ರಕ್ತದಲ್ಲಿ ಬರೆದ ಅಭಯಾಕ್ಷರ ಸಮರ್ಪಣೆ | ಸುಮಾರು 5 ಸಾವಿರ ಗೋಪ್ರೇಮಿಗಳು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿ
ಕುಮಟಾ : ಅಭಯಗೋಯಾತ್ರೆಯೆನ್ನುವುದು ಗೋರಕ್ಷೆಯ ಮಹಾಸುನಾಮಿ. ಗೋರಕ್ತ ಮುಕ್ತ ಭಾರತದ ಸಾಕಾರಕ್ಕಾಗಿ ಈ ಮಹಾಯಾತ್ರೆ ಆಯೋಜಿಸಲಾಗಿದೆ. ಅಭಯಾಕ್ಷರದ ಮೂಲಕ ಗೋಸಂರಕ್ಷಣೆಯ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ಕುಮಟಾದ ಕೊಂಕಣ ಎಜುಕೇಶನ್ ಟ್ರಸ್ಟ್ನ ಆವರಣದಲ್ಲಿ ನಡೆದ ಐತಿಹಾಸಿಕ ಅಭಯಗೋಯಾತ್ರೆಯ ಶುಭಾರಂಭ ಸಮಾರಂಭವನ್ನುದ್ದೇಶಿಸಿ ಗೋಸಂದೇಶವನ್ನು ಅನುಗ್ರಹಿಸಿದ ಶ್ರೀರಾಮಚಂದ್ರಾಪುರಮಠದ ಶ್ರೀಮದ್ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು, ಕೇವಲ ಒಂದೇ ಒಂದು ಹಸ್ತಾಕ್ಷರದಿಂದ ಹಿಂದೆಯೇ ಕೋಟಿ ಕೋಟಿ ಗೋವುಗಳ ಮಾರಣಹೋಮವನ್ನು ಆಳುವವರು ತಡೆಯಬಹುದಿತ್ತು. ಆದರೆ ಗೋಹತ್ಯೆಯ ನಿಷೇಧಕ್ಕಾಗಿ ಸಮಾಜವೇ ಮನಮಾಡಿ, ಕೋಟ್ಯಂತರ ಗೋಪ್ರೇಮ ಪತ್ರದ ಅಂಕಿತದ ಮೂಲಕ ಈ ಕಾರ್ಯ ಮಾಡಲೇಬೇಕಿರುವ ಅನಿವಾರ್ಯ ಸಮಯವಿದು. ಅದಕ್ಕಾಗಿ ಅಭಯಗೋಯಾತ್ರೆ ಎಂದರು. ರಕ್ತದಲ್ಲಿ ಪತ್ರ ಬರೆದು ಗೋವನ್ನು ಉಳಿಸುವ ಶ್ರೇಷ್ಟರು ಕುಮಟಾದ ನೆಲದಲ್ಲಿರುವುದು ಹೆಮ್ಮೆಯ ವಿಚಾರ. ಆ ದೃಷ್ಟಿಯಿಂದ ಈ ಬಗೆಯ ರಕ್ತಪತ್ರವೆನ್ನುವುದು ಸ್ವರ್ಣಪತ್ರಕ್ಕಿಂತಲೂ ಅತ್ಯಂತ ಹೆಚ್ಚಿನದ್ದು ಎಂದು ಗೋಸಂದೇಶ ನೀಡಿದರು.
ಗೋವಿಗಾಗಿ ಆಂದೋಲನವೆನ್ನುವ ಇತಿಹಾಸವೇ ಇಲ್ಲ. ಆದರೆ ಶ್ರೀರಾಮಚಂದ್ರಾಪುರಮಠದ ಇತಿಹಾಸದ ಭಾಗವಾಗಿರುವ ಹಿಂದಿನೆಲ್ಲದರ ಮುಂದುವರಿಕೆಯಾಗಿ ಅಭಯಗೋಯಾತ್ರೆ. ರಾಜ್ಯಸರ್ಕಾರ ಹಾಗೂ ಕೇಂದ್ರಸರ್ಕಾರಕ್ಕೆ ಸಂಪೂರ್ಣ ಗೋಹತ್ಯಾ ನಿಷೇಧ ಮಾಡುವ ಒತ್ತಾಯ ಹೇರುವ ಸಲುವಾಗಿ ಈ ಅರ್ಜಿಯ ಅಭಿಯಾನ ನಡೆಯಲಿದೆ. ಸಂಪೂರ್ಣ ಭಾರತದ ಜಾಗೃತಿಗಾಗಿ ಈ ಯಾತ್ರೆ. ಪೂರ್ವಾಗ್ರಹವಿಲ್ಲದೇ ರೈತ, ಗೋವು, ಸಂತಶಕ್ತಿಯ ಸಮ್ಮಿಲನದ ಸಾಕಾರಕ್ಕಾಗಿ ಈ ಯಾತ್ರೆ. ಕರ್ನಾಟಕದ ಮೂಲೆಮೂಲೆಗಳಲ್ಲಿ ಈ ಜಾಗೃತಿ ಯಾತ್ರೆ ಸಂಚಲನ ಮೂಡಿಸಲಿದೆ. ಪ್ರಜೆಗಳಿಂದ ಆರಂಭವಾಗಿ ಆಳುವವರ ಹಸ್ತಾಕ್ಷರದೊಂದಿಗೆ ಸಮಾಪನಗೊಳ್ಳಲಿರುವುದು ಈ ಗೋಯಾತ್ರೆ. ಈ ನಿಟ್ಟಿನಲ್ಲಿ ಅಭಯಗೋಯಾತ್ರೆಯೆಂಬುದೊಂದು ಆಳುವವರ ಮಸ್ತಿಷ್ಕವನ್ನು ತೊಳೆಯುವ, ಬುದ್ಧಿಯನ್ನು ಶುದ್ದಗೊಳಿಸುವ ಮಹಾಪ್ರವಾಹ ಎಂದರು.
ಕರ್ನಾಟಕ ಸರ್ಕಾರದ ಮೇಲೆ ಭರವಸೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೀಗಳು, ಸರ್ಕಾರ ಬದಲಾಗುವಂತದ್ದು. ಜನರ ಮನಸ್ಥಿತಿ ಬದಲಾವಣೆ ಆದರೆ ಖಂಡಿತಾ ಗೋಹತ್ಯೆ ನಿಷೇಧವಾಗುತ್ತದೆ ಎಂದರು.
ಕೂಡ್ಲಿ ಶೃಂಗೇರಿ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ವಿದ್ಯಾಭಿನವ ವಿದ್ಯಾರಣ್ಯ ಮಹಾಸ್ವಾಮಿಗಳು ಮಾತನಾಡಿ, ವೇದಕಾಲದಿಂದಲೂ ಗೋಮಹತಿಯನ್ನು ಸಾರುವ ಕಾರ್ಯ ನಡೆದಿದೆ. ಸಂವಿಧಾನದಲ್ಲಿಯೂ ಈ ಬಗ್ಗೆ ಉಲ್ಲೇಖವಿದೆ. ಸುಪ್ರೀಂ ಕೋರ್ಟ್ನ ಆದೇಶ ಕೂಡಾ ಮಾನ್ಯ ಮಾಡುವಲ್ಲಿ ಸರ್ಕಾರ ಕಾಳಜಿ ವಹಿಸಿಲ್ಲ. ಇದನ್ನು ನಿರ್ದೇಶಿಸುವ ಸಲುವಾಗಿ ನಡೆಯುತ್ತಿರುವ ಪ್ರಕೃತ ಅಭಯಗೋಯಾತ್ರೆ ಗೋಸಂರಕ್ಷಣೆಯ ದೃಷ್ಟಿಯಿಂದ ಮಹತ್ತರ ಹೆಜ್ಜೆಯಾಗಿದೆ. ರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಜೊತೆಯಲ್ಲಿ ನಾವೆಲ್ಲಾ ಇದ್ದೇವೆ, ಸಂತ ಸಮೂಹ ಹಾಗೂ ಗೋಪ್ರೇಮಿಗಳು ಒಟ್ಟಾಗಿ ಈ ಅಭಿಯಾನವನ್ನು ಯಶಸ್ವಿಯಾಗಿಸೋಣ ಎಂದು ಕರೆನೀಡಿದರು.
ರಾಜ್ಯ ಗೋಪರಿವಾರದ ಕೋಶಾಧ್ಯಕ್ಷರಾದ ಶ್ರೀ ಮುರಳೀಧರ್ ಪ್ರಭುರವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಈ ಗೋಯಾತ್ರೆ ಐತಿಹಾಸಿಕ ಕ್ಷಣದ ಮುನ್ನುಡಿಯಾಗಲಿರುವಂತದ್ದು. ತಳಹಂತದ ಎಲ್ಲರ ಧ್ವನಿಯನ್ನು ಆಳುವ ವರ್ಗಕ್ಕೆ ಸಲ್ಲಿಸಲು ಈ ಯಾತ್ರೆ. ಮಹಾತ್ಮರ ಮಹದೋದ್ದೇಶ ಸಫಲಗೊಳಿಸುವ ಸಲುವಾಗಿ ಈ ಯಾತ್ರೆ. ಶ್ರದ್ಧೆ, ನಂಬಿಕೆಗಳ ಬಗ್ಗೆ ಮಾತನಾಡಿದರೆ ‘ಕೆಲ’ವರು ಭಾವನಾತ್ಮಕ ಬ್ಲಾಕ್ ಮೇಲ್ ಎಂಬರ್ಥದಲ್ಲಿ ಬಿಂಬಿಸುತ್ತಿದ್ದಾರೆ. ಆದರೆ ಗೋಹತ್ಯೆಯ ವಿರುದ್ಧದ ನಿಲುವು ಸಂವಿಧಾನಬದ್ಧವಾದದ್ದು ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಿದೆ. ಹಾಗಾಗಿ ಗೋಕೈಂಕರ್ಯದ ಪತ್ರಸಲ್ಲಿಕೆಯ ಮಹಾಂದೋಲನವೇ ಈ ಅಭಯಗೋಯಾತ್ರೆ ಎಂದರು.
ಸುರೇಶ್ ತಿಮ್ಮಣ್ಣ ಭಟ್ ರವರು ತಮ್ಮ ರಕ್ತದಿಂದ ಬರೆದ ಅಭಯಾಕ್ಷರ ಪತ್ರವನ್ನು ಶ್ರೀಗಳಿಗೆ ಸಮರ್ಪಿಸಿದ್ದು ಆಂದೋಲನಕ್ಕೆ ಹೊಸ ಹುರುಪನ್ನು ನೀಡಿತು. ಯಾತ್ರೆಯ ಆರಂಭದ ದಿನದಂದೇ ಉತ್ತರಕನ್ನಡ ಜಿಲ್ಲೆಯ ಸುಮಾರು 4 ಲಕ್ಷಕ್ಕೂ ಅಧಿಕ ಅಭಯಾಕ್ಷರ ಅರ್ಜಿಗಳು ಸಮರ್ಪಿಸಲ್ಪಟ್ಟವು. ಶಿರಸಿ ತಾಲ್ಲೂಕಿನಿಂದಲೇ 1 ಲಕ್ಷ ಅರ್ಜಿ ಸಂಗ್ರಹವಾಗಿದ್ದು ಹಾಗೂ ಸೋಂದಾ ಭಾಗದಲ್ಲಿ 100% ಸಹಿ ಸಂಗ್ರಹವಾಗಿರುವುದು ಗಮನಸೆಳೆಯಿತು.
ಕಾರ್ಯಕ್ರಮಕ್ಕೂ ಮೊದಲು ಕುಮಟಾದ ಶಾಂತಿಕಾ ಪರಮೇಶ್ವರೀ ದೇವಾಲಯದಿಂದ ಭವ್ಯ ಶೋಭಾಯಾತ್ರೆ ಆರಂಭವಾಯಿತು. ಅಭಯರಥ ಹಾಗೂ ಸಂಗ್ರಹವಾದ ಅಭಯಾಕ್ಷರದ ಮೆರವಣಿಗೆ ಕುಮಟಾದ ನಗರ ಭಾಗದಲ್ಲಿ ಸಂಚರಿಸಿ ಜನರಲ್ಲಿ ಗೋಜಾಗೃತಿಯನ್ನು ಉಂಟುಮಾಡಿತು. ಸಂತರು – ಗಣ್ಯರು ಸೇರಿದಂತೆ ಯಾವುದೇ ಬೇಧಭಾವವಿಲ್ಲದೇ ಸಾವಿರಾರು ಗೋಪ್ರೇಮಿಗಳು ಭಾಗಿಯಾಗಿ ಗೋಪ್ರೇಮವನ್ನು ಮೆರೆದರು.
ರಾಜ್ಯ ಗೋಪರಿವಾರದ ಅಧ್ಯಕ್ಷರು ಹಾಗೂ ಸುಕ್ಷೇತ್ರ ಗಂವ್ಹಾರದ ಶ್ರೀಪಾಂಡುರಂಗ ಮಹಾರಾಜ್, ನಂದಿಗುಡಿಯ ಶ್ರೀ ಷ.ಬ್ರ ನಂದಿಕೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ರಾಮಕೃಷ್ಣಾಶ್ರಮದ ಶ್ರೀ ಭವೇಶಾನಂದಜಿ ಮಹಾರಾಜ್, ಶ್ರೀ ಜ್ಞಾನಾನಂದ ಮಹಾರಾಜ್, ಗೋಕಾಕದ ಬ್ರಹ್ಮಾನಂದ ಸ್ವಾಮಿಗಳು ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಅಭಯಗೋಯಾತ್ರೆಗೆ ಆಶೀರ್ವದಿಸಿದರು. ಗೋಪರಿವಾರದ ಜಿಲ್ಲಾ ಅಧ್ಯಕ್ಷರಾದ ಬಾಬು ಬಾಂದೇಕರ್ ದಂಪತಿಗಳು ಸಭಾಪೂಜೆ ನೆರವೇರಿಸಿದರು.
ಆರ್ ಎಸ್ ಭಾಗವತ್, ಮಾಜಿ ಶಾಸಕರು, ದಿನಕರ್ ಶೆಟ್ಟಿ, ಮಾಜಿ ಶಾಸಕರು, ಪ್ರದೀಪ್ ನಾಯಕ್ ಜಿಲ್ಲಾಪಂಚಾಯತ್ ಸದಸ್ಯ, ಮುಖಂಡರಾದ ವೆಂಕಟರಮಣ ಹೆಗಡೆ, ಪ್ರಮೋದ್ ಹೆಗಡೆ, ಡಾ. ಜಿಜಿ ಹೆಗಡೆ, ಸೂರಜ್ ನಾಯಕ್ ಸೋನಿ ಹಾಗೂ ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ತಾಲ್ಲೂಕು ಪಂಚಾಯತ್ ಸದಸ್ಯರು ಸೇರಿದಂತೆ ಸುಮಾರು 5 ಸಾವಿರ ಗೋಪ್ರೇಮಿಗಳು ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.