ಬೆಂಗಳೂರು: ಸಿದ್ದರಾಮಯ್ಯ ಅರ್ಕಾವತಿ ಹಗರಣಕ್ಕೆ ಸಂಬಂಧಿಸಿ ಜಸ್ಟಿಸ್ ಕೆಂಪಣ್ಣನವರ ಆಯೋಗದ ವರದಿಯನ್ನು ನಮ್ಮ ಮುಖ್ಯಮಂತ್ರಿಯವರು ಸದನದಲ್ಲಿ ಮಂಡಿಸಿದ್ದಾರೆ. ಸಿದ್ರಾಮಣ್ಣ ಅವರು ಕೆಲವೇ ದಿನಗಳಲ್ಲಿ ಜೈಲಿಗೆ ಹೋಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಪಡಿಸಿದರು.
ರಾಯಚೂರಿನ ಲಿಂಗಸುಗೂರಿನಲ್ಲಿ ಇಂದು ವಿಜಯ ಸಂಕಲ್ಪ ಯಾತ್ರೆ ಹಾಗೂ ಪೇಜ್ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಅಭಿವೃದ್ಧಿಯ ಹರಿಕಾರ ಯಡಿಯೂರಪ್ಪನವರಿಗೆ ಬೇಡಿಕೆ- ಜನಬೆಂಬಲ ಇದೆ. ಸಿದ್ರಾಮಣ್ಣನಿಗೆ ಇಲ್ಲ. 5 ವರ್ಷ ಆಡಳಿತ ಮಾಡಿದ ಸಿದ್ರಾಮಣ್ಣನ ಅವಧಿಯಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಅವಧಿಯಲ್ಲಿ ಅಧಿಕಾರಿಗಳ ಆತ್ಮಹತ್ಯೆ ನಿರಂತರವಾಗಿತ್ತು. ಸಿದ್ರಾಮಣ್ಣನ ಕಾಲದಲ್ಲಿ ರೌಡಿರಾಜ್ಯ ಇತ್ತು ಎಂದು ಆರೋಪಿಸಿದರು.
24 ಜನ ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಹಿಂದೂ- ಮುಸ್ಲಿಮರ ನಡುವೆ ಕಲಹಕ್ಕಾಗಿ ಟಿಪ್ಪು ಜಯಂತಿ ಆರಂಭಿಸಿದರು. ಗಲಭೆಗಳನ್ನು ಸೃಷ್ಟಿಸಿದರು. ಹಿಂದುಳಿದ ವರ್ಗಗಳನ್ನು, ಕುರುಬರನ್ನು ತುಳಿದರು. ಕನಕ ಜಯಂತಿಯನ್ನು ಯಡಿಯೂರಪ್ಪ ಮಾಡಿದರು ಎಂದರು. ಸಿದ್ರಾಮಣ್ಣ ಸಮಾಜ ಒಡೆಯಲು ಮುಂದಾದರು ಎಂದರು.
ಸಿದ್ದರಾಮಣ್ಣ ಕಾಂಗ್ರೆಸ್ ಕಾರ್ಯಕರ್ತರಿಗೆ ಬಿಜೆಪಿ ಗೆಲ್ಲಿಸಲು ಮತ್ತು ಕಾಂಗ್ರೆಸ್ ಸೋಲಿಸಲು ಕರೆ ನೀಡಿದ್ದಾರೆ. ಅವರಿಗೆ ಕೃತಜ್ಞತೆಗಳು ಎಂದರು.
ಸಿದ್ರಾಮಣ್ಣ ಆಡಳಿತ ಮಾಡುತ್ತಿದ್ದಾಗ ಜೈಲುಗಳಲ್ಲೂ ಮರ್ಡರ್, ಸಮಾಜದಲ್ಲೂ ಹತ್ಯೆ ನಿರಂತರವಾಗಿತ್ತು. ಅದು ಹಲ್ಲೆ, ಹತ್ಯೆಗಳ, ನರಮೇಧಗಳ ಕಾಲವಾಗಿತ್ತು. ಹಾಸ್ಟೆಲ್ನಲ್ಲಿ ಹಗರಣ, ಪಿಎಸ್ಐ ಹಗರಣ, ಶಿಕ್ಷಕರ ಹಗರಣ, ಅರ್ಕಾವತಿ ನುಂಗಿ ನೀರು ಕುಡಿದವರು ಸಿದ್ರಾಮಣ್ಣ ಎಂದು ಟೀಕಿಸಿದರು.
ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಸಿದ್ದರಾಮಣ್ಣ, ಡಿ.ಕೆ.ಶಿವಕುಮಾರ್ ನಿರುದ್ಯೋಗಿಗಳಾಗಲಿದ್ದಾರೆ. ಎಲ್ಲೆಡೆ ಬಿಜೆಪಿ ಪರ ಅಲೆ ಇದೆ. ಮತ್ತೆ ಬಿಜೆಪಿ ಆಡಳಿತ ಬರಲಿದೆ ಎಂದು ಹುಲಿಯಾ ಕಾಡಿಗೆ ಹೋಗಲಿದೆ. ಬಂಡೆ ಒಡೆದು ಹೋಗಲಿದೆ. ಬಿಜೆಪಿಯ ಕಮಲ ಅರಳಲಿದೆ ಎಂದು ತಿಳಿಸಿದರು.
ರಾಯಚೂರು ಕಲ್ಯಾಣ ಕರ್ನಾಟಕದ ಅನ್ನದ ಬಟ್ಟಲು. ಚಿನ್ನದ ನಾಡಿದು. ಆದರೆ, 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಚಿನ್ನದ ಬಟ್ಟಲನ್ನು ಕಬ್ಬಿಣದ, ಕಲ್ಲಿನ ಬಟ್ಟಲಾಗಿ ಮಾಡಿದೆ. ಇಲ್ಲಿ ಅಭಿವೃದ್ಧಿ ಮಾಡದೆ ಲೂಟಿ ಹೊಡೆಯುವ ಕಾರ್ಯ ಮಾಡಿದೆ ಎಂದು ಆರೋಪಿಸಿದರು. ಬಿಜೆಪಿ ಈ ಭಾಗದ ಅಭಿವೃದ್ಧಿಗೆ ಗರಿಷ್ಠ ಅನುದಾನ ನೀಡಿದೆ ಎಂದು ವಿವರಿಸಿದರು.
ಬಾದಾಮಿಯಿಂದ ಸಿದ್ರಾಮಣ್ಣನನ್ನು ಓಡಿಸಿದ್ದಾರೆ. ವರುಣಾಕ್ಕೆ ಬರಲು ಬಿಡುವುದಿಲ್ಲ. ಕೋಲಾರದಲ್ಲಿ ಜಾಗ ಇಲ್ಲ. ಮಾಜಿ ಮುಖ್ಯಮಂತ್ರಿಗೆ ಸೀಟೇ ಇಲ್ಲ ಎಂಬ ಪರಿಸ್ಥಿತಿ ಬಂದಿದೆ. ಕಾಂಗ್ರೆಸ್ನಲ್ಲಿ ಅವರು ಅಲೆಮಾರಿಯಾಗಿದ್ದಾರೆ ಎಂದು ಟೀಕಿಸಿದರು. ಮಾಜಿ ಸಿಎಂಗೆ ಕ್ಷೇತ್ರ ಇಲ್ಲದ ಪರಿಸ್ಥಿತಿ ಇದೆ. ಸಿದ್ರಾಮಣ್ಣನಿಗೆ ಸೀಟಿಲ್ಲ. ಕಾಂಗ್ರೆಸ್ಸಿಗೆ ಓಟಿಲ್ಲ ಎಂದು ನಿರ್ಧರಿಸಿ ಎಂದು ಮನವಿ ಮಾಡಿದರು.
ಲೋಕಾಯುಕ್ತ ಮುಚ್ಚಿದ ಎಸಿಬಿ ತೆರೆದ ಸಿದ್ರಾಮಣ್ಣನ ಕಾಲ ಭ್ರಷ್ಟಾಚಾರಿಗಳ ಕಾಲ. ಅವರು ಸ್ಯಾಂಡ್ ಮಾಫಿಯ, ಲ್ಯಾಂಡ್ ಮಾಫಿಯ ಮತ್ತು ಡ್ರಗ್ ಮಾಫಿಯದಿಂದ ಬದುಕಿದ್ದರು ಎಂದು ಆಕ್ಷೇಪಿಸಿದರು. ಇವೆಲ್ಲವನ್ನೂ ಬಿಜೆಪಿ ಆಡಳಿತ ನಿಯಂತ್ರಿಸಿದೆ ಎಂದು ತಿಳಿಸಿದರು.
ರೈತರ ಬಜೆಟ್, ಸಂಧ್ಯಾ ಸುರಕ್ಷೆ ಯೋಜನೆ, ಹಾಲಿಗೆ ಬೆಂಬಲ ಬೆಲೆ ನೀಡಿದವರು ಯಡಿಯೂರಪ್ಪನವರು. ಕಲ್ಯಾಣ ಕರ್ನಾಟಕಕ್ಕೆ ಗರಿಷ್ಠ ಅನುದಾನ ಕೊಟ್ಟಿದ್ದಾರೆ. ರೈತ ವಿದ್ಯಾ ನಿಧಿಯನ್ನು ಬೊಮ್ಮಾಯಿ ಸರಕಾರ ಕೊಟ್ಟಿದೆ. ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದೆ. ಉಚಿತ ವಿದ್ಯುತ್ ನೀಡಿದೆ. ಅನೇಕ ಕಲ್ಯಾಣ ಯೋಜನೆಗಳನ್ನು ನಮ್ಮ ಸರಕಾರ ಮಾಡಿದೆ ಎಂದ ಅವರು, ಅಧಿಕಾರದಲ್ಲಿದ್ದಾಗ ಕರೆಂಟ್ ಕೊಡದವರು ಈಗ ಉಚಿತ ವಿದ್ಯುತ್ ಕೊಡುವುದು ಎಲ್ಲಿಂದ ಎಂದು ಪ್ರಶ್ನಿಸಿದರು.
ಪಾಕಿಸ್ತಾನದ ಜನರು ತಮ್ಮ ದೇಶಕ್ಕೆ ನರೇಂದ್ರ ಮೋದಿಜಿ ಪ್ರಧಾನಿ ಆಗಲಿ ಎಂದು ಬಯಸುವಂತಾಗಿದೆ. ಭಾರತ ಎದ್ದು ನಿಂತಿದೆ. ದೇಶ ಜಗದ್ವಂದ್ಯ ಆಗುತ್ತಿದೆ ಎಂದ ಅವರು, ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಮೋದಿಜಿ ಜನಪ್ರಿಯತೆ ಹೆಚ್ಚಾಗಿದೆ. ಅವರ ಜನಪರ ಯೋಜನೆಗಳು, ರಾಜ್ಯದ ಬಿಜೆಪಿ ಸರಕಾರದ ಜನೋಪಯೋಗಿ ಯೋಜನೆಗಳನ್ನು ಗಮನಿಸಿ ಜನರು ಬಿಜೆಪಿಯನ್ನು ಮತ್ತೆ ಗೆಲ್ಲಿಸುವುದು ಖಚಿತ ಎಂದು ವಿಶ್ವಾಸದಿಂದ ನುಡಿದರು.
ಮನೆಮನೆಗೆ ಗಂಗೆ, ಆಯುಷ್ಮಾನ್, ಕಿಸಾನ್ ಸಮ್ಮಾನ್, ಮನೆಮನೆಗೆ ಜ್ಯೋತಿ, ಶೌಚಾಲಯ, ರೈತ ವಿದ್ಯಾ ನಿಧಿ ಸೇರಿ ಅನೇಕ ಯೋಜನೆಗಳನ್ನು ಕೊಟ್ಟ ಬಿಜೆಪಿ ಸರಕಾರವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು. ಮತ್ತೊಂದು ಬಾರಿ ಆಶೀರ್ವಾದ ಮಾಡಬೇಕು ಎಂದು ಜನರಲ್ಲಿ ವಿನಂತಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.