ಫೇಸ್ಬುಕ್, ಟ್ವಿಟರ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳ ತೇಜೋವಧೆ ಮಾಡುವ, ಕಾಲೆಳೆಯವ, ಸತ್ಯಾಸತ್ಯತೆಯನ್ನು ಅರಿಯದೆ ಕೆಟ್ಟ ಪ್ರತಿಕ್ರಿಯೆಗಳನ್ನು ನೀಡುವ ಅಪಾಯಕಾರಿ ಮನಸ್ಥಿತಿಗಳು ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಹಿಂದೂ ಮುಂದು ಯೋಚನೆ ಮಾಡದೆ ವ್ಯಕ್ತಿಯ ತೇಜೋವಧೆ ಮಾಡುವುದರಿಂದ, ಆತನ ಗೌರವಕ್ಕೆ ಧಕ್ಕೆ ತರುವುದರಿಂದ, ಸುಳ್ಳು ಸುದ್ದಿಗಳನ್ನು ಹಬ್ಬಿಸುವುದರಿಂದ ಎಂತಹ ಗಂಭೀರ ಸಮಸ್ಯೆ ಸೃಷ್ಟಿಯಾಗಬಹುದು ಎಂಬುದನ್ನು ಅರಿಯುವ ಸ್ಥಿತಿಯಲ್ಲಿ ಇಂದಿನ ಟ್ರೋಲಿಂಗ್ ಮನಸ್ಥಿತಿಗಳು ಇಲ್ಲದೇ ಇರುವುದು ನಿಜಕ್ಕೂ ದುರಾದೃಷ್ಟಕರ. ಈ ನೆಲದ ಪ್ರತಿ ಪ್ರಜೆಗೂ ತನ್ನಿಷ್ಟದಂತೆ ಬದುಕುವ, ಬದುಕನ್ನು ಕಟ್ಟಿಕೊಳ್ಳುವ ಹಕ್ಕಿದೆ. ನಮ್ಮ ಬದುಕುವ ಹಕ್ಕನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವೂ ಇದೆ, ಹಾಗೆಂದು ಇನ್ನೊಬ್ಬರನ್ನು ಅವಮಾನಿಸುವ ಹಕ್ಕಿಲ್ಲ. ಮಾನಹರಣ ಮಾಡುವುದು, ಒಬ್ಬನ ಆತ್ಮಸ್ಥೈರ್ಯವನ್ನು ಕಸಿಯುವುದು ಮಹಾ ಅಪರಾಧ. ಆದರೆ ಇಂದಿನ ಸೋಶಲ್ ಮೀಡಿಯಾ ಯುಗದಲ್ಲಿ ಇದು ಸಾಮಾನ್ಯ ಎಂಬಂತಾಗಿದೆ. ಅದರಲ್ಲೂ ವಿದ್ಯಾವಂತರೇ ಇರುವ ಕೇರಳದಲ್ಲಿ ಟ್ರೋಲಿಂಗ್ ಮನಸ್ಸುಗಳ ವಿಕೃತತೆ ಎಲ್ಲೆ ಮೀರಿದೆ. ಅದಕ್ಕೆ ಉತ್ತಮ ಉದಾಹರಣೆ ಹನನ್ ಹಮೀದ್ ಎಂಬ ವಿದ್ಯಾರ್ಥಿನಿ ಮತ್ತು ಟ್ರೋಲಿಗರು ಆಕೆಯನ್ನು ನಡೆಸಿಕೊಂಡ ರೀತಿ.
ಕುಡುಕ ತಂದೆ, ಮಾನಸಿಕ ಸ್ಥಿಮಿತತೆ ಇಲ್ಲದ ತಾಯಿಯ ಮಗಳಾಗಿ ಬಡ ಕುಟುಂಬದಿಂದ ಬಂದ ಹುಡುಗಿ ಹನನ್, ಬಿಎಸ್ಸಿ ಓದುತ್ತಿರುವ ಈಕೆ ತನ್ನ ಶಿಕ್ಷಣ ಮತ್ತು ಮನೆಯ ವೆಚ್ಚವನ್ನು ಭರಿಸಲು ಕಾಲೇಜು ಬಿಡುವಿನ ವೇಳೆ ಮೀನು ಮಾರಾಟ ಮಾಡುತ್ತಾಳೆ. ಆ ಬಗ್ಗೆ ಆಕೆಗೆ ಅಳುಕಿಲ್ಲ, ಜೀವನಾಧಾರಕ್ಕೆ ಮೀನು ಮಾರುವುದನ್ನು ಆಕೆ ಅವಮಾನ ಎಂದೂ ಭಾವಿಸಿಲ್ಲ. ತನ್ನ ಪಾಡಿಗೆ ಆಕೆ ತನ್ನ ಕಾಯಕ ಮಾಡುತ್ತಲೇ ಬರುತ್ತಿದ್ದಳು, ಆದರೆ ಇತ್ತೀಚಿಗೆ ಆಕೆಯ ಬಗೆಗಿನ ಒಂದು ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಕಷ್ಟಪಟ್ಟು ದುಡಿದು ಓದುವ ಆಕೆಯ ಕಾರ್ಯವನ್ನು ಹಲವಾರು ಮಂದಿ ಮೆಚ್ಚಿದರು. ಆದರೆ ಮನಸ್ಸಿನ ತುಂಬಾ ವಿಕಾರತೆಯನ್ನೇ ತುಂಬಿಕೊಂಡ ಒಂದಿಷ್ಟು ಟ್ರೋಲಿಗರು ಆಕೆಯನ್ನು ಬೆಂಬಿಡದ ರೀತಿಯಲ್ಲಿ ಕೆಟ್ಟ ಕೆಟ್ಟ ಮಾತುಗಳಲ್ಲಿ ಟ್ರೋಲ್ ಮಾಡಿದರು.
ನೀನು ಬಡವಳಾಗಿದ್ದರೆ ನಿನ್ನ ಡ್ರೆಸ್ ಯಾಕೆ ಉತ್ತಮವಾಗಿದೆ?. ನೀನು ಮುಸ್ಲಿಂ ಆದರೂ ಹಿಜಬ್ ಹಾಕದೆ ಯಾಕೆ ಓಡಾಡುತ್ತೀಯಾ?. ಕ್ಯಾಮೆರಾ ಮುಂದೆ ಯಾಕೆ ಖುಷಿ ಖುಷಿಯಾಗಿ ಫೋಸ್ ಕೊಡುತ್ತೀಯಾ?. ಏಯ್ ಮೀನುಮಾರುವವಳೇ, ನಾವು ನಿನಗೆ ಬುದ್ಧಿ ಕಲಿಸುತ್ತೇವೆ. ಎಲ್ಲಿಯಾದರೂ ಹೋಗಿ ನಿನಗೆ ಸಾಯಬಾರದೇಕೆ?. ನಿನ್ನನ್ನು ಮದುವೆಯಾಗುವವನ ಸ್ಥಿತಿ ಹೇಗಿರುತ್ತದೋ? ಇನ್ನೂ ಅನೇಕ ರೀತಿಯ ಕೆಟ್ಟ ಮಾತುಗಳಿಂದ ಟ್ರೋಲರ್ಗಳನ್ನು ಆಕೆಯನ್ನು ಜರೆದಿದ್ದಾರೆ. ಆಕೆಯ ಕೈಯಲ್ಲಿದ್ದ ಚಿನ್ನದ ಉಂಗುರದ ಬಗ್ಗೆ, ಆಕೆಯ ಬಟ್ಟೆ, ಆಕೆಯ ಹಾವಭಾವದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಇದರಿಂದಾಗಿ ಸದಾ ಆತ್ಮವಿಶ್ವಾಸ ಚಿಲುಮೆಯಂತಿದ್ದ ಹನನ್ ಕುಸಿದು ಹೋದಳು. ದಯವಿಟ್ಟು ನನ್ನನ್ನು ಬಿಟ್ಟು ಬಿಡಿ, ನನ್ನಷ್ಟಕ್ಕೆ ನಾನು ಬದುಕಿಕೊಳ್ಳುತ್ತೇನೆ ಎಂದು ಅಂಗಲಾಚಿದಳು.
ಈ ಪ್ರಕರಣ ಅಲ್ಲಿನ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿದೆ, ಹಲವಾರು ಗಣ್ಯರು ಹನನ್ ಸಹಾಯಕ್ಕೆ ಧಾವಿಸಿದ್ದಾರೆ. ಕೇರಳ ಸರ್ಕಾರದ ಆದೇಶದ ಮೇರೆಗೆ ಇಬ್ಬರು ಟ್ರೋಲರ್ಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಚಿತ್ರ ನಟಿ ಪಾರ್ವತಿ, ಸೂಪರ್ ಸ್ಟಾರ್ ಮಮ್ಮುಟಿ ಅಭಿನಯದ ಒಂದು ಸಿನಿಮಾದ ಬಗ್ಗೆ ಪ್ರಶ್ನೆ ಎತ್ತಿದ್ದಕ್ಕೆ ಆತನ ಫ್ಯಾನ್ಸ್ ಆಕೆಯನ್ನು ಯಾವ ರೀತಿ ಟ್ರೋಲ್ ಮಾಡಿದರು ಎಂಬುದನ್ನು ನಾವಿಲ್ಲಿ ಸ್ಮರಿಸಬಹುದು.
ಆದರೂ ಯುವಜನತೆಗೆ ಮಾದರಿಯೆನಿಸುವಂತೆ ಬದುಕುತ್ತಿದ್ದ, ಕಷ್ಟಪಟ್ಟು ದುಡಿದು ಓದುತ್ತಿದ್ದ ಹನನ್, ಟ್ರೋಲಿಗರ ಕಟುಕತನಕ್ಕೆ ಹಿಂಸೆ ಅನುಭವಿಸಬೇಕಾಗಿ ಬಂದುದು ವಿಪರ್ಯಾಸ. ಇಂತಹ ಕೆಟ್ಟ ಟ್ರೋಲ್ ಮನಸ್ಥಿತಿಗಳಿಗೆ ಕಡಿವಾಣ ಹಾಕಬೇಕಾದುದು ಇಂದಿನ ಅನಿವಾರ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.