ನವದೆಹಲಿ: ಗಾಂಧಿ ಕುಟುಂಬದ ಬಡತನ ನಿರ್ಮೂಲನೆಯ ಭರವಸೆಯನ್ನು 7 ವರ್ಷದವನಿದ್ದಾಗಿನಿಂದ ಕೇಳುತ್ತಾ ಬರುತ್ತಿದ್ದೇನೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ಹೇಳಿದ್ದಾರೆ. ಈ ಮೂಲಕ ಬಡತನದ ವಿರುದ್ಧ ‘ಸರ್ಜಿಕಲ್ ಸ್ಟ್ರೈಕ್’ ಮಾಡುತ್ತೇನೆ ಎಂದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಟಾಂಗ್ ನೀಡಿದ್ದಾರೆ.
‘ರಾಹುಲ್ ಗಾಂಧಿಯವರ ಅಜ್ಜಿ ಇಂದಿರಾ ಗಾಂಧಿಯವರು ಬಡತನ ನಿರ್ಮೂಲನೆಯ ಬಗ್ಗೆ ಭರವಸೆ ನೀಡುತ್ತಿದ್ದಾಗ ನನಗೆ 7 ವರ್ಷ ವಯಸ್ಸು, ಅವರ ತಂದೆ ರಾಜೀವ್ ಗಾಂಧೀಯವರು, ನಾನು 1 ರೂಪಾಯಿ ಕಳುಹಿಸುತ್ತೇನೆ, ಅದರಲ್ಲಿ 15 ಪೈಸೆ ಮಾತ್ರ ಬಡವರಿಗೆ ತಲುಪುತ್ತದೆ ಎಂದು ಹೇಳಿದ್ದಾಗ ನನಗೆ 20 ವರ್ಷ’ ಎಂದು ಗೋಯಲ್ ಹೇಳಿಕೊಂಡಿದ್ದಾರೆ.
‘2004ರಲ್ಲಿ ಅವರ ತಾಯಿ ಸೋನಿಯಾ ಮತ್ತು ಅವರು ‘ಕಾಂಗ್ರೆಸ್ಸಿನ ಕೈ ಬಡವರ ಜೊತೆಗಿದೆ’ ಎಂದು ಹೇಳಿದಾಗ ನನಗೆ 40 ವರ್ಷ. ಈಗ ನನಗೆ 54 ವರ್ಷ, ಈಗಲೂ 7 ವರ್ಷದವನಿದ್ದಾಗ ಕೇಳಿದ ಅವರ ಮಾತುಗಳನ್ನೇ ಮತ್ತೆ ಕೇಳುತ್ತಿದ್ದೇನೆ’ ಎಂದಿದ್ದಾರೆ.
‘ಯಾಕೆ ಇಷ್ಟು ವರ್ಷಗಳ ಕಾಲ ಅವರು ದೇಶದಲ್ಲಿ ಬಡತನವನ್ನು ಇರಲು ಬಿಟ್ಟರು ಎಂಬುದಕ್ಕೆ ರಾಹುಲ್ ಮತ್ತು ಅವರ ಕುಟುಂಬ ಉತ್ತರ ನೀಡಬೇಕು. ಕಾಂಗ್ರೆಸ್ ಕೇವಲ ಸುಳ್ಳು ಭರವಸೆಯನ್ನೇ ನೀಡುತ್ತದೆ. ಜನರು ಈ ಬಾರಿ ಕಾಂಗ್ರೆಸ್ ಮತ್ತು ಡಿಎಂಕೆ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಬೇಕು’ ಎಂದಿದ್ದಾರೆ.
ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಹಗರಣ ಮತ್ತು ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ರಾಹುಲ್ ಪ್ರತಿಕ್ರಿಯೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.