ನವದೆಹಲಿ: ಕೇಂದ್ರ ಸರ್ಕಾರದ ಎರಡು ವರ್ಷಗಳ ಸಾಧನೆಗಳನ್ನು ಬಿಂಬಿಸುವ ‘ಝರಾ ಮುಸ್ಕುರಾದೋ’ ಕಾರ್ಯಕ್ರಮವು ದೂರದರ್ಶನದಲ್ಲಿ ಶನಿವಾರ ನೇರಪ್ರಸಾರವಾಗಲಿದೆ.
ಈ ಕಾರ್ಯಕ್ರಮ ದೆಹಲಿಯ ಇಂಡಿಯಾ ಗೇಟ್ನಿಂದ ಸಂಜೆ 5 ಗಂಟೆಯಿಂದ ನೇರ ಪ್ರಸಾರವಾಗಲಿದೆ. ಬಿಜೆಪಿಯ ಕ್ರಿಯೇಟಿವ್ ಹೆಡ್ ಹಾಗೂ ಸೆನ್ಸಾರ್ ಮಂಡಳಿ ಸದಸ್ಯೆ ವಾಣಿ ತ್ರಿಪಾಠಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಿದ್ದಾರೆ. ದೂರದರ್ಶನದ ಮಾಜಿ ನಿರೂಪಕ ರೋಶನ್ ಅಬ್ಬಾಸ್ ಕಾರ್ಯಕ್ರಮ ನಿರ್ಮಿಸಿದ್ದಾರೆ. ಎನ್ಕಂಪಾಸ್ ಇವೆಂಟ್ ನಿರ್ವಹಣೆ ಕಂಪೆನಿ ಸಹಾಯದಿಂದ ಕಾರ್ಯಕ್ರಮ ತಯಾರಿಸಲಾಗಿದೆ.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದು, ಇತರ ಹಿರಿಯ ಸಂಪುಟ ಸಚಿವರು ಸಭೆ ನಡೆಸಲಿದ್ದು, ಎರಡು ವರ್ಷಗಳಲ್ಲಿ ತಮ್ಮ ವಿಭಾಗಗಳಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಲಿದ್ದಾರೆ.
ಇಂಡಿಯಾ ಗೇಟ್ ಬಳಿ ಪ್ರೊಡಕ್ಷನ್ ಕಂಟ್ರೋಲ್ ರೂಂ (ಪಿಸಿಆರ್)ನ್ನು ಈಗಾಗಲೇ ಸ್ಥಾಪಿಸಲಾಗಿದ್ದು, ಖಾಸಗಿ ಮಾಧ್ಯಮಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕೇಂದ್ರ ಸಚಿವರು, ಬಾಲಿವುಡ್ನ ರಾಯಭಾರಿಗಳಿಗೆ ಕಾರ್ಯಕ್ರಮ ಪೂರ್ವ ತಯಾರಿ ಮಾಡಲಾಗಿದೆ.
ಬಾಲಿವುಡ್ನ ಖ್ಯಾತ ತಾರೆಯರಾದ ವಿದ್ಯಾ ಬಾಲನ್, ಅಮಿತಾಭ್ ಬಚ್ಚನ್ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾ ಬಾಲನ್ ಅವರು ಸ್ವಚ್ಛ ಭಾರತ್ ಅಭಿಯಾನದ ಕುರಿತು ಮಾತನಾಡಲಿದ್ದು, ಅವರು ಈಗಾಗಲೇ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಚಿವಾಲದ ಜೊತೆ ಸ್ವಚ್ಛ ಭಾರತದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಅನಿಲ್ ಕಪೂರ್ ಅವರು ದೇಶದ ಯುವ ಶಕ್ತಿಯ ಬಗ್ಗೆ ಮಾತನಾಡಲಿದ್ದು, ರವೀನಾ ಟಂಡನ್ ಅವರು ಮಹಿಳೆಯರ ಹಕ್ಕು ಮತ್ತು ಅಭಿವೃದ್ಧಿ ಹಾಗೂ ಜುಹಿ ಚಾವ್ಲಾ ಅವರು ಮೂಲಸೌಕರ್ಯದ ಕುರಿತು ಮಾತನಾಡಲಿದ್ದಾರೆ.
ಅಮಿತಾಭ್ ಬಚ್ಚನ್ ಅವರು ಬೇಟಿ ಬಚಾವೋ- ಬೇಟಿ ಪಢಾವೋ ಯೋಜನೆ ಕುರಿತುಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ನಟ ಮಾಧವನ್ ಅವರು ಇತರ ದೂರದರ್ಶನ ನಿರೂಪಕರೊಂದಿಗೆ ಕಾರ್ಯಕ್ರಮವನ್ನು ನಿರೂಪಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.