ಬೆಂಗಳೂರು: ರಾಜ್ಯ ಬಿಜೆಪಿಯ 24 ಪ್ರಕೋಷ್ಠಗಳ ರಾಜ್ಯ ಸಮಾವೇಶ “ಶಕ್ತಿಸಂಗಮ” ವು ಡಿಸೆಂಬರ್ 18ರಂದು ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ನಡೆಯಲಿದೆ. ಕ್ರಿಯಾಶೀಲ ಕಾರ್ಯಕರ್ತರ ಸಮಾವೇಶ ‘ಶಕ್ತಿಸಂಗಮ’ ಎಂದು ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಂ.ಬಿ. ಭಾನುಪ್ರಕಾಶ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡಲ, ಜಿಲ್ಲೆ ಹಾಗೂ ರಾಜ್ಯ ಸಮಿತಿ ಸಂಚಾಲಕ, ಸಹ-ಸಂಚಾಲಕರು, ಜಿಲ್ಲಾ ಸಂಯೋಜಕರು, ಸಂಕುಲ ಪ್ರಮುಖರು ಇದಕ್ಕೆ ಅಪೇಕ್ಷಿತರು. 16 ಸಾವಿರದಿಂದ 18 ಸಾವಿರ ಜನರನ್ನು ಆಹ್ವಾನಿಸಲಾಗಿದೆ. 15ರಿಂದ 16 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಪ್ರತಿ ಪ್ರಕೋಷ್ಠದ ಕ್ಷೇತ್ರದಲ್ಲಿನ ಗಣ್ಯಮಾನ್ಯರನ್ನು ಸಂಪರ್ಕಿಸಿ ಆಹ್ವಾನ ನೀಡಲಾಗುವುದು. ಸುಮಾರು 500 ಜನ ರಾಜ್ಯಾದ್ಯಂತ ನಮ್ಮ ಪಕ್ಷದ ಮಂತ್ರಿಗಳು, ಶಾಸಕರನ್ನು ಆಹ್ವಾನಿಸಿದ್ದೇವೆ. ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರ ಅಧ್ಯಕ್ಷತೆಯಲ್ಲಿ ಈ ಸಮಾವೇಶ ನಡೆಯಲಿದ್ದು, ಕೇಂದ್ರದ ರೈಲ್ವೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಉದ್ಘಾಟಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಉಪಸ್ಥಿತರಿರುತ್ತಾರೆ. ಸಮಾರೋಪವನ್ನು ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ನೆರವೇರಿಸಲಿದ್ದಾರೆ. ಸಮಾವೇಶದಲ್ಲಿ ಸಾಂಸ್ಕೃತಿಕ ಪ್ರಕೋಷ್ಠದ ಸದಸ್ಯರಿಂದ ಕಾರ್ಯಕ್ರಮ ನೀಡಲಾಗುವುದು ಎಂದರು.
ಸಮಾವೇಶದಲ್ಲಿ ಭಾಗವಹಿಸುವರಿಗಾಗಿ ಪ್ರತ್ಯೇಕ ಬ್ಲಾಕ್ ರಚನೆ ಮಾಡಿ ಕುಳಿತುಕೊಳ್ಳುವ ಅವಕಾಶ ಮಾಡಿಕೊಡಲಾಗುವುದು. ಇದು ವೃತ್ತಿ ಆಧಾರಿತ ಕಾರ್ಯಕರ್ತರ ಸಮಾವೇಶ. ಹಾಗಾಗಿ ವೈಶಿಷ್ಟ್ಯಪೂರ್ಣ-ವೈವಿಧ್ಯಮಯವಾಗಿ ಬರಲು ಸೂಚಿಸಿದ್ದೇವೆ. ಸಮಾವೇಶದ ಯಶಸ್ಸಿಗಾಗಿ ಎಲ್ಲಾ ಹಂತಗಳಲ್ಲಿ ಸಭೆ, ಬೈಠಕ್ ಆಯೋಜಿಸಲಾಗಿದೆ. ರಾಜ್ಯದ ತಂಡದ ಜೊತೆ ಜಿಲ್ಲಾ, ಮಂಡಲ ತಂಡ ಸಹಕರಿಸುತ್ತಿರುವುದೇ ಅಲ್ಲದೆ, 10 ಜನ ಪೂರ್ಣ ಸಮಯ ನೀಡಿಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಪ್ರಕೋಷ್ಠವು ಕೀ ಓಟರ್ಸ್ಗಳನ್ನು ಒಳಗೊಂಡಿದ್ದು, ನಿರ್ದಿಷ್ಟವಾಗಿ ಸಮಾಜದಲ್ಲಿ ಮತಗಳನ್ನು ತಂದು ಕೊಡುವ ನಿರೀಕ್ಷೆ ಇದೆ. 2023ರ ಚುನಾವಣೆಯಲ್ಲಿ ನಮ್ಮ ಬೂತ್ ನಮ್ಮ ಹೆಮ್ಮೆ ಎಂಬ ಪ್ರತಿಜ್ಞೆ ಮಾಡಿ ಶೇ 50ಕ್ಕಿಂತ ಹೆಚ್ಚು ಮತ ಗಳಿಸುವತ್ತ ಕಾರ್ಯ ಪ್ರವೃತ್ತರಾಗಲಿದ್ದಾರೆ ಎಂದರು.
ಬಿಜೆಪಿ ಆರಂಭದ ದಿನದ ಜನಸಂಘ ಒಂದು ರಾಜಕೀಯ ಪಕ್ಷ ಹಾಗೂ ಒಂದೇ ವಿಚಾರಧಾರೆಯ ಯಾತ್ರೆ ಸಾಗಿ ಬಂದಿದೆ. ಅದೆಂದರೆ, ವಿಶ್ವದ ಅಗ್ರಗಣ್ಯ ರಾಷ್ಟ್ರವನ್ನಾಗಿ ಮಾಡುವುದು. ತನ್ನ ಗುರಿ ಸಾಧನೆಗಾಗಿ ವೈಶಿಷ್ಟ್ಯ ಪೂರ್ಣವಾದ ಕಾರ್ಯಪದ್ಧತಿಯನ್ನು ಸಂಘಟನೆಯಲ್ಲಿ ಅಳವಡಿಸಿಕೊಂಡು, ಕಾರ್ಯಕರ್ತರ ನಿರ್ಮಾಣ ಮಾಡುತ್ತಾ ಬಂದಿದೆ. ಇದೊಂದು ಯಶಸ್ವೀ ಕಾರ್ಯ ಪದ್ಧತಿಯೆಂದು ಸಾಬೀತಾಗಿದೆ ಹಾಗೂ ಪರಿಗಣಿಸಲ್ಪಟ್ಟಿದೆ ಎಂದರು.
ಯಶಸ್ಸಿಗಾಗಿ ವ್ಯವಸ್ಥೆಯ ತಂಡ ರಚನೆ
ಇದರ ಯಶಸ್ಸಿಗಾಗಿ ವ್ಯವಸ್ಥೆಯ ತಂಡವನ್ನು ರಚಿಸಿಕೊಂಡು ವಿಭಾಗ ಪ್ರಭಾರಿ, ವಿಧಾನ ಪರಿಷತ್ತಿನ ಸದಸ್ಯ ಗೋಪಿನಾಥ ರೆಡ್ಡಿ, ಬೆಂಗಳೂರು ಕೇಂದ್ರದ ಅಧ್ಯಕ್ಷ ಮಂಜುನಾಥ್, ವಿಭಾಗ ಸಂಘಟನಾ ಕಾರ್ಯದರ್ಶಿ ದಶರಥರವರ ಸಹಕಾರದಿಂದ ಕಾರ್ಯ ಮಾಡುತ್ತಿದ್ದೇವೆ. ರಾಜ್ಯ ಉಪಾಧ್ಯಕ್ಷ ನಿರ್ಮಲ್ಕುಮಾರ್ ಸುರಾಣ ಹಾಗೂ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ. ರಾಜೇಶ್ರವರ ಮಾರ್ಗದರ್ಶನದಲ್ಲಿ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಪ್ರತಿ ಪ್ರಕೋಷ್ಠಗಳ ಹೆಸರಿಗೆ ತಕ್ಕಂತೆ, ತಮ್ಮದೇ ಕಾರ್ಯ ತಮ್ಮ ವ್ಯಾಪ್ತಿ, ಪ್ರಕೋಷ್ಠದ ಗುರಿ, ಗುರಿ ಸಾಧನೆಗಾಗಿ ಕಾರ್ಯ ಪದ್ಧತಿ, ಇದರಿಂದಾಗಿ ಕಾರ್ಯಕರ್ತನ ತಯಾರಿ ಮಾಡಿ ಸಮಾಜದ ವಿವಿಧ ರಂಗಗಳಲ್ಲಿರುವ ಸಮಾಜದ ಬಂಧುಗಳನ್ನು ತಲುಪುವ ವ್ಯವಸ್ಥೆ ಆಗಿ, ಯಶಸ್ಸು ಸಿಗುತ್ತಿದೆ ಎಂದು ತಿಳಿಸಿದರು.
ಪಕ್ಷದ 35 ಸಂಘಟನಾ ಜಿಲ್ಲೆಗಳಲ್ಲಿ ಈಗಾಗಲೇ ಸಮಾವೇಶಗಳನ್ನು ನಡೆಸಲಾಗಿದೆ. ಇದು ವೃತ್ತಿವಂತರ ಸಮಾವೇಶ ಎಂದು ತಿಳಿಸಿದರು. ಮೂಲ ವಿಚಾರ ಸಿದ್ಧಾಂತದಲ್ಲಿ ರಾಜೀಮಾಡಿಕೊಳ್ಳದೇ, ಸಮಯ, ಸಂದರ್ಭ, ಅವಶ್ಯಕತೆಗಳಿಗೆ ಅನುಗುಣವಾಗಿ, ವಿವಿಧ ಹಂತದ ಸಂಘಟನಾ ಸಮಿತಿಗಳು, ಮೋರ್ಚಾಗಳನ್ನು ಹಾಗೆಯೇ ಪ್ರಕೋಷ್ಠಗಳನ್ನು ರಚನೆ ಮಾಡಿ. ಸಮಾಜದ ಪ್ರತಿಯೊಬ್ಬರಿಗೂ, ತನ್ನ ಆಸಕ್ತಿ, ಅರ್ಹತೆ ಸಮಯಾವಕಾಶಕ್ಕೆ ತಕ್ಕಂತೆ ರಾಷ್ಟ್ರ ಕಾರ್ಯದಲ್ಲಿ ತಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಟ್ಟಿದೆ ಎಂದು ನುಡಿದರು.
ಈ ಮೊದಲು ಬೇರೆ ಬೇರೆ ರೀತಿಯ ಪ್ರಕೋಷ್ಠಗಳನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ರಚನೆ ಮಾಡಿಕೊಂಡು ಕಾರ್ಯ ನಡೆಯುತ್ತಿತ್ತು. ರಾಷ್ಟ್ರೀಯ ಸ್ತರದ ಚಿಂತನೆಯ ಫಲವಾಗಿ ಹಾಲು ಉತ್ಪಾದಕರು, ಹಿರಿಯ ನಾಗರಿಕರ ಪ್ರಕೋಷ್ಠಗಳು ಸೇರಿದಂತೆ 20 ಪ್ರಕೋಷ್ಠಗಳು, 4 ವಿಭಾಗಗಳು ಸೇರಿ 24 ಪ್ರಕೋಷ್ಠದಡಿಯಲ್ಲಿ ಕಾರ್ಯ ನಿರ್ವಹಿಸುವ ವ್ಯವಸ್ಥೆ ಫಲವೇ ಇಂದಿನ ಪ್ರಕೋಷ್ಠಗಳು. ಈ ವರೆಗೆ ರಚಿಸಿರುವ ಸಮಿತಿಗಳಲ್ಲಿ ಕಾರ್ಯಕರ್ತರನ್ನು ಗುರ್ತಿಸಿ ಪ್ರಕೋಷ್ಠಗಳಲ್ಲಿ ಸುಮಾರು 25 ಸಾವಿರ ಜನರನ್ನು ಜೋಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.
ಸಂಘಟನಾತ್ಮಕವಾಗಿ ಕೆಲವು ಪ್ರಕೋಷ್ಠಗಳು ಮಂಡಲದವರೆಗೆ, ಕೆಲವು ಜಿಲ್ಲೆಯವರೆಗೆ ಸಮಿತಿ ರಚಿಸಿ, ಕಾರ್ಯಕರ್ತರನ್ನು ಜೋಡಿಸಿಕೊಂಡು ತಮ್ಮ ಪ್ರಕೋಷ್ಠದ ಪರಿವಾರವನ್ನು ಸಂಘಟಿಸುವುದರಲ್ಲಿ ಪ್ರಯತ್ನಿಸುತ್ತಿದ್ದಾರೆ. ನಿಯಮಿತ ಸಭೆಗಳು, ನಿರಂತರ ಚಟುವಟಿಕೆಗಳು, ಸೇವಾಕಾರ್ಯಗಳು, ಪ್ರಶಿಕ್ಷಣ ವರ್ಗಗಳು, ಜಿಲ್ಲಾ ಸ್ತರದ ಸಮಾವೇಶಗಳನ್ನು ಸಂಘಟಿಸುತ್ತಾ ಪ್ರಕೋಷ್ಠಗಳ ಕಾರ್ಯಕ್ಕೆ ಶಕ್ತಿ ತುಂಬಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರಿಗೆ ಮೊದಲ ಆಹ್ವಾನಪತ್ರವನ್ನು ಹಸ್ತಾಂತರ ಮಾಡಲಾಯಿತು. ಸಹ ಸಂಯೋಜಕರಾದ ಡಾ|| ಎ.ಹೆಚ್. ಶಿವಯೋಗಿಸ್ವಾಮಿ, ಜಯತೀರ್ಥ ಕಟ್ಟಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.