
ಇಂದು ಪಾಕಿಸ್ತಾನವು ಪರಮಾಣು ಬಾಂಬುಗಳನ್ನು ಹೊಂದಿರುವ ದೇಶವಾಗಿದೆ. ಆದರೆ ಒಂದು ಕಾಲದಲ್ಲಿ ಇಸ್ರೇಲ್ ಪಾಕ್ನ ಪರಮಾಣು ಶಕ್ತಿಯನ್ನು ಸಂಪೂರ್ಣವಾಗಿ ನಾಶಮಾಡಲು ಸಿದ್ಧವಾಗಿತ್ತು ಎಂಬುದು ನಿಮಗೆ ಗೊತ್ತೇ? ಇದಕ್ಕಾಗಿ ಇಸ್ರೇಲಿಗರು ನಮ್ಮ ರಾಷ್ಟ್ರೀಯ ಗುಪ್ತಚರ ಸಂಸ್ಥೆ ‘ರಾ’ (R&AW) ಅನ್ನು ಸಂಪರ್ಕಿಸಿದ್ದರು. ಆದರೆ ಆಗಿನ ಪ್ರಧಾನಮಂತ್ರಿ ಮೋರಾರ್ಜಿ ದೇಸಾಯಿಯವರು ತೆಗೆದುಕೊಂಡ ನಿರ್ಧಾರವು ನಮ್ಮ ಶತ್ರು ದೇಶವನ್ನು ಇನ್ನಷ್ಟು ಬಲಪಡಿಸಿತು. ಹೌದು, ಇದು ಇತಿಹಾಸದಲ್ಲಿ ಯಾರೂ ನಿರಾಕರಿಸಲಾಗದ ಕಹಿ ಸತ್ಯ.
ರಾಜಕೀಯದಲ್ಲಿ ಮೋರಾರ್ಜಿಯವರನ್ನು ನೈತಿಕತೆಯ ಮೇರು ಶಿಖರವೆಂದು ಪರಿಗಣಿಸಲಾಗುತ್ತದೆ, ಆದರೆ ಅವರ ಆಡಳಿತವು ಭಾರತೀಯ ಗುಪ್ತಚರ ವ್ಯವಸ್ಥೆಗೆ (R&AW) ದೊಡ್ಡ ಹೊಡೆತವನ್ನೇ ನೀಡಿತು. ವ್ಯಕ್ತಿಯ ಅತಿಯಾದ ನೈತಿಕತೆ, ಅಹಿಂಸೆ ಮತ್ತು ಗಾಂಧೀವಾದವು ರಾಷ್ಟ್ರೀಯ ಸುರಕ್ಷತೆಯನ್ನು ಗಂಭೀರ ಅಪಾಯಕ್ಕೆ ಹೇಗೆ ತಳ್ಳುತ್ತದೆ ಎಂಬುದಕ್ಕೆ ಮೋರಾರ್ಜಿಯವರ ಆಡಳಿತ ಒಂದು ಉದಾಹರಣೆಯಾಗಿದೆ.
ಪ್ರಧಾನಮಂತ್ರಿ ಮೋರಾರ್ಜಿ ದೇಸಾಯಿಯವರು ಗಾಂಧೀಯ ತತ್ವವನ್ನು ಪ್ರತಿಪಾದಿಸುತ್ತಿದ್ದವರು. ಗುಪ್ತಚರ ಕಾರ್ಯಾಚರಣೆ ಅನೈತಿಕ, ಗೂಢಚರ್ಯೆ ಕಳ್ಳತನಕ್ಕೆ ಸಮಾನ ಮತ್ತು ಶಾಂತಿಯು ಯುದ್ಧಕ್ಕಿಂತ ಮುಖ್ಯ ಎಂಬುದು ಅವರ ವಾದವಾಗಿತ್ತು. 1977ರ ಮಾರ್ಚ್ನಲ್ಲಿ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ವಿರುದ್ಧದ ಆಕ್ರೋಶದಿಂದ ಮೊದಲ ಬಾರಿಗೆ ಕಾಂಗ್ರೇಸ್ಸೇತರ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ, ಮೋರಾರ್ಜಿಯವರು ಮೊದಲು ಮಾಡಿದ ಕೆಲಸ R&AWನ ಬಜೆಟ್ನ್ನು ಕಡಿತಗೊಳಿಸಿದ್ದು. ಇಂದಿರಾ ಗಾಂಧಿಯವರು ಈ ಸಂಸ್ಥೆಯನ್ನು ವೈಯಕ್ತಿಕ ಆಸಕ್ತಿಗಳಿಗಾಗಿ ಬಳಸಿದ್ದಾರೆ ಎಂಬ ಕಾರಣಕ್ಕೆ, ಮೋರಾರ್ಜಿಯವರು ಅಹಿಂಸೆಯ ಹೆಸರಿನಲ್ಲಿ ಚಾಣಕ್ಯ ನೀತಿಯನ್ನು ಕಡೆಗಣಿಸಿ ರಾಷ್ಟ್ರೀಯ ಸುರಕ್ಷತೆಯನ್ನು ಗಾಳಿಗೆ ತೂರಿ ಬಿಟ್ಟರು.
ವಾಸ್ತವವಾಗಿ, ಭಾರತೀಯ ಗುಪ್ತಚರ ವ್ಯವಸ್ಥೆಯ ಜನಕ ಮತ್ತು R&AWನ ಸೃಷ್ಟಿಕರ್ತ ಆರ್.ಎನ್. ಕಾವೊ ಅವರು ಮೋರಾರ್ಜಿಯವರ ಗುಪ್ತಚರ ವಿರೋಧವನ್ನು ಮುಂಚಿತವಾಗಿ ತಿಳಿದಿದ್ದರು. 1977ರ ಜನವರಿಯಲ್ಲೇ ಅವರು ರಾಜೀನಾಮೆ ನೀಡಬೇಕಾಯಿತು. ಸಿಕ್ಕಿಂ ಅಧೀನತೆ ಮತ್ತು ಬಾಂಗ್ಲಾದೇಶ ಮುಕ್ತಿ ಸಂಗ್ರಾಮದಲ್ಲಿ ದೇಶಕ್ಕಾಗಿ ಕೆಲಸ ಮಾಡಿದ ಕಾವೊ ಅವರನ್ನು ದೇಶಭಕ್ತರೆಂದು ಕರೆಯುವ ಬದಲು ಇಂದಿರಾ ಗಾಂಧಿಯವರ ಗುಲಾಮರೆಂದು ಪರಿಗಣಿಸಲಾಯಿತು. ವೃತ್ತಿಪರ ಗುಪ್ತಚರ ಅಧಿಕಾರಿಗೆ ಕನಿಷ್ಠ ಗೌರವವನ್ನೂ ನೀಡದೆ ಅವರನ್ನು ನಿರ್ಲಕ್ಷ್ಯಿಸಿದ ಮೋರಾರ್ಜಿಯವರು ಭಾರತೀಯ ಗುಪ್ತಚರ ವ್ಯವಸ್ಥೆಯ ಬೆನ್ನೆಲುಬನ್ನೇ ಮುರಿದರು. ಕಾವೊ ಅವರ ನಿರ್ಗಮನದೊಂದಿಗೆ R&AWನ ದಶಕಗಳ ಅನುಭವದ ಜಾಲವು ತಕ್ಷಣ ಕುಸಿಯಿತು.
ಕಾವೊ ಅವರ ನಿರ್ಗಮನ ಮತ್ತು ಬಜೆಟ್ನ ಭಾರಿ ಕಡಿತದಿಂದ ವಿದೇಶಗಳಲ್ಲಿನ ಭಾರತದ ‘ಗುಪ್ತ ಕೇಂದ್ರಗಳು’ ಮುಚ್ಚಲ್ಪಟ್ಟವು. ಏಜೆಂಟ್ಗಳು ದಶಕಗಳಲ್ಲಿ ನಿರ್ಮಿಸಿದ ಮಾಹಿತಿದಾರರ ಜಾಲವು ಹಣದ ಕೊರತೆಯಿಂದ ಕುಸಿಯಿತು. ಗೂಢಚಾರತನವನ್ನು ‘ಪಾಪ’ ಎಂದು ಭಾವಿಸಿದ ಮೋರಾರ್ಜಿಯವರು ರಾಷ್ಟ್ರೀಯ ಸುರಕ್ಷತೆಯ ರಕ್ಷಣಾ ಗೋಡೆಯನ್ನು ತುಕ್ಕು ಹಿಡಿಯಲು ಬಿಟ್ಟರು.
ಭಾರತೀಯ ಗುಪ್ತಚರ ಇತಿಹಾಸದ ಅತ್ಯಂತ ದುಃಖದ ಘಟನೆ ‘ಕಹುಟಾ ಲೀಕ್’. ನಮ್ಮ ಏಜೆಂಟ್ಗಳು ಪಾಕಿಸ್ತಾನವು ಗುಪ್ತವಾಗಿ ಪರಮಾಣು ಬಾಂಬ್ ನಿರ್ಮಿಸುತ್ತಿದೆ ಎಂದು ಕಂಡುಹಿಡಿದರು ಮತ್ತು ಅದರ ಕೇಂದ್ರ ಕಹುಟಾ ಕಾರ್ಖಾನೆ ಎಂದು ತಿಳಿದರು. ಈ ವೇಳೆ ಭಾರತೀಯ ಗುಪ್ತಚರರು ಅದ್ಭುತವಾದ ಕೆಲಸವನ್ನೇ ಮಾಡಿದ್ದರು, ಕಾರ್ಖಾನೆ ಸಮೀಪದ ಬಾರ್ಬರ್ ಶಾಪ್ನಿಂದ ಪಾಕಿಸ್ತಾನಿ ಪರಮಾಣು ವಿಜ್ಞಾನಿಗಳ ಕೂದಲು ಮಾದರಿಗಳನ್ನು ಸಂಗ್ರಹಿಸಿ, R&AWನಿಂದ ‘ಪ್ಲೂಟೋನಿಯಂ’ ಬಳಕೆಯ ಸಾಕ್ಷ್ಯವನ್ನು ಸಾಬೀತುಪಡಿಸಿದರು. ಇದಕ್ಕಾಗಿ ಇಸ್ರೇಲ್ನ “ಮೊಸಾದ್” ಸಹಾಯ ಪಡೆದರು.
ಆದರೆ ತನ್ನ ಪ್ರಾಮಾಣಿಕತೆಯನ್ನು ತೋರಿಸಲು ಪ್ರಧಾನಮಂತ್ರಿ ಮೋರಾರ್ಜಿ ದೇಸಾಯಿಯವರು 1978ರ ಅಂತ್ಯದಲ್ಲಿ ಪಾಕಿಸ್ತಾನದ ಸರ್ವಾಧಿಕಾರಿ ಝಿಯಾ-ಉಲ್-ಹಖ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ “ನಮಗೆ ಕಹುಟಾದಲ್ಲಿ ನೀವು ಏನು ಮಾಡುತ್ತಿದ್ದೀರಿ ಎಂದು ಗೊತ್ತು” ಎಂದು ಬಿಟ್ಟರು. ಆ ಒಂದು ವಾಕ್ಯದಿಂದ ಪಾಕಿಸ್ತಾನದಲ್ಲಿನ ಭಾರತದ ಗುಪ್ತಚರ ಜಾಲವು ಬಹಿರಂಗವಾಯಿತು. ನಮ್ಮ ದೇಶದಲ್ಲಿ ಗೂಢಚರರು ಇದ್ದಾರೆ ಎಂಬುದು ಪಾಕಿಸ್ತಾನಕ್ಕೆ ಅರಿವಾಯಿತು: ಅವರು ಬೇಟೆ ಆರಂಭಿಸಿದರು. ಇದರಿಂದ ದಶಕಗಳಲ್ಲಿ ನಿರ್ಮಿತವಾದ ನಮ್ಮ ಗುಪ್ತಚರ ಜಾಲವು ಒಮ್ಮೆಲೇ ನಾಶವಾಯಿತು. ISIಯು ನಮ್ಮ ಎಲ್ಲಾ ಗೂಢಚರರನ್ನು ಗುರುತಿಸಿ, ಕ್ರೂರವಾದ ಯಾತನೆ ನೀಡಿ ಕೊಂದು ಹಾಕಿತು. ಇತಿಹಾಸದಲ್ಲಿ ಒಬ್ಬ ಪ್ರಧಾನಮಂತ್ರಿ ದೇಶದ ಹಿತಾಸಕ್ತಿಯನ್ನು ತನ್ನ ವೈಯಕ್ತಿಕ ‘ನೈತಿಕತೆ’ಗಾಗಿ ಒಪ್ಪಿಸಿದ ಇಂತಹ ಇನ್ನೊಂದು ಉದಾಹರಣೆ ಇಲ್ಲ.
ವಾಸ್ತವವಾಗಿ 1978ರಲ್ಲೇ ಇಸ್ರೇಲ್ ಪಾಕಿಸ್ತಾನದ ಕಹುಟಾ ಕಾರ್ಖಾನೆಯನ್ನು ಸ್ಫೋಟಿಸಲು ಸಿದ್ಧವಾಗಿತ್ತು. ಪಾಕಿಸ್ತಾನದ ಪರಮಾಣು ಪರೀಕ್ಷೆಗಳು ಆರಂಭವಾಗಿವೆ ಎಂದು ಮುಂಚಿತವಾಗಿ ಗುರುತಿಸಿ, ಇಸ್ರೇಲ್ R&AWನ ಸಹಾಯ ಕೋರಿತು. ಪಾಕಿಸ್ತಾನದ ಪರಮಾಣು ಪ್ರಯೋಗಗಳು ಭಾರತದ ವಿರುದ್ಧ ಮಾತ್ರವಲ್ಲದೆ ಅರಬ್ ದೇಶಗಳಿಗೆ (ಲಿಬಿಯಾ, ಇರಾಕ್) ತಲುಪಬಹುದು ಎಂದು ಇಸ್ರೇಲ್ ಭಯಪಟ್ಟಿತು ಮತ್ತು ‘ಇಸ್ಲಾಮಿಕ್ ಬಾಂಬ್’ ಆಗಬಹುದು ಎಂದು ಭಾವಿಸಿತು. ಇದರಿಂದ ಇಸ್ರೇಲ್ ಕಹುಟಾ ಕಾರ್ಖಾನೆಯನ್ನು ಸ್ಫೋಟಿಸುವ ಯೋಜನೆ ಮಾಡಿ, ಭಾರತದ ಗುಪ್ತಚರ ಸಂಸ್ಥೆಯ ಸಹಾಯ ಕೋರಿತು. ಇದಕ್ಕಾಗಿ ಮೊಸಾದ್ ಮುಖ್ಯಸ್ಥ ಮತ್ತು R&AW ಮುಖ್ಯಸ್ಥರ ನಡುವೆ ರಹಸ್ಯ ಸಭೆಗಳೂ ನಡೆದವು. ಇಸ್ರೇಲ್ ತನ್ನ ‘ಎಫ್-16’ ಯುದ್ಧ ವಿಮಾನಗಳನ್ನು ಕಳುಹಿಸಲು ಸಿದ್ಧವಾಗಿತ್ತು ಮತ್ತು ಭಾರತಕ್ಕೆ ಕೇವಲ ‘ಲಾಜಿಸ್ಟಿಕ್’ ಸಹಾಯ (ಉದಾ. ಇಂಧನ ಭರ್ತಿ) ಬೇಕಾಗಿತ್ತು. ಆದರೆ ಮೋರಾರ್ಜಿ ದೇಸಾಯಿಯವರು ತಮ್ಮ ‘ಗಾಂಧೀವಾದ’ ಮತ್ತು ಪ್ರತೀಕಾರದ ಭಯದಿಂದ ಮೊಸಾದ್ ಪ್ರಸ್ತಾಪವನ್ನು ತಿರಸ್ಕರಿಸಿದರು.
ಇದರ ಪರಿಣಾಮವಾಗಿ ಪಾಕಿಸ್ತಾನದಲ್ಲಿ ಮಾಹಿತಿ ನೀಡುವ ‘ಕಣ್ಣು-ಕಿವಿ’ಗಳ (ಗುಪ್ತಚರ ಸಂಪತ್ತುಗಳು)ನ್ನು ಭಾರತ ಕಳೆದುಕೊಂಡಿತು. ಇದರಿಂದಾಗಿ ಗಡಿಯಾಚೆಗಿನ ಪಾಕಿಸ್ತಾನಿ ಭಯೋತ್ಪಾದಕ ಶಿಬಿರಗಳ ವಿಸ್ತರಣೆಯನ್ನು ಪತ್ತೆಹಚ್ಚಲು ವಿಫಲರಾದೆವು. ಅದೇ ಗುಪ್ತಚರ ವ್ಯವಸ್ಥೆಯ ಅನುಪಸ್ಥಿತಿಯಿಂದಾಗಿ ನಿಖರವಾಗಿ ಹತ್ತು ವರ್ಷಗಳ ನಂತರ ಕಾಶ್ಮೀರದಲ್ಲಿ ಭಯೋತ್ಪಾದನೆ ತಲೆ ಎತ್ತಿತು. ಸಾವಿರಾರು ಕಾಶ್ಮೀರಿ ಪಂಡಿತರು ತಮ್ಮ ಸ್ವಂತ ಭೂಮಿಯನ್ನು ತ್ಯಜಿಸಿ ನಿರಾಶ್ರಿತರಾದರು.
ಅಂತಿಮವಾಗಿ ಇದು ಎಷ್ಟು ವಿಚಿತ್ರವೆಂದರೆ 1990ರ ಮೇ 19 ರಂದು ನೆರೆಯ ದೇಶವು ಮೋರಾರ್ಜಿ ದೇಸಾಯಿಯವರಿಗೆ “ನಿಶಾನ್-ಎ-ಪಾಕಿಸ್ತಾನ್” ಪ್ರಶಸ್ತಿಯನ್ನು ನೀಡಿತು. ಕೆಲವರು ಇದನ್ನು ಅವರ ‘ಶಾಂತಿ’ ಪ್ರಯತ್ನಗಳ ಗೌರವ ಎಂದು ಭ್ರಮಿಸುತ್ತಾರೆ, ಆದರೆ ಇದು ಭಾರತೀಯ ಗುಪ್ತಚರ ವ್ಯವಸ್ಥೆಯನ್ನು (R&AW) ನಾಶಮಾಡಿ ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ನಿರ್ಮಿಸಲು ಸಮಯ ಮತ್ತು ಅವಕಾಶ ನೀಡಿದಕ್ಕಾಗಿ ಕೃತಜ್ಞತೆಯ ಉಡುಗೊರೆ ಎಂಬುದು ಅವಿವಾದಿತ ಸತ್ಯ. ದೇಶಕ್ಕಾಗಿ ತ್ಯಾಗ ಮಾಡಿದ ಪ್ರತಿ ಗೂಢಚರನಿಗೆ ಮತ್ತು ಕಾಶ್ಮೀರಿ ಪಂಡಿತರ ಪ್ರತಿ ಕಣ್ಣೀರಿಗೆ ಇದು ಅವಮಾನದ ʼಗುರುತುʼ ಅಲ್ಲವೇ?
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


