ಬೆಂಗಳೂರು: ರಾಜ್ಯ ಬಿಜೆಪಿ ವತಿಯಿಂದ ನಡೆದಿದ್ದ ಜನಸೇವಕ ಸಮಾವೇಶದ ಸಮಾರೋಪ ಸಮಾರಂಭ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಕೇಂದ್ರ ಗೃಹಸಚಿವ ಅಮಿತ್ ಶಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ ಬಿಜೆಪಿ ಬೆಂಬಲಿಗ ಅಭ್ಯರ್ಥಿಗಳಿಗೆ ಸ್ವಾಗತ ಕೋರುವ, ಮುಂಬರುವ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಹೆಚ್ಚಿನ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲುವಂತಾಗುವ ಸಲುವಾಗಿ ಜನಸೇವಕ ಸಮಾವೇಶವನ್ನು ಬಿಜೆಪಿ ಆಯೋಜಿಸಿತ್ತು. ಅದರಂತೆ ಐದು ತಂಡಗಳಲ್ಲಿ ರಾಜ್ಯದಲ್ಲಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಮೂರು ದಿನಗಳ ಕಾಲ ನಡೆದಿದ್ದ ಈ ಸಮಾವೇಶದ ಸಮಾರೋಪ ಬೆಳಗಾವಿಯಲ್ಲಿ ನಡೆದಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿಯ ಚಾಣಕ್ಯ ಶಾ, ಕರ್ನಾಟಕದ ಇತಿಹಾಸವನ್ನು ಮರೆಯುವುದ ಸಾಧ್ಯವಿಲ್ಲ. ಈ ರಾಜ್ಯದ ಇತಿಹಾಸ ದೇಶಕ್ಕೇ ಹೆಮ್ಮೆ ಎಂದು ತಿಳಿಸಿದರು. ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಸಾಧನೆ ಮೆರೆದ ಬೆಳವಾಡಿ ಮಲ್ಲಮ್ಮ, ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಸೇರಿದಂತೆ ಹಲವರು ಮಹನೀಯರನ್ನು ಈ ಸಂದರ್ಭದಲ್ಲಿ ಶಾ ಸ್ಮರಿಸಿಕೊಂಡರು. ಹಾಗೆಯೇ ಸಂಗೀತ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ ಪಂಡಿತ್ ಸವಾಯಿ ಗಂಧರ್ವ, ಗಂಗೂಬಾಯಿ ಹಾನಗಲ್, ಪಂಡಿತ್ ಬಸವರಾಜ ರಾಜಗುರು, ಪಂಡಿತ್ ಕುಮಾರ ಗಂಧರ್ವ, ಭಾರತ ರತ್ನ ಭೀಮಸೇನ್ ಜೋಶಿ ಅವರನ್ನೂ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.
ಬಿಜೆಪಿಯ ಸಾವಿರಾರು ಕಾರ್ಯಕರ್ತರು ರಾಜ್ಯದಲ್ಲಿಂದು ಇತಿಹಾಸ ಸೃಷ್ಟಿಸಿದ್ದಾರೆ. ಕರುನಾಡಿನ ಜನತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರೀತಿಸಿದ್ದಾರೆ. 70 ವರ್ಷಗಳಿಂದ ನಡೆಯದೇ ಇದ್ದ ಅಭಿವೃದ್ಧಿ ಮೋದಿ ಅವರಿಂದ ಸಾಧ್ಯವಾಗಿದೆ. ಬಿಜೆಪಿ ಆಡಳಿತದಲ್ಲಿ ಸಾಕಷ್ಟು ಅಭಿವೃದ್ಧಿ ಪರ ಕೆಲಸಗಳನ್ನು ಮಾಡಿದೆ. ಜಮ್ಮು ಕಾಶ್ಮೀರದ 370 ನೆ ವಿಧಿ ರದ್ಧತಿಗೆ ನೆಹರೂ ಅವರಿಂದ ಸಿಂಗ್ ವರೆಗೆ ಎಲ್ಲರೂ ಹಿಂದೇಟು ಹಾಕಿದ್ದರು. ಆದರೆ ಮೋದಿ ಆ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಕಾಶ್ಮೀರದಲ್ಲಿಂದು ತ್ರಿವರ್ಣ ಧ್ವಜ ಗರ್ವದಿಂದ ಹಾರಾಡುತ್ತಿದೆ. ಎರಡನೇ ಬಾರಿ ನೀವು ಬಿಜೆಪಿಗೆ ಅಧಿಕಾರ ನೀಡಿದ್ದರಿಂದ ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ವಾಗುತ್ತಿದೆ. ಭವ್ಯ ರಾಮ ಮಂದಿರವನ್ನು ನಾವು ಶೀಘ್ರವೇ ಕಣ್ತುಂಬಿಕೊಳ್ಳಲಿದ್ದೇವೆ ಎಂದು ಅವರು ತಿಳಿಸಿದರು.
ತ್ರಿವಳಿ ತಲಾಖ್ ನಿಷೇಧದ ಮೂಲಕ ಮುಸ್ಲಿಂ ಸಹೋದರಿಯರಿಗೆ ನೆಮ್ಮದಿಯ ಬದುಕು ನಡೆಸಲು ಅವಕಾಶವನ್ನು ಬಿಜೆಪಿ ಮಾಡಿಕೊಟ್ಟಿದೆ. ಪಾಕಿಸ್ಥಾನದ ಭಯೋತ್ಪಾದಕರು ಭಾರತದತ್ತ ಸುಳಿಯುವುದಕ್ಕೂ ಭಯ ಪಡುವಂತಾಗಿದೆ. ಮೋದಿ ಸರ್ಕಾರ ಪಾಕಿಸ್ಥಾನಕ್ಕೆ ತಕ್ಕ ಶಾಸ್ತಿ ಮಾಡಿದೆ. 7 ಕೋಟಿ ಜನರು ಬ್ಯಾಂಕ್ ಅಕೌಂಟ್ ಹೊಂದುವಂತಾಗಿದೆ. 13 ಕೋಟಿ ಜನರು ಗ್ಯಾಸ್ ಸೌಕರ್ಯ ಪಡೆಯುವಂತಾಗಿದೆ. 2022ರ ವೇಳೆಗೆ ಪ್ರತೀ ಮನೆಗೆ ವಿದ್ಯುತ್ ಸಂಪರ್ಕ, ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತದೆ. ಆದರೆ ಕಾಂಗ್ರೆಸ್ ಸರ್ಕಾರ ಈ ಯಾವುದೇ ಕೆಲಸವನ್ನು ತಮ್ಮ ಅಧಿಕಾರಾವಧಿಯಲ್ಲಿ ಮಾಡಿಲ್ಲ. 1 ಲಕ್ಷ 33 ಸಾವಿರ ಗ್ರಾಮಗಳಿಗೆ ಬ್ರಾಡ್ ಬ್ಯಾಂಡ್ ಸೌಲಭ್ಯ ಕಲ್ಪಿಸಲಾಗಿದೆ. ಬಡತನ ನಿರ್ಮೂಲನೆಗೆ ಪೂರಕವಾದ ಎಲ್ಲಾ ರೀತಿಯ ವ್ಯವಸ್ಥೆಗಳನ್ನು, ಯೋಜನೆಗಳನ್ನು ಮೋದಿ ಸರ್ಕಾರ ಜಾರಿಗೆ ತಂದಿದೆ. ಪ್ರತಿಯೊಬ್ಬರಿಗೂ 56 ಲಕ್ಷದ ಆರೋಗ್ಯ ವಿಮೆ ಕಲ್ಪಿಸಲು ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದರು.
2014 ಕ್ಕೂ ಮೊದಲು ದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟು ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಜಗತ್ತಿನಲ್ಲೇ ದೇಶದ ಆರ್ಥಿಕತೆ ನಂ. 1 ಆಗಲಿದೆ ಎಂದು ಅವರು ತಿಳಿಸಿದರು. ಕೊರೋನಾ ಸಂಬಂಧಿಸಿದಂತೆಯೂ ಮಾತನಾಡಿದ ಅವರು, ಭಾರತ ಈ ಯುದ್ಧದಲ್ಲಿ ಜಯಗಳಿಸುವ ಭರವಸೆಯನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕೊರೋನಾ ಸಮರ್ಥ ನಿರ್ವಹಣೆಗಾಗಿ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರವನ್ನು ಶಾ ಶ್ಲಾಘಿಸಿದರು.
ಶಾ ಅವರಿಗೆ ಬೆಳ್ಳಿಯ ಗದೆ, ಕೇಸರಿ ಪೇಟ ತೊಡಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಚಿವರಾದ ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಶಶಿಕಲಾ ಜೊಲ್ಲೆ ಮೊದಲಾದವರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.