ಅವರ ಅದಮ್ಯ ನೆನಪುಗಳಿಗೆ ವಿನಮ್ರ ಗೌರವ.

ಮೂಲ ಲೇಖನ : ಡಾ.ಮನಮೋಹನ್ ವೈದ್ಯ
ಸಹ ಸರಕಾರ್ಯವಾಹ, ರಾಷ್ಟ್ರೀಯ ಸ್ವಯಂಸೇವಕ ಸಂಘ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top