ನವದೆಹಲಿ : ಲೋಕಸಭೆಯಲ್ಲಿ ಸ್ಪೀಕರ್ ಅವರ ಮೇಲೆ ಕಾಗದ ಪತ್ರಗಳನ್ನು ಎಸೆದು ಕಲಾಪದ ಶಿಸ್ತನ್ನು ಉಲ್ಲಂಘಿಸಿದ ವಿಪಕ್ಷ ಕಾಂಗ್ರೆಸ್ನ 6 ಮಂದಿ ಕಾಂಗ್ರೆಸ್ ಸಂಸದರನ್ನು 5 ದಿನಗಳ ಕಾಲ ಸದನದಿಂದ ಅಮಾನತು ಮಾಡಿದ್ದಾರೆ.
ಇಂದು ಲೋಕಸಭೆಯಲ್ಲಿ ಕಲಾಪದ ವೇಳೆ ಬೋಫೋರ್ಸ್ ಖರೀದಿಯಲ್ಲಿ ನಡೆದಿರುವ ಅವ್ಯವಹಾರದ ಕುರಿತಂತೆ ಮರು ತನಿಖೆ ನಡೆಸುವಂತೆ ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿದರು. ಇದರಿಂದ ಕಾಂಗ್ರೆಸ್ ಸಂಸದರು ಕೋಪಗೊಂಡು, ಗೋರಕ್ಷಣೆ ಹೆಸರಿನಲ್ಲಿ ದೇಶದಾದ್ಯಂತ ಹಿಂಸಾಚಾರ ನಡೆಸಲಾಗುತ್ತಿದೆ ಎಂದು ಪ್ರತಿಭಟನೆ ನಡೆಸಿ ಶೇಮ್ ಶೇಮ್ ಎಂದು ಘೋಷಣೆಗಳನ್ನು ಕೂಗುತ್ತ ಸ್ಪೀಕರ್ ಅವರ ಕುರ್ಚಿ ಬಳಿ ಬಂದು ಕಛೇರಿಯ ಅಧಿಕೃತ ಕಾಗದಪತ್ರಗಳನ್ನು ಅನುಮತಿ ಇಲ್ಲದೇ ಮುಟ್ಟಿ ಅವುಗಳನ್ನು ತೆಗೆದು ಎಸೆದಿದ್ದಾರೆ.
ಈ ಸಂದರ್ಭ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಸಂಸದರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಅವರು ಕೇಳಲಿಲ್ಲ. ಹೀಗಾಗಿ ಸದನವನ್ನು 2 ಗಂಟೆಗೆ ಮುಂದೂಡಿದ್ದ ಸ್ಪೀಕರ್ ಅವರು ಮಧ್ಯಾಹ್ನ ಸದನ ಆರಂಭವಾಗುತ್ತಿದ್ದಂತೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಕಲಾಪಕ್ಕೆ ಅಡ್ಡಿ ಪಡಿಸಿ ಸದನದ ಶಿಸ್ತು, ನೀತಿ ಸಂಹಿತೆ ಉಲ್ಲಂಘಿಸಿದ ಕಾಂಗ್ರೆಸ್ನ 6 ಮಂದಿ ಸಂಸದರನ್ನು 5 ದಿನಗಳ ಕಾಲ ಸದನದಿಂದ ಅಮಾನತು ಮಾಡಿದ್ದಾರೆ.
ಅಧೀರ್ ರಂಜನ್ ಚೌಧರಿ, ರಂಜಿತ್ ರಂಜನ್, ಗೌರವ್ ಗೊಗೋಯಿ, ಕೆ. ಸುರೇಶ್, ಸುಷ್ಮಿತಾ ದೇವ್ ಮತ್ತು ಎಂ. ಕೆ. ರಾಘವ್ ಅಮಾನತುಗೊಂಡಿರುವ ಕಾಂಗ್ರೆಸ್ ಸಂಸದರು.
ಕಾಂಗ್ರೆಸ್ ಸಂಸದರು ಸದನದ ಶಿಸ್ತನ್ನು ಉಲ್ಲಂಘಿಸಿ ದೊಡ್ಡ ತಪ್ಪು ಮಾಡಿದ್ದಾರೆ, ಇದನ್ನು ಇಡೀ ದೇಶವೇ ನೋಡಲಿ. ಸಂಸದರ ನಡವಳಿಕೆಯಿಂದ ನೋವಾಗಿದೆ. ಪ್ರಶ್ನೋತ್ತರ ಸಮಯವನ್ನು ವ್ಯರ್ಥ ಮಾಡಿದ್ದಲ್ಲದೆ, ಕಛೇರಿಯ ಅಧಿಕೃತ ಕಾಗದಪತ್ರಗಳನ್ನು ಅನುಮತಿ ಇಲ್ಲದೇ ಮುಟ್ಟಿ ಅವುಗಳನ್ನು ಎಸೆದಾಡಿದ್ದಾರೆ. ಎಚ್ಚರಿಕೆ ನೀಡಿದ್ದರೂ 4 ಬಾರಿ ಮತ್ತೆ ಕಾಗದಪತ್ರಗಳನ್ನು ಎಸೆದಿದ್ದಾರೆ ಎಂದು ಸ್ಪೀಕರ್ ಸುಮಿತ್ರಾ ಮಹಾಜನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ವಿಪಕ್ಷ ನಾಯಕ ಖರ್ಗೆ, ಕಾಂಗ್ರೆಸ್ ಸಂಸದರು ಮಾಡಿದ್ದು ತಪ್ಪು, ಆದರೆ ಅವರನ್ನು 5 ದಿನಗಳ ಕಾಲ ಅಮಾನತು ಮಾಡುವಷ್ಟು ಕಠಿಣ ಶಿಕ್ಷೆ ನೀಡಬಾರದಿತ್ತು. ಈ ಕುರಿತು ನಾಳೆ ಸದನದಲ್ಲಿ ಮತ್ತೆ ಪ್ರಸ್ತಾಪಿಸುತ್ತೇನೆ ಮತ್ತು ನಾಳೆ ಕಾಂಗ್ರೆಸ್ ಪಕ್ಷದವರು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.