ವಾಷಿಂಗ್ಟನ್: ಭಾರತ ಮತ್ತು ಚೀನಾ ನಡುವೆ ಲಡಾಕ್ನ ಗಲ್ವಾನ್ ಪ್ರದೇಶದಲ್ಲಿ ಸಂಘರ್ಷ ಏರ್ಪಟ್ಟಾಗ ಮೃತಪಟ್ಟ ಚೀನಾದ ಯೋಧರಿಗೆ ಚೀನಾ ಅಗೌರವ ಸಲ್ಲಿಸಿದೆ. ಮೃತ ಯೋಧರ ಅಂತ್ಯ ಸಂಸ್ಕಾರಕ್ಕೆ ಸಹ ಅವರ ಕುಟುಂಬ ವರ್ಗಕ್ಕೆ ಚೀನಾ ಅವಕಾಶ ನೀಡಿಲ್ಲ, ಅಲ್ಲದೆ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಬಹಿರಂಗ ಕಾರ್ಯಕ್ರಮಗಳನ್ನು ನಡೆಸದಂತೆಯೂ ಚೀನಾ ಯೋಧರ ಕುಟುಂಬಗಳಿಗೆ ಒತ್ತಡ ಹೇರಿದ್ದಾಗಿ ಅಮೆರಿಕಾದ ಗುಪ್ತಚರ ವರದಿಯನ್ನು ಅನುಸರಿಸಿ ಎನ್ ಎನ್ ಐ ಸುದ್ದಿಸಂಸ್ಥೆ ಮಾಹಿತಿ ನೀಡಿದೆ.
ಚೀನಾದ ಈ ನಡೆ ತನ್ನ ಸೈನ್ಯಕ್ಕುಂಟಾದ ಸಾವು ನೋವುಗಳನ್ನು ಬಹಿರಂಗಪಡಿಸಲು ಸಿದ್ಧವಿಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಆದರೆ ಈ ಸಂಘರ್ಷದಲ್ಲಿ ವೀರಸ್ವರ್ಗ ಪಡೆದ ಭಾರತೀಯ ಸೈನಿಕರ ಸಂಖ್ಯೆಯನ್ನು ಭಾರತ ಬಹಿರಂಗ ಮಾಡಿದೆ. ಜೊತೆಗೆ ಹುತಾತ್ಮರಾದ ಯೋಧರಿಗೆ ಸಕಲ ಗೌರವಗಳನ್ನು ಸಲ್ಲಿಸಿ ವಿರೋಚಿತ ಅಂತ್ಯಸಂಸ್ಕಾರ ನಡೆಸಿದೆ ಎಂದೂ ಸುದ್ದಿಸಂಸ್ಥೆ ಮಾಹಿತಿ ನೀಡಿದೆ. ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ನ ಸಂದರ್ಭದಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಮರ್ಪಣೆ ಮಾಡಿದ್ದಾಗಿಯೂ ಸಂಸ್ಥೆ ಹೇಳಿದೆ.
ಸದ್ಯ ಗಲ್ವಾನ್ ಗಲಭೆ ನಡೆದು ತಿಂಗಳುಗಳಾಗಿವೆ. ಹೀಗಿದ್ದರೂ ಈ ವರೆಗೆ ಚೀನಾ ತನ್ನ ದೇಶಕ್ಕಾದ ಸಾವು ನೋವುಗಳ ಬಗ್ಗೆ ಮಾಹಿತಿ ನೀಡಿಲ್ಲ. ಅಲ್ಲದೆ ಮೃತ ಯೋಧರ ಕುಟುಂಬಕ್ಕೆ ಸರಿಯಾದ ರೀತಿಯಲ್ಲಿ ಮೃತರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿಯೂ ಚೀನಾ ಸರ್ಕಾರ ಅವಕಾಶ ಮಾಡಿಕೊಟ್ಟಿಲ್ಲ. ಅವರ ದುಃಖಕ್ಕೆ ಸಾಂತ್ವನವನ್ನೂ ತಿಳಿಸುವ ಕೆಲಸವನ್ನು ಚೀನಾ ಮಾಡಿಲ್ಲ ಎಂದೂ ಈ ಸುದ್ದಿ ಸಂಸ್ಥೆ ಹೇಳಿಕೆ ನೀಡಿದೆ. ಈ ಘಟನೆಯಲ್ಲಿ ಚೀನಾದ 35ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವನ್ನೂ ಅಮೆರಿಕ ಬಹಿರಂಗ ಮಾಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.