ನವದೆಹಲಿ: ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ನ ಅಧ್ಯಕ್ಷ ಮಹಂತ್ ನರ್ತ್ಯ ಗೋಪಾಲ್ ದಾಸ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಯೋಧ್ಯೆಗೆ ಭೇಟಿ ನೀಡುವಂತೆ ಮತ್ತು ರಾಮ ಮಂದಿರದ ನಿರ್ಮಾಣ ಕಾರ್ಯವನ್ನು ಉದ್ಘಾಟಿಸುವಂತೆ ಕೋರಿ ಪತ್ರ ಬರೆದಿದ್ದಾರೆ ಎಂದು ವರದಿಗಳು ತಿಳಿಸಿವೆ.
“ನಾವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಯೋಧ್ಯೆಗೆ ಭೇಟಿ ನೀಡಿ ರಾಮ ಮಂದಿರ ನಿರ್ಮಾಣ ಕಾರ್ಯಗಳನ್ನು ಉದ್ಘಾಟಿಸುವಂತೆ ಕೋರಿ ಪತ್ರ ಬರೆದಿದ್ದೇವೆ. ಪೂಜೆ ಮತ್ತು ಇತರ ಆಚರಣೆಗಳು ಮೂರು ತಿಂಗಳಿನಿಂದ ಸ್ಥಳದಲ್ಲಿ ನಡೆಯುತ್ತಿವೆ” ಎಂದು ಮಹಂತ್ ದಾಸ್ ಹೇಳಿದ್ದಾರೆ.
“ಅವರು ಬರಬೇಕು ಎಂಬುದು ನಮ್ಮ ಬಯಕೆಯಾಗಿದೆ, ಆದರೆ ಉದ್ಘಾಟನೆಯ ಸಂದರ್ಭದಲ್ಲಿ ಯಾವುದೇ ಜನದಟ್ಟಣೆ ಇರುವುದಿಲ್ಲ ಎಂಬುದನ್ನು ನಾವು ಖಚಿತಪಡಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
‘ಭೂಮಿ ಪೂಜನ್’ ಕಾರ್ಯಕ್ರಮವನ್ನು ವಿಡಿಯೋ ಕಾನ್ಫರೆನ್ಸಿಂಗ್ ಅಥವಾ ಇನ್ನಾವುದೇ ವರ್ಚುವಲ್ ವಿಧಾನದ ಮೂಲಕ ಮಾಡಲು ಸಂತರು ಬಯಸುತ್ತಿಲ್ಲ, ಉದ್ಘಾಟನಾ ಕಾರ್ಯಕ್ರಮಕ್ಕೆ ಪಿಎಂ ಮೋದಿ ಸ್ವತಃ ಅಯೋಧ್ಯೆಗೆ ಬರಬೇಕೆಂದು ಸಂತರು ಬಯಸುತ್ತಾರೆ. ಜುಲೈ 6 ರಿಂದ ರಾಮ ದೇವಾಲಯದ ನಿರ್ಮಾಣ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಮಹಂತ್ ನರ್ತ್ಯ ಗೋಪಾಲ್ ದಾಸ್ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ಆಹ್ವಾನವನ್ನು ಸ್ವೀಕರಿಸುತ್ತಾರೆ ಮತ್ತು ಸಮಾರಂಭದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಬರುತ್ತಾರೆ ಎಂದು ನರ್ತ್ಯ ಗೋಪಾಲ್ ದಾಸ್ ಅವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮಾರ್ಚ್ 2020ರಲ್ಲಿ ‘ರಾಮ ಲಲ್ಲಾ’ ವಿಗ್ರಹವನ್ನು ರಾಮ ಜನ್ಮಭೂಮಿ ಆವರಣದಲ್ಲಿನ ಮಾನಸ್ ಭವನದ ಬಳಿಯ ತಾತ್ಕಾಲಿಕ ರಚನೆಗೆ ಸ್ಥಳಾಂತರಿಸಲಾಗಿದೆ. ರಾಮ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವವರೆಗೆ ವಿಗ್ರಹವು ಅಲ್ಲಿಯೇ ಇರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.