ರಾಂಪುರ: ಶಿಕ್ಷಣದಿಂದ ವಂಚಿತವಾಗಿದ್ದ ರಾಂಪುರದ ಚೌಪಲ್ ಎಂಬ ಕುಗ್ರಾಮದಲ್ಲಿ ಶಿಕ್ಷಕರೊಬ್ಬರ ಶತಪ್ರಯತ್ನದ ಫಲವಾಗಿ ಮಾಧ್ಯಮಿಕ ಕಾಲೇಜೊಂದು ಸ್ಥಾಪನೆಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುತ್ತಿದೆ.
ಕೇಶವ್ ಸರನ್ ಎಂಬವರು 1971ರಲ್ಲಿ ಖರದಿಯ ಗ್ರಾಮದ ವಯಸ್ಕ ಶಿಕ್ಷಣ ಕೇಂದ್ರಕ್ಕೆ ಶಿಕ್ಷಕರಾಗಿ ನಿಯೋಜನೆಗೊಂಡ ಬಳಿಕ ಅಲ್ಲಿನ ಸುತ್ತಮುತ್ತಲ ಹಳ್ಳಿಗಳ ಜನ ಅಕ್ಷರ ಜ್ಞಾನವನ್ನು ಪಡೆದಿದ್ದಾರೆ, ಮಾತ್ರವಲ್ಲದೇ ಅವರ ಸುಕಾರ್ಯದ ಫಲವಾಗಿಯೇ ಕಾಲೇಜೊಂದು ಸ್ಥಾಪನೆಗೊಂಡಿದ್ದು 1320 ಮಕ್ಕಳಿಗೆ ವಿದ್ಯೆ ನೀಡುತ್ತಿದೆ.
ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂಬುದನ್ನು ಅರಿತ ಸರನ್ ಅವರು, ಚೌಪಲ್ ಗ್ರಾಮದ ತಮ್ಮ ಮನೆ ಸಮೀಪವೇ ತರಗತಿಯನ್ನು ಆರಂಭಿಸಿ ಹಲವಾರು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಆರಂಭಿಸಿದರು. ಮೊದಲು ಐದಾರು ಮಕ್ಕಳು ಇವರ ತರಗತಿಗೆ ಆಗಮಿಸುತ್ತಿದ್ದರು, ಬಳಿಕ ಈ ವಿಷಯ ಬಾಯಿಯಿಂದ ಬಾಯಿಗೆ ಹರಡಿ ಸುತ್ತಮುತ್ತಲ ಹಳ್ಳಿಯ 150ಕ್ಕೂ ಅಧಿಕ ಮಕ್ಕಳು ಇವರ ಬಳಿ ಆಗಮಿಸಿ ವಿದ್ಯೆ ಪಡೆಯಲಾರಂಭಿಸಿದರು.
ಬಳಿಕ ಸರನ್ ಅವರು ಚೌಪಲ್ನಲ್ಲಿನ ತನ್ನ ತರಗತಿಯನ್ನು ಅಧಿಕೃತ ಶಾಲೆಯನ್ನಾಗಿ ಮಾರ್ಪಾಟು ಮಾಡಿದರು, ಇದಕ್ಕಾಗಿ ಇವರು ತಮ್ಮ 4 ಎಕರೆ ಕೃಷಿ ಭೂಮಿಯನ್ನೇ ಬಳಸಿಕೊಂಡರು, ಬಳಿಕ ಈ ಶಾಲೆಗೆ ಜೂನಿಯರ್ ಹೈಸ್ಕೂಲ್ ಮಟ್ಟದ ಮಾನ್ಯತೆ ದೊರೆಯಿತು..
70 ವರ್ಷದ ಸರನ್ ಅವರ ಮಗ ಮತ್ತು ಮಗಳು ಇಬ್ಬರೂ ಅರ್ಹ ಶಿಕ್ಷಕರಾಗಿದ್ದು ತಂದೆಯ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಪ್ರಸ್ತುತ 21ಶಿಕ್ಷಕ ಸಿಬ್ಬಂದಿಗಳನ್ನು ಹೊಂದಿರುವ ಇವರ ಶಾಲೆ ಇಂಟರ್ ಕಾಲೇಜ್ ಮಾನ್ಯತೆಯನ್ನೂ ಪಡೆದುಕೊಂಡಿದೆ.
ಕಾಲೇಜು ಸ್ಥಾಪನೆಗೆ ಸರನ್ ಅವರು ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಈ ಇಂಟರ್ ಕಾಲೇಜ್ಗೆ ಕೇಶವ್ ಇಂಟರ್ ಕಾಲೇಜ್ ಎಂದು ಹೆಸರಿಡಲಾಗಿದೆ. ಪ್ರಸ್ತುತ ಇಲ್ಲಿ 1320ವಿದ್ಯಾರ್ಥಿಗಳಿದ್ದು ಅದರಲ್ಲಿ 670 ಮಂದಿ ಹೆಣ್ಣು ಮಕ್ಕಳು.
ಸರನ್ ಅವರು ತನ್ನ ಕಾಲೇಜು ಶೀಘ್ರದಲ್ಲೇ ಡಿಗ್ರಿ ಕಾಲೇಜು ಮಾನ್ಯತೆಯನ್ನು ಪಡೆಯಬೇಕು ಎಂಬ ಹೆಬ್ಬಯಕೆಯನ್ನು ಹೊಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.