ಬೆಳ್ತಂಗಡಿ : ತಾಲೂಕಿನ 46 ಗ್ರಾಮ ಪಂಚಾಯತ್ಗೆ ಶುಕ್ರವಾರ ನಡೆದ ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯವಾಗಿದೆ. ಉರಿ ಬಿಸಿಲಿನ ತಾಪದ ನಡುವೆಯೂ ಮೋಡ ಕವಿದ ವಾತಾವರಣ ಇದ್ದ ಕಾರಣ ಮತದಾರರು ತಮ್ಮ ಮತ ಚಲಾಯಿಸಲು ಬೆಳಗ್ಗೆಯೇ ಮತಗಟ್ಟೆಯ ಸರದಿ ಸಾಲಿನಲ್ಲಿದ್ದರು. ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ನಾಯಕರು, ಕಾರ್ಯಕರ್ತರು ಮತದಾರರನ್ನು ಬೂತ್ ಮಟ್ಟದಲ್ಲಿ ಓಲೈಸುವ ದೃಶ್ಯ ಸಾಮಾನ್ಯವಾಗಿತ್ತು.
ಮತದಾರರನ್ನು ಕರೆ ತರಲು ಮತ್ತು ಕರೆದೊಯ್ಯಲು ವಾಹನಗಳ ಭರಾಟೆಯೂ ಇತ್ತು. ಪ್ರತಿ ಗ್ರಾಮದಲ್ಲೂ ಯುವಕರ ಓಡಾಟ ಕಾಣುತ್ತಿತ್ತು. ವಯೋವೃದ್ದರು ಸೇರಿದಂತೆ ತಮ್ಮ ಹಕ್ಕನ್ನು ಚಲಾಯಿಸಲು ಮತಗಟ್ಟೆ ಬರುತ್ತಿದ್ದು ಕಾಣಬಹುದಾಗಿತ್ತು.ತಾಲೂಕಿನ 46 ಗ್ರಾಪಂಗಳ 623 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಕಣದಲ್ಲಿದ್ದರು.
ಕೆಲವೆಡೆ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಬಂಡಾಯ ಅಭ್ಯರ್ಥಿಗಳ ಸ್ಪರ್ಧೆ ಪೈಪೋಟಿಯನ್ನು ನೀಡಿದೆ. ಅದರೊಂದಿಗೆ ಪಕ್ಷೇತರ ಅಭ್ಯರ್ಥಿಗಳು ಇತರ ಅಭ್ಯರ್ಥಿಗಳಿಗೆ ಸರಿಸಮಾನವಾಗಿ ಫೀಲ್ಡ್ಗೆ ಇಳಿದದ್ದು ಫಲಿತಾಂಶ ಮೇಲೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಅಧಿಕ. ಮಹಿಳೆಯರಿಗೆ ಹೆಚ್ಚಿನ ಸ್ಥಾನ ಇದ್ದ ಕಾರಣ ಎಲ್ಲಾ ಬೂತ್ಗಳಲ್ಲೂ ಮಹಿಳೆಯ ಗುಂಪುಗಳೇ ಇದ್ದವು. ಮಹಿಳಾ ಅಭ್ಯರ್ಥಿಗಳು ಹುರುಪಿನಿಂದ ಮತಯಾಚನೆ ಮಾಡುತ್ತಿದ್ದರು.
ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ತಾಪಂ ಸದಸ್ಯಯಾಗಿದ್ದರು, ಸಹೋದರರು, ಪತಿಪತ್ನಿ ಕಣದಲ್ಲಿರುವುದು ವಿಶೇಷ. ಬಾರ್ಯದಲ್ಲಿ ತಾಪಂ ಮಾಜಿ ಉಪಾಧ್ಯಕ್ಷೆ ಹೇಮಾವತಿ, ಅಳದಂಗಡಿಯಲ್ಲಿ ಮಾಜಿ ತಾಪಂ ಸದಸ್ಯ ಪ್ರಶಾಂತ್ ವೇಗಸ್, ಅರಸಿನಮಕ್ಕಿಯಲ್ಲಿ ಮಂಜುಳಾ ಕಾರಂತ್, ಕಳಿಯದಲ್ಲಿ ಪ್ರದೀಪ ಕುಮಾರ್ ಸ್ಪರ್ಧಿಸಿದ್ದರು. ಧರ್ಮಸ್ಥಳ ಗ್ರಾಪಂನಲ್ಲಿ ಸಹೋದರರಾದ ಅಚ್ಚುತ ಪೂಜಾರಿ ಮತ್ತು ಡಿ. ಪ್ರಭಾಕರ ಹಾಗೂ ಬಾರ್ಯದಲ್ಲಿ ನವೀನ್ ರೈ ಮತ್ತು ಪ್ರವೀಣ್ಚಂದ್ರ ಅವರು ಬೇರೆ ಬೇರೆ ಪಕ್ಷದ ಬೆಂಬಲಿತರಾಗಿ ಸ್ಪರ್ಧಿಸಿದ್ದಾರೆ. ಪುದುವೆಟ್ಟು ಗ್ರಾಪಂನ ೨ನೇ ವಾರ್ಡ್ನಲ್ಲಿ ಫ್ರಾನ್ಸಿಸ್ ಹಾಗೂ ಅವರ ಪತ್ನಿ ಶಿಭಾ ಅವರು ಪಕ್ಷೇತರರಾಗಿ ಕಣದಲ್ಲಿದ್ದರು.
ನಡ ಗ್ರಾಪಂನಲ್ಲಿ ಪಂಚಾಯತ್ನ ಮಾಜಿ ಅಧ್ಯಕ್ಷ ವಿಠಲ ಶೆಟ್ಟಿಯವರು ಇದೀಗ ೭ನೇ ಬಾರಿಗೆ ಚುನಾನಣೆಯ ಕಣದಲ್ಲಿದ್ದರು. ಮಂಡಲ ಪಂಚಾಯತ್ ಇರುವಾಗ, ಬಳಿಕ ಗ್ರಾಮ ಪಂಚಾಯತ್ ಆದಾಗಲೂ ಸ್ಪರ್ಧೆ ನಡೆಸಿ ಕಳೆದ ೩೫ ವರ್ಷಗಳಿಂದ ರಾಜಕೀಯದ ಅನುಭವಿ.ಎರಡು ಗ್ರಾಪಂಗಳಲ್ಲಿ ಅಧ್ಯಕ್ಷರಾಗಿದ್ದರು 4 ಮಂದಿ ಸ್ಪರ್ಧಿಸಿದ್ದರು. ಮುಂಡಾಜೆ ಗ್ರಾಪಂ ನಲ್ಲಿ ವಿಶ್ವನಾಥ ಶೆಟ್ಟಿ, ಅಗರಿ ರಾಮಣ್ಣ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಹಾಗೂ ಚಂದ್ರಾವತಿ. ಅಳದಂಗಡಿ ಗ್ರಾಪಂನಲ್ಲಿ ಸಂಜೀವ ಪೂಜಾರಿ, ಸದಾನಂದ ಉಂಗಿಲಬೈಲು, ಭಾರತಿ ಹಾಗೂ ವಸಂತಿಯವರು.
ಚಿಹ್ನೆ ಬದಲಾವಣೆ : ಮರು ಮತದಾನ:ಬಂದಾರು ಗ್ರಾಮ ಪಂಚಾಯತ್ನ ಮೈರೋತಡ್ಕ ೨ನೇ ವಾರ್ಡ್ನಲ್ಲಿ ಮರು ಮತದಾನ ನಡೆಯಲಿದೆ. ಇಲ್ಲಿನ ವಾರ್ಡ್ನಲ್ಲಿ ಅ. ಜಾತಿಯ ಮಹಿಳೆ ಮೀಸಲಾತಿಯಲ್ಲಿ ಪ್ರೇಮ ಎಂಬವರು ಸ್ಪರ್ಧಿಸಿದ್ದರು. ಹೊಲಿಗೆ ಯಂತ್ರ ಚಿಹ್ನೆಯನ್ನು ಕೇಳಿದ್ದರು. ಆದರೆ ಮತಪತ್ರದಲ್ಲಿ ಮೇಜಿನ ಚಿಹ್ನೆ ಇತ್ತು. ತಕ್ಷಣ ಚುನಾವಣಾ ಅಧ್ಯಕ್ಷಾಧಿಕಾರಿಯವರ ಗಮನಕ್ಕೆ ತಂದು ಆಕ್ಷೇಪ ಸಲ್ಲಿಸಿದ್ದರು. ಬಳಿಕ ಚುನಾವಣೆಯನ್ನು ರದ್ದು ಗೊಳಿಸಲಾಯಿತು. ಮೇ. ೩೧ರಂದು ಮರು ಮತದಾನ ನಡೆಯಲಿದೆ.
ಕೊಯ್ಯುರು ಗ್ರಾಪಂ: ಈ ಗ್ರಾಪಂನಲ್ಲೂ ಗೊಂದಲ ಮೂಡಿತ್ತು. ಆದರೆ ಗುರುವಾರ ರಾತ್ರಿಯೇ ಅದಕ್ಕೆ ಬೇಕಾದ ಪರ್ಯಾಯ ವ್ಯವಸ್ಥೆ ತಾಲೂಕು ಆಡಳಿತ ಕ್ರಮ ಕೈಗೊಂಡ ಕಾರಣ ಗೊಂದಲ ಪರಿಹಾರವಾಗಿದೆ. ಒಂದನೇ ವಾರ್ಡ್ನಲ್ಲಿ ವಿಶ್ವನಾಥ ಎಂಬವರು ಡೀಸೆಲ್ ಪಂಪ್ ಚಿಹ್ನೆ ನೀಡಲಾಗಿತ್ತು. ಆದರೆ ಮತಪತ್ರದಲ್ಲಿ ಬದಲಾವಣೆಯಾಗಿತ್ತು. ಮತಗಟ್ಟೆಯಲ್ಲಿ ಅಭ್ಯರ್ಥಿಗಳ ಚಿಹ್ನೆಗಳ ಚಿತ್ರವನ್ನು ಅಂಟಿಸುವ ಸಂದರ್ಭ ಅಭ್ಯರ್ಥಿಯ ಗಮನಕ್ಕೆ ಬಂದಿದ್ದು ಅದನ್ನು ಇಲಾಖಾಧಿಕಾರಿಗಳ ಗಮನಕ್ಕೆ ತಂದಿದ್ದರು. ಪರ್ಯಾಯ ವ್ಯವಸ್ಥೆ ಮಾಡಿದ ಕಾರಣ ನಿರಂತಕವಾಗಿ ಚುನಾವಣೆ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.