ರಾಂಚಿ: ಬಿಹಾರದಲ್ಲಿ ಪ್ರತಿಪಕ್ಷಗಳಿಗೆ ಭಾರೀ ಮುಜುಗರ ಉಂಟುಮಾಡುವ ಬೆಳವಣಿಗೆಯೊಂದು ನಡೆದಿದೆ, ರಾಷ್ಟ್ರೀಯ ಜನತಾದಳ (ಆರ್ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಆಡಿಯೋ ಟೇಪ್ ಬೆಳಕಿಗೆ ಬಂದಿದ್ದು, ಇದರಲ್ಲಿ ಬಿಜೆಪಿ ಶಾಸಕ ಲಾಲನ್ ಯಾದವ್ ಅವರಿಗೆ ಆಮಿಷ ಒಡ್ಡುವ ಪ್ರಯತ್ನ ನಡೆದಿದೆ.
ವಿಧಾನಸಭೆ ಸ್ಪೀಕರ್ ಹುದ್ದೆಗೆ ಮತದಾನದ ಸಂದರ್ಭದಲ್ಲಿ ವಿಧಾನಸಭೆಗೆ ಗೈರು ಹಾಜರಾಗುವಂತೆ ಲಾಲೂ ಆಮಿಷವೊಡ್ಡಿದ್ದಾರೆ. ಆಡಿಯೊ ಕ್ಲಿಪ್ ಈಗ ಎಲ್ಲೆಡೆ ಹರಿದಾಡುತ್ತಿದೆ.
ಬಿಹಾರ ವಿಧಾನಸಭಾ ಸ್ಪೀಕರ್ ಹುದ್ದೆಗೆ ಇಂದು ಚುನಾವಣೆ ನಡೆಯಲಿದೆ. ಎನ್ಡಿಎಯ ವಿಜಯ್ ಕುಮಾರ್ ಸಿನ್ಹಾ ಅವರು ಮಹಾಘಟಬಂಧನ್ ಅಭ್ಯರ್ಥಿ ಅವಧ್ ಬಿಹಾರಿ ಚೌಧರಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ಬಿಹಾರದಲ್ಲಿನ ಎನ್ಡಿಎ ಸರ್ಕಾರವನ್ನು ಬೀಳಿಸಿ ಮಹಾಘಟಬಂಧನ್ ಅನ್ನು ಅಧಿಕಾರಕ್ಕೆ ಏರಿಸಲು ಲಾಲೂ ಪ್ರಸಾದ್ ಇನ್ನಿಲ್ಲದಂತೆ ಪ್ರಯತ್ನ ನಡೆಸುತ್ತಿದ್ದಾರೆ. ಈಗಾಗಲೇ ಮೇವು ಹಗರಣದಲ್ಲಿ ಜೈಲು ಪಾಲಾಗಿರುವ ಅವರು, ಆರೋಗ್ಯ ಸಮಸ್ಯೆಯ ಕಾರಣದಿಂದ ಜೈಲಿನಿಂದ ಹೊರಗಿದ್ದಾರೆ. ಆದರೆ ಇದ್ದಲ್ಲೇ ಕುಳಿತು ಎನ್ಡಿಎ ಶಾಸಕರಿಗೆ ಗಾಳ ಹಾಕುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
“ಬಿಹಾರ ವಿಧಾನಸಭಾ ಸ್ಪೀಕರ್ ಚುನಾವಣೆಯ ಸಮಯದಲ್ಲಿ ನೀವು ನಮ್ಮನ್ನು ಬೆಂಬಲಿಸುತ್ತೀರಿ ಮತ್ತು ನಾವು ಎನ್ಡಿಎ ಸರ್ಕಾರವನ್ನು ಉರುಳಿಸುತ್ತೇವೆ. ನಾವು ನಿಮ್ಮನ್ನು ಮಂತ್ರಿಯಾಗಿ ನೇಮಿಸುತ್ತೇವೆ ”ಎಂದು ಲಾಲೂ ಆಡಿಯೋದಲ್ಲಿ ಹೇಳಿದ್ದಾರೆ.
ಲಾಲೂ ಅವರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ “ನಾನು ಪಕ್ಷದಲ್ಲಿದ್ದೇನೆ” ಎಂದು ಹಿಂಜರಿಯುತ್ತಾ ಹೇಳಿದ್ದಾರೆ. ಅದಕ್ಕೆ ಲಾಲೂ “ಪಕ್ಷದಲ್ಲಿದ್ದರೆ ಗೈರು ಹಾಜರಾಗಿ, ಕರೋನಾ ಬಂದಿತ್ತು ಎನ್ನಿ” ಎಂದು ಉತ್ತರಿಸಿದ್ದಾರೆ.
ಲಾಲೂ ಅವರು ಬಿಹಾರದ ಎನ್ಡಿಎ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಹಾರ ಬಿಜೆಪಿ ಮುಖಂಡ ಸುಶೀಲ್ ಕುಮಾರ್ ಮೋದಿ ಆರೋಪಿಸಿದ ಒಂದು ದಿನದ ನಂತರ ಆಡಿಯೋ ಕ್ಲಿಪ್ ಹೊರ ಬಿದ್ದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.