ಬಳ್ಳಾರಿ: ಪ್ರಧಾನಿ ನರೇಂದ್ರ ಮೋದಿಯವರು ಬಳ್ಳಾರಿಯಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಭಾಷಣವನ್ನು ಉದ್ದೇಶಿಸಿ ಮಾತನಾಡಿದರು.
ಕನ್ನಡದಲ್ಲಿ ಮಾತು ಆರಂಭಿಸಿದ ಮೋದಿ, ಇತಿಹಾಸ ಪ್ರಸಿದ್ಧ ವಿಜಯನಗರ ಸಾಮ್ರಾಜ್ಯ, ಹಕ್ಕ ಬುಕ್ಕ, ವಿದ್ಯಾರಣ್ಯರು, ಶ್ರೀ ಕೃಷ್ಣದೇವರಾಯ, ಕನಕದಾಸರು, ಪುರಂದರದಾಸರಿಗೆ ನನ್ನ ಪ್ರಣಾಮಗಳು ಎಂದರು.
ಬಳ್ಳಾರಿ ಇತಿಹಾಸ ತುಂಬಾ ಗೌರವಯುತವಾಗಿದೆ. ಇಂದಿನ ವಿರಾಟ್ ಜನಸಾಗರ, ನಿಮ್ಮ ಉತ್ಸಾಹ, ಉಲ್ಲಾಸ ಕಾಂಗ್ರೆಸ್ ಪಕ್ಷದ ಕೊನೆ ಎಂಬುದು ಇದರಿಂದ ಸ್ಪಷ್ಟ.
ಬಳ್ಳಾರಿಯು ದೇಶ ಮತ್ತು ಜಗತ್ತಿಗೆ ಸುಶಾಸನ, ಸೌಹಾರ್ದ ಮತ್ತು ಶಾಂತಿಯ ಮಾದರಿಯಾಗಿದೆ. ಇತಿಹಾಸ ಪರಂಪರೆಯನ್ನು ಗಮನದಲ್ಲಿಟ್ಟುಕೊಂಡು ನಾವು 50 ರೂ. ಹೊಸ ನೋಟಿನಲ್ಲಿ ಹಂಪಿಯ ಚಿತ್ರವನ್ನು ಮುದ್ರಿಸಿದ್ದೇವೆ.
ಆಕ್ರಮಣಕಾರರು, ಅತ್ಯಾಚಾರಿಗಳ ವಿರುದ್ಧ ಯಾವ ರೀತಿ ದಿಟ್ಟ ಹೋರಾಟ ಮಾಡಿದ್ದಾರೆ ಎಂಬುದಕ್ಕೆ ಈ ಕ್ಷೇತ್ರ ಉದಾಹರಣೆಯಾಗಿದೆ. ಆದರೆ ಕಾಂಗ್ರೆಸ್ ತನ್ನ ರಾಜನೀತಿಯ ಸ್ವಾರ್ಥಕ್ಕಾಗಿ ಇದನ್ನು ಬಿಗಡಾಯಿಸುವ ಕಾರ್ಯ ಮಾಡಿದೆ.
ಬಳ್ಳಾರಿಯಲ್ಲಿ ಕೇವಲ ಗುಂಡಾಗಳು ಇದ್ದಾರೆ ಎಂಬಂತೆ ದೇಶದಲ್ಲಿ ಪ್ರಚಾರ ಮಾಡಲಾಗುತ್ತಿದೆ. ಇದು ಬಳ್ಳಾರಿಗೆ ಮಾಡುತ್ತಿರುವ ಅಪಮಾನವಾಗಿದೆ. ಬಳ್ಳಾರಿ ಘನತೆಯನ್ನು ಹಾಳು ಮಾಡಿದವರಿಗೆ ನೀವು ಶಿಕ್ಷೆ ನೀಡಬೇಕಿದೆ.
ಕರ್ನಾಟಕದಲ್ಲಿ ಪ್ರವಾಸೋದ್ಯಮ, ಉದ್ಯಮಕ್ಕೆ ಸಾಕಷ್ಟು ವಿಪುಲ ಅವಕಾಶವಿದೆ. ಆದರೆ ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿಲ್ಲ. ರಾಜ್ಯದಲ್ಲಿ ಪ್ರಸ್ತುತ ಸಿದ್ದ – ಸೀದಾ ರುಪಯ್ಯ ಸರ್ಕಾರವಿದೆ. ಇದರಿಂದ ಕರ್ನಾಟಕದ ಜನತೆ ಸಾಲದಿಂದ ನರಳುತ್ತಿದ್ದಾರೆ. ಆದರೆ ಕಾಂಗ್ರೆಸ್ನವರು ಶ್ರೀಮಂತರಾಗುತ್ತಿದ್ದಾರೆ. ಹೀಗಾಗಿ ಮೇ 12 ರಂದು ಕಮಲದ ಗುರುತಿಗೆ ಮತ ನೀಡಿ ಕಾಂಗ್ರೆಸ್ನ ದುರಾಡಳಿತದ ಲೆಕ್ಕ ಚುಕ್ತಾ ಮಾಡಬೇಕಿದೆ.
ಕರ್ನಾಟಕದಲ್ಲಿ ಖರ್ಚಾಗುತ್ತಿರುವ ಹಣದ ಲಾಭ ಜನರಿಗೆ ಸಿಗುತ್ತಿಲ್ಲ, ಭ್ರಷ್ಟಾಚಾರದಿಂದಾಗಿ ಅದು ಲೂಟಿಕಾರರಿಗೆ, ಕಾಳಸಂತೆಗಾರರಿಗೆ, ದರೋಡೆಕೋರರಿಗೆ ಹೋಗುತ್ತಿದೆ. ಅತಿ ಚಿಕ್ಕ ಕೆಲಸವನ್ನೂ ಲಂಚಕೊಟ್ಟು ಮಾಡಿಸಿಕೊಳ್ಳಬೇಕಾಗಿದೆ. ಶ್ರೀಸಾಮಾನ್ಯ ಸಂಕಷ್ಟ ಎದುರಿಸುತ್ತಿದ್ದಾನೆ.
೫ ವರ್ಷದಲ್ಲಿ ಈ ಸೀದಾ ರುಪಯ್ಯ ಸರ್ಕಾರ ಒಂದು ಗಣಿ ನೀತಿಯನ್ನೂ ಮಾಡಿಲ್ಲ, ರಾಜಕೀಯಕ್ಕಾಗಿ ಪಾದಯಾತ್ರೆ ಮಾಡಿದವರು ಅಧಿಕಾರಕ್ಕೆ ಬಂದ ಬಳಿಕ ಗಣಿ ನೀತಿಯನ್ನು ಮರೆತು ಬಿಟ್ಟರು. ಬಳ್ಳಾರಿಯಿಂದ ಸ್ಪರ್ಧೆ ಮಾಡಿದ ಸೋನಿಯಾ ೩ ಸಾವಿರ ಪ್ಯಾಕೇಜ್ ನೀಡುವುದಾಗಿ ಹೇಳಿದ್ದರು. ಆದರೆ ಗೆದ್ದ ಬಳಿಕ ಅದನ್ನು ಮರೆತರು.
ಬಳ್ಳಾರಿಯಲ್ಲಿ ಅಪಾರ ಪ್ರಾಕೃತಿಕ ಸಂಪತ್ತಿದೆ, ತುಂಗಾಭದ್ರ ನದಿಯಿದೆ. ಆದರೆ ಬೆಂಗಳೂರಿನಲ್ಲಿನ ಸರ್ಕಾರ ಇದನ್ನು ಸರಿಯಾಗಿ ಬಳಸಿಕೊಳ್ಳದೆ ಬಳ್ಳಾರಿಯನ್ನು ಹಿಂದುಳಿದ ಜಿಲ್ಲೆಯನ್ನಾಗಿಸಿದೆ.
ಬಿಜೆಪಿ ಸರ್ಕಾರದಿಂದ ಬಳ್ಳಾರಿಗಾಗಿ ೨ ಸಾವಿರ ಕೋಟಿ ಪ್ಯಾಕೇಜ್ ಯೋಜನೆ ನೀಡಿದ್ದೆವು. ಆದರೆ ಕಾಂಗ್ರೆಸ್ ಈ ಭಾಗದ ಜನರ ನೀರಿನ ಸಮಸ್ಯೆಯನ್ನು ಬಗೆಹರಿಸಲಿಲ್ಲ, ಜನ ಎದುರಿಸುವ ಸವಾಲುಗಳಿಗೆ ಸ್ಪಂದಿಸಲಿಲ್ಲ. ತುಂಗಾಭದ್ರ ಡ್ಯಾಂ ಇದ್ದರೂ ರೈತರಿಗಾಗಲಿ, ಜನರಿಗಾಗಲಿ ನೀರು ಸಿಗುತ್ತಿಲ್ಲ. ಡ್ಯಾಂನಲ್ಲಿನ ಕಲ್ಮಶ ತೆಗೆಯಬೇಕೆಂಬ ರೈತರ ಬಹುದಿನದ ಬೇಡಿಕೆಯನ್ನೂ ಈಡೇರಿಸಲಿಲ್ಲ.
ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತೇವೆ ಎಂದು ಕರ್ನಾಟಕದ ಜನರಿಗೆ, ರೈತರಿಗೆ, ನಿಮಗೆ ಆಶ್ವಾಸನೆ ನೀಡುತ್ತಿದ್ದೇವೆ. ಇಡೀ ಕರ್ನಾಟಕದಾದ್ಯಂತ ಇಲ್ಲಿನ ಚಿಕ್ಕಪುಟ್ಟ ಆಣೆಕಟ್ಟು, ಕಾಲುವೆಗಳಲ್ಲಿನ ಹೂಳೆತ್ತುವ ಕಾರ್ಯ ಮಾಡಿ ನೀರಾವರಿಯನ್ನು ಒದಗಿಸುವ ಕಾರ್ಯ ಮಾಡುತ್ತೇವೆ.
ಇಲ್ಲಿ ಕಾಂಗ್ರೆಸ್ ಸರ್ಕಾರ ಬಂದ ೨ ವರ್ಷದ ಬಳಿಕ ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಂತು. ಕಾಲುವೆ, ಆಣೆಕಟ್ಟುಗಳಲ್ಲಿ ನಿರ್ಮಾಣವಾದ ಕಲ್ಮಶವನ್ನು ತೆಗೆದು ಭಾರೀ ಪ್ರಮಾಣದ ನೀರು ಸಂಗ್ರಹ ಮಾಡಿತ್ತು. ಹೂಳೆತ್ತುವ ಕಾರ್ಯ ಹೇಗೆ ಮಾಡಬೇಕು ಎಂದು ಅವರಿಂದ ಕಲಿಯಬಹುದಿತ್ತು.
ಮುಂಬರುವ ದಿನಗಳಲ್ಲಿ ಬಡವರ, ರೈತರ, ಜನರ ಆಶೋತ್ತರಗಳಿಗೆ ಅನುಗುಣವಾದ ಕಾರ್ಯಕ್ರಮಗಳನ್ನು ಬಿಜೆಪಿ ಕರ್ನಾಟಕದಲ್ಲಿ ಜಾರಿಗೆ ತರಲಿದೆ.
ವೋಟ್ ಬ್ಯಾಂಕ್ ಮಾಡುವ ಕಾಂಗ್ರೆಸ್, ದಲಿತರ, ಆದಿವಾಸಿಗಳ ವಿರೋಧಿಯಾಗಿದೆ. ಕೇವಲ ವೋಟಿಗಾಗಿ ಅವರನ್ನು ಬಳಸುತ್ತಿದೆ. ಆ ಪಕ್ಷ ಹಿಂದುಳಿದ ವರ್ಗದ ಘೋರ ಶತ್ರುವಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸುವ ಕಾರ್ಯ ಮಾಡಿದ್ದೇವೆ. ಹಿಂದುಳಿದ ಜನರಿಗೆ ಸಂವಿಧಾನಬದ್ಧ ಮೀಸಲಾತಿ ನೀಡುವ ಸಲುವಾಗಿ ಅವರ ಪರವಾದ ಕಾನೂನು ತರಲು ಹೊರಟಿದ್ದೆವು. ಆದರೆ ಕಾಂಗ್ರೆಸ್ ಒಬಿಸಿ ಕಾನೂನನ್ನು ತರಲು ಬಿಡಲಿಲ್ಲ, ಅದು ಅವರ ಒಬಿಸಿ ವಿರೋಧಿ ಮನಃಸ್ಥಿತಿಯಾಗಿದೆ.
ನಮಗೆ ಮೊದಲು ಅಧಿಕಾರ ಸಿಕ್ಕಾಗ ನಾವು ದೇಶಕ್ಕೆ ಅಪ್ರತಿಮ ಮುಸ್ಲಿಂ ವ್ಯಕ್ತಿಯನ್ನು ರಾಷ್ಟ್ರಪತಿಯಾಗಿ ನೀಡಿದೆವು. ಬಿಜೆಪಿಯವರು ಕೋಮುವಾದಿಗಳು ಎಂದು ಅಪಪ್ರಚಾರ ಮಾಡಿದರು, ಆದರೆ 2ನೇ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ನಾವು ಬಡ, ಗ್ರಾಮೀಣ ಭಾಗದ ಸರಳ ದಲಿತ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಿದೆವು.
ಬಿಜೆಪಿ ಬ್ರಾಹ್ಮಣರ ಪಕ್ಷ, ಉತ್ತರ ಭಾರತದ ಪಕ್ಷ ಎಂದು ಜರೆಯುತ್ತಿದ್ದರು, ಆದರೆ ಅದೇ ಪಕ್ಷ ಒರ್ವ ಮುಸ್ಲಿಂ, ಒರ್ವ ದಲಿತನನ್ನು ರಾಷ್ಟ್ರಪತಿ ಮಾಡಿತು, ಹಿಂದುಳಿದ ಚಾಯ್ ಮಾರಾಟಗಾರನನ್ನು ಪ್ರಧಾನಿ ಮಾಡಿತು. ದಕ್ಷಿಣ ಭಾರತದ ವೆಂಕಯ್ಯ ನಾಯ್ಡುರನ್ನು ಉಪ ರಾಷ್ಟ್ರಪತಿ ಮಾಡಿತು. ದೇಶದ ದಲಿತರ, ಪೀಡಿತರ, ವಂಚಿತರ, ಶೋಷಿತರ ಬೆಂಬಲವೇ ನಮಗೆ ಅತೀ ದೊಡ್ಡ ಶಕ್ತಿಯಾಗಿದೆ.
ನಮ್ಮನ್ನು ವಿರೋಧಿಗಳು ಮಹಿಳಾ ವಿರೋಧಿಗಳು ಎನ್ನುತ್ತಿದ್ದರು. ಆದರೆ ದೇಶದ ರಕ್ಷಾ ಮಂತ್ರಿ ಮಹಿಳೆಯಾಗಿದ್ದಾರೆ. ಅವರನ್ನೂ ಕರ್ನಾಟಕವೇ ಆಯ್ಕೆ ಮಾಡಿ ಕಳುಹಿಸಿದೆ. ನಮ್ಮ ಈ ಒಂದೊಂದು ಬೆಳವಣಿಗೆಯನ್ನೂ ನೋಡಿ ಕಾಂಗ್ರೆಸ್ಗೆ ದಿಗ್ಭ್ರಮೆಯಾಗಿದೆ.
ನಿದ್ದೆ ಮಾಡುವ ಮುಖ್ಯಮಂತ್ರಿ, ಮಲಗಿರುವ ಸರ್ಕಾರ, ದಿನರಾತ್ರಿ ರಾಜಕೀಯ ಮಾಡುವುದರಲ್ಲಿ ಮುಳುಗಿರುವ ನಾಯಕರು ಕರ್ನಾಟಕಕ್ಕೆ ಕೊಟ್ಟ ಕೇಂದ್ರದ ೯೦೦ ಕೋಟಿ ರೂ. ಅನುದಾನದಲ್ಲ್ಲಿ ಕೇವಲ ೩೭ ಲಕ್ಷ ರೂಪಾಯಿ ಖರ್ಚು ಮಾಡಿದೆ. ಇದರಿಂದಲೇ ಸರ್ಕಾರ ಎಷ್ಟು ಸೋಮಾರಿ ಎಂದು ತಿಳಿದು ಬರುತ್ತದೆ.
ಇಲ್ಲಿನ ಜನರ ಎಲ್ಲಾ ಸಂಕಷ್ಟ, ಸವಾಲುಗಳಿಗೆ ಬಿಜೆಪಿ ಪರಿಹಾರವಾಗಿ ನಿಂತಿದ್ದು, ಅವರ ಆಶೋತ್ತರಗಳನ್ನು ಈಡೇರಿಸಲಿದೆ.
ಬಳ್ಳಾರಿಯ ಈ ಕ್ಷೇತ್ರ ಉದ್ಯಮಿಗಳ ಕ್ಷೇತ್ರವೂ ಹೌದು. ಆದರೆ ಕಾಂಗ್ರೆಸ್ ಇಲ್ಲಿನ ಜೀನ್ಸ್ ಕೈಗಾರಿಕೆಗೆ ಉತ್ತೇಜನ ನೀಡಿಲ್ಲ. ಜೀನ್ಸ್ ಉದ್ಯಮ ಬೆಳೆಸಲು ೬ ಸಾವಿರ ಕೋಟಿ ಯೋಜನೆಯನ್ನು ತರಲಿದ್ದೇವೆ, ಇದನ್ನು ಇಲ್ಲಿನ ಜನರ ಉಪಯೋಗಿಸಿಕೊಳ್ಳಬೇಕು. ಕೇಂದ್ರದ ಟೆಕ್ಸ್ಟೈಲ್ ನೀತಿ ರಚಿಸಿದ್ದು, ಅದರಿಂದಾಗಿ ಅನೇಕ ಜನರಿಗೆ ಹೊಸ ಉದ್ಯೋಗಾವಕಾಶ ಸಿಗಲಿದೆ.
ಬಳ್ಳಾರಿಯ ಅಭಿವೃದ್ಧಿಯಾದರೆ ಕರ್ನಾಟಕದ ಅಭಿವೃದ್ಧಿಯಾಗುತ್ತದೆ, ಕರ್ನಾಟಕ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿಯಾಗುತ್ತದೆ. ಮೇ ೧೨ರಂದು ಕಮಲಕ್ಕೆ ಮತ ನೀಡಿ, ಯಡಿಯೂರಪ್ಪನವರನ್ನು ಗೆಲ್ಲಿಸಿ. ಸರ್ಕಾರ ಬದಲಿಸಿ, ಬಿಜೆಪಿ ಗೆಲ್ಲಿಸಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.