ಪುಲ್ವಾಮಾ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ದಿವ್ಯಾಂಗ ವ್ಯಕ್ತಿಯೊಬ್ಬರು ಎಲ್ಲಾ ಸವಾಲುಗಳ ವಿರುದ್ಧ ಹೋರಾಡಿ ತಮ್ಮದೇ ಆದ ವ್ಯವಹಾರವನ್ನು ಪ್ರಾರಂಭಿಸಿ ಈಗ ಇತರರಿಗೆ ಉದ್ಯೋಗ ನೀಡುತ್ತಿದ್ದಾರೆ. 34 ವರ್ಷದ ಅರ್ಷಿದ್ ಅಹ್ಮದ್ ವಾನಿ, ಈಗ ತಮ್ಮ ಜಾಯ್ನರಿ ಘಟಕದಲ್ಲಿ ಹಲವಾರು ಜನರಿಗೆ ಉದ್ಯೋಗವನ್ನು ಒದಗಿಸುತ್ತಿದ್ದಾರೆ.
ಪುಲ್ವಾಮಾದ ಹಳ್ಳಿಯಾದ ಮಾಲ್ಪೋರಾದ ನಿವಾಸಿ ವಾನಿ ವೃತ್ತಿಯಲ್ಲಿ ಬಡಗಿ. 2016 ರಲ್ಲಿ, ಒಂದು ದುರಂತ ಸಂಭವಿಸಿ ಅಲ್ಲಿಂದ ಅವರ ಜೀವನವು ಶಾಶ್ವತವಾಗಿ ಬದಲಾಯಿತು. ಕೊಟ್ಟಿಗೆಯ ಕೆಲಸ ಮಾಡುತ್ತಿದ್ದಾಗ ಆಯ ತಪ್ಪಿ ಬಂಡೆ ಕಲ್ಲಿನ ಮೇಲೆ ಬಿದ್ದ ಪರಿಣಾಮ ಅವರ ಕಾಲುಗಳಿಗೆ ಗಂಭೀರವಾದ ಗಾಯಗಳು ಉಂಟಾದವು.
ಚಿಕಿತ್ಸೆಯ ನಂತರ ವಾನಿ ಬದುಕುಳಿದರು. ಆದರೆ, ಅವರ ಎರಡೂ ಕಾಲುಗಳು ಪಾರ್ಶ್ವವಾಯುವಿಗೆ ಒಳಗಾದವು. ಎರಡು ವರ್ಷಗಳಿಂದ ಗಾಲಿಕುರ್ಚಿಗೆ ಸೀಮಿತವಾಗಿದ್ದ ಅವರು ಖಿನ್ನತೆಗೆ ಒಳಗಾದರು. ಅಂತಿಮವಾಗಿ, ಅವರು ತಮ್ಮನ್ನು ತಾವು ಬಿಟ್ಟುಕೊಡದಿರಲು ನಿರ್ಧರಿಸಿ ಮರಗೆಲಸದ ಘಟಕವನ್ನು ತೆರದರು.
ವಾನಿ ಹಣಕಾಸಿನ ಅಡಚಣೆಯನ್ನು ಎದುರಿಸುತ್ತಿದ್ದಾಗ, ಸ್ಥಳೀಯರು ಮತ್ತು ಕೆಲವು ಸಂಬಂಧಿಕರು ಅವರಿಗೆ ಸಹಾಯ ಮಾಡಿದ್ದಾರೆ. ಕೊನೆಗೆ ಅವರು ಸಾಲ ಪಡೆದುಕೊಂಡು ಉದ್ಯಮ ನಡೆಸಿದರು. ಈಗ ಎಲ್ಲವೂ ಅವರು ಅಂದುಕೊಂಡಂತೆ ನಡೆದು ಉದ್ಯಮದಲ್ಲಿ ಅವರು ಏಳಿಗೆ ಪಡೆಯುತ್ತಿದ್ದಾರೆ.
“ಇಲ್ಲಿಯವರೆಗೆ ನಾನು ಮರದ ಕೆಲಸಕ್ಕೆ ಬೇಕಾದ ಎಲ್ಲಾ ಯಂತ್ರಗಳನ್ನು ಖರೀದಿಸಿದ್ದೇನೆ. ಪ್ರಸ್ತುತ, ಆರು ಜನರು ಘಟಕದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಾಗಿಲು ಮತ್ತು ಕಿಟಕಿಗಳನ್ನು ಮಾಡಲು ನಮಗೆ ಹಲವು ಆರ್ಡರ್ ಬಂದಿವೆ. ಅಂಗವಿಕಲರನ್ನು ಭಿಕ್ಷೆ ಬೇಡುವಂತೆ ಮಾಡಬಾರದು. ಅವರು ಮುಂದುವರಿಯಬೇಕು ಮತ್ತು ತಮ್ಮದೇ ಆದ ಉದ್ಯಮಗಳನ್ನು ಪ್ರಾರಂಭಿಸುವ ಮಾರ್ಗಗಳು ಮತ್ತು ವಿಧಾನಗಳನ್ನು ಅನ್ವೇಷಿಸಲು ಪ್ರಯತ್ನಿಸಬೇಕು” ಎಂದು ವಾನಿ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.