ಬೆಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಒಳಮೀಸಲಾತಿ ಜಾರಿಗೊಳಿಸಿದ್ದು, ಈ ಒಂದು ನೀತಿಯಿಂದ ಎಲ್ಲ ಸಮುದಾಯದವರೂ ಅಸಮಾಧಾನಗೊಂಡಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಪಿ. ರಾಜೀವ್ ಅವರು ತಿಳಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸರಕಾರವು ಶೋಷಿತ ಸಮುದಾಯಗಳು, ಎಡ- ಬಲ, ಅಲೆಮಾರಿ ಸಮುದಾಯಗಳಿಗೆ, ನೊಮ್ಯಾಡಿಕ್ ಸಮುದಾಯಗಳಿಗೆ, ಎಲ್ಲ ವರ್ಗಗಳಿಗೂ ಅನ್ಯಾಯ ಮಾಡಿದೆ. ಇದರ ವಿರುದ್ಧ 10ರಂದು ಫ್ರೀಡಂ ಪಾರ್ಕಿನಲ್ಲಿ ನಾವು ಅನಿರ್ದಿಷ್ಟಾವಧಿ ಹೋರಾಟ ಕೈಗೊಳ್ಳಲಿದ್ದೇವೆ ಎಂದು ಪ್ರಕಟಿಸಿದರು. ನ್ಯಾಯ ಸಿಗುವವರೆಗೆ ನಾವು ಹೋರಾಟದಿಂದ ಕದಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಕರ್ನಾಟಕದಲ್ಲಿ 3300 ಲಂಬಾಣಿ ತಾಂಡಾಗಳಿವೆ. ಪ್ರತಿ ತಾಂಡಾಗಳಿಂದ ಜನರು ಈ ಹೋರಾಟದಲ್ಲಿ ಭಾಗವಹಿಸುತ್ತಾರೆ. ಬೋವಿ ಸಮುದಾಯದ ಎಲ್ಲ ಮುಖಂಡರು ಪೂರ್ವಭಾವಿ ಸಭೆ ನಡೆಸಿದ್ದಾರೆ. ಈ ಸಮುದಾಯಗಳ ಜಾಗೃತಿಯ ಕೆಲಸ ನಡೆದಿದೆ ಎಂದು ಮಾಹಿತಿ ನೀಡಿದರು.
ಎಲ್ಲ ಸಮುದಾಯಗಳಲ್ಲೂ ಗೊಂದಲ ಮೂಡಿಸಿದ್ದಾರೆ ಎಂದು ಆಕ್ಷೇಪಿಸಿದರು. ಆದಿ ದ್ರಾವಿಡ, ಆದಿ ಆಂಧ್ರ, ಆದಿ ಕರ್ನಾಟಕ- ಈ 3 ಜಾತಿಗಳನ್ನು ವಿಶೇಷ ವರ್ಗವನ್ನಾಗಿ ಮಾಡಿ ವಿಶೇಷ ಸೌಲಭ್ಯ ಕೊಡಲು ನ್ಯಾ.ನಾಗಮೋಹನದಾಸ್ ಸಮಿತಿ ಆಯೋಗ ಶಿಫಾರಸು ಮಾಡಿತ್ತು. ಈ ಸರಕಾರವು ಕೇವಲ ರಾಜಕೀಯ ತೀರ್ಮಾನ ತೆಗೆದುಕೊಂಡಿದೆ. ಈ ಮೂರೂ ಜಾತಿಯವರು ಪ್ರವರ್ಗ 1, ಪ್ರವರ್ಗ 2ರಲ್ಲಾದರೂ ಸರ್ಟಿಫಿಕೇಟ್ ಪಡೆಯಬಹುದೆಂದು ಹೇಳಿ ಎರಡೂ ಕಡೆ ಅವರಿಗೆ ಜಾತಿ ಸರ್ಟಿಫಿಕೇಟ್ ಸಿಗದಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸರಕಾರದ ಗೊಂದಲದ ನೀತಿ ಇದ್ದಲ್ಲಿ ಅಧಿಕಾರಿಗಳು ಯಾವ ರೀತಿ ವರ್ತಿಸುತ್ತಾರೆ ಎಂಬುದು ಬಹಳ ಸ್ಪಷ್ಟವಿದೆ. ಮಾಧುಸ್ವಾಮಿಯವರ ಸಮಿತಿಯು ಬಂಜಾರ, ಬೋವಿ, ಕೊರಚ, ಕೊರಮ ಸಮುದಾಯಗಳಿಗೆ ಶೇ 4.5 ನೀಡಿತ್ತು. ಅದೇರೀತಿ ಸುಮಾರು 59 ಜಾತಿಗಳಿಗಾಗಿ ಅಲೆಮಾರಿಗಳಿಗೆ ಶೇ 1 ಮೀಸಲಾತಿ ಕೊಟ್ಟಿತ್ತು. ಸಿದ್ದರಾಮಯ್ಯನವರು ಮಾಡಿದ್ದೇನು? ಇವೆರಡನ್ನೂ ಸೇರಿಸಿದರು. ಬಂಜಾರ, ಬೋವಿ, ಕೊರಚ, ಕೊರಮ ಜಾತಿಗಳಿಗೆ 59 ಜಾತಿಗಳನ್ನೂ ಸೇರಿಸಿ 63 ಜಾತಿ ಮಾಡಿದ್ದಾರೆ. ಬೊಮ್ಮಾಯಿಯವರು ಕೊಟ್ಟಷ್ಟೇ ಮೀಸಲಾತಿ ಕೊಟ್ಟಿದರೂ ಶೇ 5.5 ಇವರಿಗೆ ಸಿಗಬೇಕಿತ್ತು. ಆದರೆ, ಅದನ್ನು ಶೇ 5ಕ್ಕೆ ಇಳಿಸಿದ್ದಾರೆ ಎಂದು ದೂರಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 1919ರಲ್ಲಿ ಮೀಸಲಾತಿ ಜಾರಿಯಾಗಿತ್ತು. ಆ ಪಟ್ಟಿಯಲ್ಲಿ ಆರು ಜಾತಿಗಳಿದ್ದವು. ಇದೇ ಶಿಫಾರಸನ್ನು ಡಾ. ಅಂಬೇಡ್ಕರರು 5ನೇ ಶೆಡ್ಯೂಲ್ನಲ್ಲಿ ಇಟ್ಟಿದ್ದರು. ನಂತರ ಬಂದ ಕಾಂಗ್ರೆಸ್ ಪಕ್ಷವು ಎಸ್.ಸಿ.ಯಡಿ ಇದ್ದ 6 ಜಾತಿಗಳನ್ನು 101 ಜಾತಿಗಳಿಗೆ ತಂದಿತ್ತು. ಕಾಂಗ್ರೆಸ್ ಪಕ್ಷವು ಜಾತಿಯ ಸಂಖ್ಯೆಗಳನ್ನು ಹೆಚ್ಚಿಸಿತೇ ಹೊರತಾಗಿ ಮೀಸಲಾತಿಯನ್ನು ಹೆಚ್ಚಿಸಲೇ ಇಲ್ಲ ಎಂದು ಪಿ.ರಾಜೀವ್ ಅವರು ಟೀಕಿಸಿದರು.
ಬಿಜೆಪಿ ಸರಕಾರ ದಿಟ್ಟ ತೀರ್ಮಾನ ಮಾಡಿತ್ತು. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬಸವರಾಜ ಬೊಮ್ಮಾಯಿಯವರು ಎಸ್ಸಿ, ಎಸ್ಟಿಗಳಿಗೆ ಅನುಕೂಲ ಆಗುವಂತೆ ತೀರ್ಮಾನ ತೆಗೆದುಕೊಂಡಿದ್ದರು. ಎಸ್ಸಿ ಮೀಸಲಾತಿಯನ್ನು ಶೇ 15ರಿಂದ 17ಕ್ಕೆ ಏರಿಸಿದ್ದರು. ಎಸ್ಟಿ ಮೀಸಲಾತಿಯನ್ನು ಶೇ 3ರಿಂದ ಶೇ 7ಕ್ಕೆ ಏರಿಸಲಾಗಿತ್ತು. ಸಂವಿಧಾನಾತ್ಮಕ ಹುದ್ದೆ ಎನಿಸಿದ ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯನವರು ರಾಜ್ಯಾದ್ಯಂತ ಪ್ರವಾಸ ಮಾಡಿ ಎಸ್ಸಿಗಳಿಗೆ ಮೂಗಿಗೆ ತುಪ್ಪ ಸವರಿದ್ದಾರೆ. ಇದು ಶೇ 17 ಆಗಿಲ್ಲ. ಮತಬ್ಯಾಂಕ್ ರಾಜಕೀಯವಿದು ಎಂದು ತಿಳಿಸಿದ್ದರು. ಇವತ್ತು ಸಿದ್ದರಾಮಯ್ಯನವರು ಎಸ್ಸಿ ಸಮುದಾಯಕ್ಕೆ ಶೇ 17 ಮೀಸಲಾತಿ ಕೊಟ್ಟಿದ್ದಾರೆ. ಅವರು ರಾಜ್ಯದ ಜನರಿಗೆ ಸ್ಪಷ್ಟನೆ ಕೊಡಬೇಕಿತ್ತು ಎಂದು ಆಗ್ರಹಿಸಿದರು.
ತುಳಿತಕ್ಕೆ ಒಳಗಾದ ಪರಿಶಿಷ್ಟ ಜಾತಿ, ಸಮುದಾಯಗಳಿಗೆ ನ್ಯಾಯ ಕೊಡುತ್ತೇವೆಂದು ತಿಳಿಸಿ, ಸಾಮಾಜಿಕ ನ್ಯಾಯದ ಹರಿಕಾರರೆಂದು ತಮ್ಮನ್ನು ತಾವು ಬಿಂಬಿಸಿಕೊಂಡ ಸಿದ್ದರಾಮಯ್ಯನವರು ಪರಿಶಿಷ್ಟ ಜಾತಿಗಳಿಗೆ ನ್ಯಾಯ ಕೊಡುವ ನಿಟ್ಟಿನಲ್ಲಿ ಕೇವಲ ರಾಜಕೀಯ ದೃಷ್ಟಿಕೋನ ವ್ಯಕ್ತಪಡಿಸಿದ್ದಾರೆ. ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಟೀಕಿಸಿದರು.
ಶಾಸಕರಾದ ಮಾನಪ್ಪ ಡಿ.ವಜ್ಜಲ್ ಮತ್ತು ಕೃಷ್ಣ ನಾಯ್ಕ್, ಭೋವಿ ಸಮಾಜದ ಮುಖಂಡ ಓಬದೇನಹಳ್ಳಿ ಮುನಿಯಪ್ಪ, ವೆಂಕಟೇಶ್ ಮೌರ್ಯ ಅವರು ಹಾಜರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.