ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ರಾಜ್ಯದ ಒಟ್ಟು ಸರಾಸರಿಗಿಂತ ರಾಜ್ಯದ 5 ಜಿಲ್ಲೆಗಳಲ್ಲಿ ಕೊರೋನಾ ಸೋಂಕಿತರ ಪ್ರಮಾಣ ಹೆಚ್ಚಾಗಿದೆ ಎಂದು ಕೊರೋನಾ ತಾಂತ್ರಿಕ ಸಮಿತಿ ತಿಳಿಸಿದೆ.
ರಾಜ್ಯದ ಸರಾಸರಿ ಪಾಸಿಟಿವಿಟಿ ದರ ಕಳೆದ ಏಳು ದಿನಗಳಿಂದ 1.6 % ಗಳಷ್ಟಿದೆ. ಆದರೆ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರ್ಗಿ, ಬೆಂಗಳೂರು ನಗರಗಳ ಕೊರೋನಾ ಸಕಾರಾತ್ಮಕ ಪ್ರಕರಣಗಳ ಸರಾಸರಿ 2.2 ರಿಂದ 3.2% ಗಳಷ್ಟಿದೆ ಎಂದು ಸಮಿತಿ ಹೇಳಿದೆ. ಈ ಐದು ಜಿಲ್ಲೆಗಳು ನೆರೆಯ ರಾಜ್ಯಗಳ ಜೊತೆಗೆ ಗಡಿ ಹಂಚಿಕೊಂಡಿದ್ದು, ಅತೀ ಹೆಚ್ಚು ಅಂತರಾಜ್ಯ ಸಂಚಾರ ಕಂಡುಬರುತ್ತಿದೆ. ಇದೇ ಕಾರಣದಿಂದ ಕೊರೋನಾ ಏರಿಕೆಯಾಗಿರುವ ಸಾಧ್ಯತೆ ಇರುವುದಾಗಿಯೂ ಸಮಿತಿ ತಿಳಿಸಿದೆ.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಮಹಾರಾಷ್ಟ್ರದ ಜೊತೆಗೆ ಗಡಿ ಹಂಚಿಕೆ ಮಾಡಿಕೊಂಡಿಲ್ಲ. ಆದರೆ ಮಂಗಳೂರು – ಮುಂಬೈ ನಡುವೆ ವಿಮಾನ ಸೇವೆ, ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿಯೂ ಮಹಾರಾಷ್ಟ್ರದ ಜನರ ಓಡಾಟವಿದ್ದು, ಇದರಿಂದಲೂ ಕೊರೋನಾ ಸೋಂಕು ವ್ಯಾಪಿಸಿರುವ ಸಾಧ್ಯತೆ ಇದೆ. ಜೊತೆಗೆ ಮಂಗಳೂರು ಕೊರೋನಾ ಸೋಂಕಿತರ ಪ್ರಕರಣ ಹೆಚ್ಚಿರುವ ನೆರೆಯ ಕೇರಳ ರಾಜ್ಯದ ಜೊತೆಗೂ ಸಂಪರ್ಕ ಹೊಂದಿದ್ದು, ಈ ಕಾರಣದಿಂದಲೂ ಕೊರೋನಾ ಹೆಚ್ಚಾಗಿರುವ ಸಾಧ್ಯತೆ ಇರುವುದಾಗಿ ತಿಳಿಸಿದೆ.
ಮೈಸೂರು ಸಹ ನೆರೆಯ ಕೇರಳದ ಜೊತೆಗೆ ಗಡಿ ಹಂಚಿಕೊಂಡಿದ್ದು, ಇಲ್ಲಿಯೂ ಹೆಚ್ಚು ನಿಗಾ ವಹಿಸುವ ಅಗತ್ಯ ಇರುವುದಾಗಿ ಕೊರೋನಾ ತಾಂತ್ರಿಕ ಸಮಿತಿ ಹೇಳಿದೆ. ಹಾಗೆಯೇ, ರಾಜ್ಯದಲ್ಲಿ ಶವ ಸಂಸ್ಕಾರಗಳಲ್ಲಿ 20 ಕ್ಕಿಂತ ಹೆಚ್ಚು ಜನರು ಸೇರದಂತೆ, ಮದುವೆ ಮೊದಲಾದ ಸಮಾರಂಭಗಳಲ್ಲಿ 100 ರಿಂದ 200 ಜನರ ಮಿತಿ ಮೀರದಂತೆ ಕಠಿಣ ನಿಯಮಗಳನ್ನು ಜಾರಿಗೊಳಿಸುವಂತೆಯೂ ಸರ್ಕಾರಕ್ಕೆ ಸಲಹೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.