ಮುಂಬೈ: ಉದ್ಯಮ ಕ್ಷೇತ್ರದಲ್ಲಿ ಜಾಗತಿಕವಾಗಿ ಹೆಸರು ಮಾಡಿರುವ ಮುಖೇಶ್ ಅಂಬಾನಿ ಅವರ ರಿಲಾಯನ್ಸ್ ಸಂಸ್ಥೆಯು ಶೈಕ್ಷಣಿಕವಾಗಿಯೂ ತೊಡಗಿಸಿಕೊಂಡು ಸೇವೆ ಸಲ್ಲಿಸುತ್ತಿದೆ. ಮುಂಬೈನ ಕಾರ್ಜತ್ ನಗರದಲ್ಲಿ ಸುಮಾರು 800 ಎಕರೆ ವಿಸ್ತೀರ್ಣದಲ್ಲಿ ರಿಲಾಯನ್ಸ್ ಜಿಯೋ ವಿಶ್ವ ವಿದ್ಯಾಲಯ ಆರಂಭ ಮಾಡುವ ಕುರಿತಂತೆ ಸಂಸ್ಥೆ ಈಗಾಗಲೇ ಮಾಹಿತಿ ನೀಡಿದೆ. 2021ರಿಂದಲೇ ಈ ಯೂನಿವರ್ಸಿಟಿಯನ್ನು ಆರಂಭಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದ್ದು, ಅದಕ್ಕೆ ಬೇಕಾದ ಪೂರ್ವ ತಯಾರಿಯನ್ನು ನಡೆಸುತ್ತಿರುವುದಾಗಿಯೂ ರಿಲಾಯನ್ಸ್ ತಿಳಿಸಿದೆ ಎಂದು ವರದಿಗಳು ತಿಳಿಸಿವೆ.
ಇದಕ್ಕಾಗಿ ಮುಖೇಶ್ ಅಂಬಾನಿ ಅವರು ಸರ್ಕಾರದ ಇಇಸಿಯಲ್ಲಿ 1500 ಕೋಟಿ ರೂ. ಗಳನ್ನು ಜಿಯೋ ಇನ್ಸ್ಟಿಟ್ಯೂಟ್ ಹೆಸರಿನಲ್ಲಿ ಹೂಡಿಕೆ ಮಾಡಲಿರುವುದಾಗಿಯೂ ತಿಳಿಸಿದ್ದಾರೆ. ಇದಲ್ಲದೆ, ರಿಲಯನ್ಸ್ ಫೌಂಡೇಶನ್ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ (ಆರ್ಎಫ್ಐಇಆರ್) ಜಿಯೋ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಯೋಜನೆಗಳ ಮಾತುಕತೆ ನಡೆಸುತ್ತಿವೆ. ರಿಲಾಯನ್ಸ್ ಇನ್ಸ್ಟಿಟ್ಯೂಟ್ಗೆ ಸರ್ಕಾರವು ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ ಸ್ಥಾನಮಾನವನ್ನು ನೀಡಿದೆ. ಈ ವಿವಿಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಆರಂಭ ಮಾಡುವುದಾಗಿಯೂ ತಿಳಿಸಿದ್ದಾರೆ.
ಸುಮಾರು 800 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣ ಆಗಲಿರುವ ಈ ಕ್ಯಾಂಪಸ್ನಲ್ಲಿ ಸಿಬ್ಬಂದಿಗಳಿಗೆ ವಸತಿ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ವಸತಿಗೃಹಗಳನ್ನೂ ಸ್ಥಾಪಿಸಲಾಗುತ್ತದೆ. ಆಡಳಿತ ಮಂಡಳಿಯಲ್ಲಿ ಮುಖೇಶ್ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿ ಅವರೂ ಜವಾಬ್ದಾರಿ ವಹಿಸಲಿದ್ದಾರೆ. ಅಲ್ಲದೆ ಆಡಳಿತ ನಿರ್ವಹಣೆಗಾಗಿ ಆರು ಸಮಿತಿಗಳನ್ನು ನಿರ್ಮಿಸುವುದಾಗಿಯೂ ತಿಳಿದು ಬಂದಿದೆ. ಇನ್ನು ಈ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಾದ ಅತ್ಯಾಧುನಿಕ ಪ್ರಯೋಗಾಲಯ ವ್ಯವಸ್ಥೆ, ತಾಂತ್ರಿಕ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದೂ ರಿಲಾಯನ್ಸ್ ಮಾಹಿತಿ ನೀಡಿದೆ.
ಇದು ಹಸಿರು ಸ್ನೇಹಿ ವಿವಿಯಾಗಿರಲಿದ್ದು, ಕ್ಯಾಂಪಸ್ ನಲ್ಲಿ ಹಸಿರು, ಉದ್ಯಾನವನಗಳನ್ನೂ ನಿರ್ಮಿಸಲಾಗುತ್ತದೆ. ಮೂಲಸೌಕರ್ಯ ಮತ್ತು ಶೈಕ್ಷಣಿಕ ಅಧಿವೇಶನ ವಿವರಗಳ ಹೊರತಾಗಿ ರಿಲಾಯನ್ಸ್ ಜಿಯೋ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳಿಗೆ ವಿಭಿನ್ನವಾದ ಅಂತರಶಿಕ್ಷಣ ಕೋರ್ಸ್ಗಳನ್ನು ನೀಡಲಿದೆ. ಕೃತಕ ಬುದ್ಧಿಮತ್ತೆ, ದತ್ತಾಂಶ ವಿಜ್ಞಾನ, ಕಾನೂನು, ವಿನ್ಯಾಸ ಮತ್ತು ಸಂವಹನ, ಮತ್ತು ಇತರ ಸಂಬಂಧಿತ ಕೋರ್ಸ್ಗಳನ್ನು ನೀಡಲಾಗುವುದು ಎಂದು ರಿಲಾಯನ್ಸ್ ಮಾಹಿತಿ ನೀಡಿದೆ. ಜೊತೆಗೆ ಎಂಜಿನಿಯರಿಂಗ್, ನಿರ್ವಹಣೆ, ವಿಜ್ಞಾನ ಮತ್ತು ಮಾನವಿಕ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿಯನ್ನು ನೀಡುವತ್ತಲೂ ಗಮನ ಹರಿಸಲಿದೆ.
ತಜ್ಞ ಪ್ರಾಧ್ಯಾಪಕರ ಮೂಲಕ ಶಿಕ್ಷಣ ನೀಡಲು ಕ್ರಮ ಕೈಗೊಳ್ಳುವ ಮೂಲಕ, ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರಿತ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಎಂದೂ ಸಂಸ್ಥೆ ಮಾಹಿತಿ ನೀಡಿದೆ. ರಾಷ್ಟ್ರೀಯ, ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣ ನೀಡುವ ಮೂಲಕ ಕ್ಯೂಎಸ್ ವಿವಿ ಶ್ರೇಯಾಂಕಗಳ 500 ರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಪ್ರಯತ್ನ ನಡೆಸುವುದಾಗಿ ಸಂಸ್ಥೆಯ ಅಧಿಕೃತ ಮೂಲಗಳು ಮಾಹಿತಿ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.