ಮಂಗಳೂರು : ಮಂಗಳೂರು ಐ.ಜಿ.ಪಿ. ಕಚೇರಿಯಲ್ಲಿ ಡಿ.ವೈ.ಎಸ್.ಪಿ. ಯಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಎಂ.ಕೆ. ಗಣಪತಿಯವರು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಕರ್ನಾಟಕ ರಾಜ್ಯ ಸರಕಾರದ ಸಂಪುಟ ಸಚಿವರೋರ್ವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದು ದುರಾದೃಷ್ಟಕರ. ಮಾನಸಿಕ ಕಿರುಕುಳ ಹಾಗೂ ಒತ್ತಡದಿಂದ ಸಾವಿಗೆ ಶರಣಾದ ಶ್ರೀ ಎಂ. ಕೆ. ಗಣಪತಿಯವರ ಆತ್ಮಕ್ಕೆ ಸದ್ಗತಿಯನ್ನು ಕೋರುತ್ತಾ ಕುಟುಂಬದವರಿಗೆ ಅವರ ಅಗಲುವಿಕೆಯನ್ನು ಸಹಿಸುವ ಶಕ್ತಿಯನ್ನು ಭಗವಂತನು ಕರುಣಿಸಲೆಂದು ಭಗವಂತನನ್ನು ಪ್ರಾರ್ಥಿಸುತ್ತೇನೆ.
ಸನ್ಮಾನ್ಯ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೇಸ್ ಸರ್ಕಾರದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಿಗೆ ಉಳಿಗಾಲವಿಲ್ಲವೆಂಬುದು ಇನ್ನೊಮ್ಮೆ ಸಾಬೀತಾಗಿದೆ. ಈ ಸರ್ಕಾರ ಅಧಿಕಾರ ವಹಿಸಿಕೊಂಡಾಗಿನಿಂದಲೂ ಪ್ರಾಮಾಣಿಕ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ. ದಕ್ಷ ಐ.ಎ.ಎಸ್. ಅಧಿಕಾರಿ ಶ್ರೀ ಡಿ.ಕೆ. ರವಿಯವರ ನಿಗೂಢ ಆತ್ಮಹತ್ಯೆ, ಮೇಲಾಧಿಕಾರಿಗಳ ಕುಚೋದ್ಯದಿಂದ ಇನ್ನೋರ್ವ ಐ.ಎ.ಎಸ್. ಅಧಿಕಾರಿ ಶ್ರೀಮತಿ ರಶ್ಮಿ ಮಹೇಶ್ ಮೇಲೆ ಹಲ್ಲೆ, ಸಚಿವ ಸಂಪುಟದ ಮಂತ್ರಿಯಿಂದ ದಕ್ಷ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ಮೇಲೆ ಮಾನಸಿಕ ಒತ್ತಡ ಹಾಗೂ ಅದರಿಂದಾಗಿ ಅವರ ರಾಜಿನಾಮೆ, ದಕ್ಷ ಪೊಲೀಸ್ ಅಧಿಕಾರಿ ಮಲ್ಲಿಕಾರ್ಜುನ್ ಬಂಡೆ ನಿಗೂಡ ಹತ್ಯೆ, ಇನ್ನೋರ್ವ ದಕ್ಷ ಹಾಗೂ ಶಿಸ್ತಿನ ಐ.ಎ.ಎಸ್. ಅಧಿಕಾರಿ ಶ್ರೀಮತಿ ತುಳಿಸಿ ಮದ್ದಿನೇನಿಯವರ ಮೇಲೆ ರಾಜಕೀಯ ಒತ್ತಡ ಹಾಗೂ ವರ್ಗಾವಣೆ, ಮೊನ್ನೆ ನಡೆದ ಚಿಕ್ಕಮಗಳೂರು ಡಿ.ವೈ.ಎಸ್.ಪಿ. ಕಲ್ಲಪ್ಪ ಹಂಡಿಬಾಗ್ ಆತ್ಮಹತ್ಯೆ ಪ್ರಕರಣದಲ್ಲಿ ಮೇಲಾಧಿಕಾರಿಗಳ ಒತ್ತಡದ ಸುಳಿವು ಹಾಗೂ ನಿನ್ನೆ ಮಡಿಕೇರಿಯ ವಸತಿಗೃಹದಲ್ಲಿ ಆತ್ಮಹತ್ಯೆಗೆ ಶರಣಾದ ಎಂ.ಕೆ. ಗಣಪತಿಯವರ ಮೇಲೆ ಕರ್ತವ್ಯದ ವೇಳೆ ರಾಜ್ಯ ಸಂಪುಟದ ಮಂತ್ರಿಯೋರ್ವರ ನಿರಂತರ ಕಿರುಕುಳ ಹಾಗೂ ಮೇಲಾಧಿಕಾರಿಗಳ ಒತ್ತಡ ಮುಂತಾದ ಪ್ರಕರಣಗಳು ಇಡೀ ರಾಜ್ಯದಲ್ಲಿ ಸರ್ಕಾರಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ನೈತಿಕ ಹಾಗೂ ಆತ್ಮಸ್ಥೈರ್ಯವನ್ನು ಕುಂಠಿತಗೊಳಿಸಿದೆ. ಈ ಘಟನೆಗಳಿಂದ ರಾಜ್ಯದ ಜನತೆ ಈ ಸರ್ಕಾರದ ಅಸ್ತಿತ್ವವನ್ನು ಪ್ರಶ್ನಿಸುವಂತಾಗಿದೆ.
ಲಜ್ಜೆಗೆಟ್ಟ ಈ ಸರ್ಕಾರದ ಸರ್ವಾಧಿಕಾರಿ ಧೋರಣೆ, ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ಹಾಗೂ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳಿಗೆ ನೀಡುತ್ತಿರುವ ಕಿರುಕುಳವನ್ನು ಅತ್ಯಂತ ಕಟುವಾಗಿ ಖಂಡಿಸುತ್ತಾ ಡಿವೈಎಸ್ಪಿ ಶ್ರೀ ಎಂ.ಕೆ. ಗಣಪತಿ ಇವರು ಆತ್ಮಹತ್ಯೆಗೂ ಸ್ವಲ್ಪ ಸಮಯ ಮೊದಲು ಮಡಿಕೇರಿಯ ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದ ಹೇಳಿಕೆಯನ್ನು ಆಧರಿಸಿ ಅವರು ಉಲ್ಲೇಖಿಸಿದ ಮಂತ್ರಿ ಕೆ.ಜೆ. ಜಾರ್ಜ್ರವರನ್ನು ಕೂಡಲೇ ಸಂಪುಟದಿಂದ ವಜಾಗೊಳಿಸುವುದು ಹಾಗೂ ಅವರ ಹೇಳಿಕೆಯಲ್ಲಿ ಉಲ್ಲೇಖಿಸಿದ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತ್ತುಗೊಳಿಸಿ ತನಿಖೆ ನಡೆಸುವಂತೆ ಒತ್ತಾಯ ಪೂರ್ವಕವಾಗಿ ಆಗ್ರಹಿಸುತ್ತೇನೆ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.