ನವದೆಹಲಿ: ಭಯೋತ್ಪಾದನಾ ಕೃತ್ಯಗಳು ಎಲ್ಲೇ ನಡೆದರೂ ಭಾರತ ಅದನ್ನು ತೀವ್ರವಾಗಿ ಖಂಡಿಸುತ್ತದೆ. ಪ್ರಸ್ತುತ ಶ್ರೀಲಂಕಾವೂ ಘನ ಘೋರ ಭಯೋತ್ಪಾದನಾ ದಾಳಿಗೆ ಗುರಿಯಾಗಿದ್ದು, ಶೋಕಸಾಗರದಲ್ಲಿ ಮುಳುಗಿದೆ. ನೆರೆಹೊರೆಯ ದೇಶಕ್ಕೆ ಸಹಾಯ ಹಸ್ತವನ್ನು ಚಾಚುವುದರಲ್ಲಿ ಸದಾ ಮುಂದಿರುವ ಭಾರತ, ಶ್ರೀಲಂಕಾಗೂ ಸಹಾಯ ಮಾಡಲು ಮುಂದೆ ನಿಂತಿದೆ.
ಶ್ರೀಲಂಕಾ ಅಧ್ಯಕ್ಷರಿಗೆ ಮತ್ತು ಪ್ರಧಾನಿಗಳಿಗೆ ದೂರವಾಣಿ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ಎಲ್ಲಾ ನೆರವನ್ನು ಒದಗಿಸುವುದಾಗಿ ಭರವಸೆಯನ್ನು ನೀಡಿದ್ದಾರೆ. ಕೃತ್ಯವನ್ನು ‘ಪೂರ್ವ ನಿಯೋಜಿತ ಅಮಾನುಷ ಘಟನೆ’ ಎಂದು ಬಣ್ಣಿಸಿರುವ ಮೋದಿ, ಭಯೋತ್ಪಾದನೆ ನಮ್ಮ ಪ್ರದೇಶ ಮತ್ತು ಜಗತ್ತಿಗೆ, ಮಾನವೀಯತೆಗೆ ಅತೀದೊಡ್ಡ ಸವಾಲನ್ನೊಡ್ಡಿದೆ ಎಂದಿದ್ದಾರೆ.
ವಿದೇಶಾಂಗ ಸಚಿವಾಲಯ ಕೂಡ ಶ್ರೀಲಂಕಾ ಘಟನೆಯನ್ನು ಖಂಡಿಸಿದ್ದು, ”ಸಂತ್ರಸ್ಥರ ಕುಟುಂಬದವರಿಗೆ ನಾವು ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇವೆ. ಶ್ರೀಲಂಕಾದ ಜನರು, ಸರ್ಕಾರದೊಂದಿಗೆ ನಾವು ನಿಲ್ಲುತ್ತೇವೆ. ಇಂತಹ ಅಮಾನವೀಯ ಕೃತ್ಯವನ್ನು ಎಸಗಿದವರಿಗೆ ಶಿಕ್ಷೆಯನ್ನು ವಿಧಿಸುವ ಪ್ರಕ್ರಿಯೆಗೆ ನಾವು ಸಹಾಯ ಮಾಡುತ್ತೇವೆ” ಎಂದಿದೆ.
ಭಾನುವಾರ ಶ್ರೀಲಂಕಾದ 8 ಕಡೆಗಳಲ್ಲಿ ನಡೆದ ಸರಣಿ ಸ್ಪೋಟದಲ್ಲಿ ಮಡಿದವರ ಸಂಖ್ಯೆ 310ಕ್ಕೆ ಏರಿಕೆಯಾಗಿದೆ. ಘಟನೆಯ ಸಂಬಂಧ 40 ಮಂದಿ ಶಂಕಿತರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಘಟನೆಯ ಹಿಂದೆ ಇಸ್ಲಾಮಿಕ್ ಮೂಲಭೂತ ಸಂಘಟನೆಗಳ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.