ಬೆಳ್ತಂಗಡಿ : ಪ್ರಸಿದ್ಧ ವೈದಿಕ ವಿದ್ವಾಂಸ ಗೋಕರ್ಣದ ಕೇಶವ ಜೋಗಳೇಕರ್(೮೨) ಅವರು ಜೂ.೨೩ ರಂದು ಬೆಳಗಾವಿಯಲ್ಲಿ ದೈವಾಧೀನರಾಗಿದ್ದಾರೆ. ಅವರ ನಿಧನಕ್ಕೆ ಉಜಿರೆ-ಬೆಳ್ತಂಗಡಿ ಚಿತ್ಪಾವನ ಬ್ರಾಹ್ಮಣ ಬಳಗ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ದೇಶ ಕಂಡ ದೊಡ್ಡ ಪುರೋಹಿತರುಗಳಲ್ಲಿ ಜೋಗಳೇಕರ್ ಅವರು ಒಬ್ಬರು. ಇವರಿಗೆ ನಾಲ್ಕು ವೇದಗಳು, ಔತರೇಯ ಬ್ರಾಹ್ಮಣ ಕಂಠಸ್ಥವಾಗಿದ್ದವು. ಅಲ್ಲದೆ ಷಡಂಗ, ಸಂಹಿತಾ, ಪಾದ, ಕ್ರಮ,ಜಾತ, ಘನ ಶಾಸ್ತ್ರಗಳಲ್ಲಿ ನಿಷ್ಣಾತರಾಗಿದ್ದರು. ಇವರ ಪಾಂಡಿತ್ಯಕ್ಕೆ ದೇಶದ ಅನೇಕ ಕಡೆಗಳಲ್ಲಿ ಇವರಿಗೆ ಗೌರವ ಸಂದಿದೆ. ಇವರು ಕಾಶಿಯಲ್ಲಿ ದಶಗ್ರಂಥಿಗಳೆಂದು ಸಮ್ಮಾನಿತರಾಗಿದ್ದರಲ್ಲದೆ ಕರ್ನಾಟಕ ಸರಕಾರ ಗೌರವ ವೈದಿಕ ರತ್ನ ಪುರಸ್ಕಾರ ನೀಡಿದೆ. ೧೯೯೮ ರಲ್ಲಿ ದರ್ಭೇತಡ್ಕದಲ್ಲಿ ನಡೆದ ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಮ್ಮೇಳನದಲ್ಲಿ ಸಮ್ಮಾನಿಸಲಾಗಿತ್ತು. ಕಾಶಿ, ಪ್ರಯಾಗ, ಮುಂಬಯಿ, ಪುಣೆ, ಹೈದರಾಬಾದ್, ಕಾಂಚಿ, ಕೇರಳ, ಗೋವಾ ಹೀಗೆ ಹಲವು ಪ್ರದೇಶಗಳಲ್ಲಿ ನಡೆದ ಯಜ್ಞ ಯಾಗಾದಿಗಳಲ್ಲಿ ಅಧ್ವರ್ಯುಗಳಾಗಿದ್ದರು. ಶ್ರೌತ, ವಾಜಪೇಯ ಯಾಗಗಳಲ್ಲಿ ಭಾಗವಹಿಸಿದ್ದರು.
ಅವಿಭಜಿತ ದ.ಕ.ಜಿಲ್ಲೆಯ ಚಿತ್ಪಾವನ ಬ್ರಾಹ್ಮಣರೊಂದಿಗೆ ವಿಶೇಷ ಸಂಪರ್ಕ ಹೊಂದಿದ್ದ ಜೋಗಳೇಕರ್ ಅವರು ದುರ್ಗ, ಮಾಳ, ಶಿಶಿಲ, ಮುಂಡಾಜೆ, ಹೊಸ್ಮಠದ ಭಾಗಗಳಲ್ಲಿಯೂ ವೈದಿಕ ಅನುಷ್ಠಾನಗಳನ್ನು ನೇರವೇರಿಸಿಕೊಟ್ಟಿದ್ದಾರೆ. ಇವರ ನಿಧನಕ್ಕೆ ಬಳಗದ ಗೌರವಾಧ್ಯಕ್ಷ ಸೋಮನಾಥ ಪಟವರ್ಧನ್, ಅಧ್ಯಕ್ಷ ತ್ರಿವಿಕ್ರಮ ಕೇಳ್ಕರ್, ಕಾರ್ಯದರ್ಶಿ ಶ್ರೀಕಾಂತ ಗೋರೆ, ನಿಕಟ ಪೂರ್ವ ಅಧ್ಯಕ್ಷ ಗೋವಿಂದ ದಾಮ್ಲೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.