ಸಹರಣ್ಪುರ: ಎನ್ಡಿಎ ಸರ್ಕಾರದ ಎರಡು ವರ್ಷದ ಆಡಳಿತದಿಂದಾಗಿ ದೇಶದ ಜನತೆಯ ಅಸಹಾಯಕತೆ ಭರವಸೆಯಾಗಿ ಪರಿವರ್ತನೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ತಮ್ಮ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನಲೆಯಲ್ಲಿ ಗುರುವಾರ ಉತ್ತರಪ್ರದೇಶದ ಸಹರಣ್ಪುರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ 125 ಕೋಟಿ ಜನತೆಯ ನಿರಂತರ ಸೇವೆ ಮಾಡುವುದಾಗಿ ತಿಳಿಸಿದರು.
ಎರಡು ವರ್ಷಗಳ ನನ್ನ ಸರ್ಕಾರದ ಕಾರ್ಯಗಳ ಬಗ್ಗೆ ಲೆಕ್ಕ ನೀಡಲು ನಾನು ಇಲ್ಲಿಗೆ ಬಂದಿದ್ದೇನೆ, ಎರಡು ವರ್ಷಗಳ ಹಿಂದೆ ಇದೇ ದಿನ ನಾವು ಪ್ರಮಾಣವಚನ ಸ್ವೀಕಾರ ಮಾಡಿದ್ದೆವು, ನಾನು ಪ್ರಧಾನ ಸೇವಕ ಎಂದು ಈ ಹಿಂದೆಯೇ ಹೇಳಿದ್ದೇನೆ, ಅದರಂತೆ ದೇಶದ ಜನರ ಸೇವೆಯನ್ನು ಶಕ್ತಿಮೀರಿ ಮಾಡುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಸರ್ಕಾರ ಬರುತ್ತದೆ, ಹೋಗುತ್ತದೆ. ಚುನಾವಣೆಗಳು ನಡೆಯುತ್ತವೆ. ಆದರೆ ಸರ್ಕಾರ ಜನರ ಸೇವೆಗಾಗಿ ರಚನೆಯಾಗುತ್ತದೆ. ಎರಡು ವರ್ಷದಲ್ಲಿ ಜನ ನಮ್ಮ ಕಾರ್ಯವನ್ನು ನೋಡಿದ್ದಾರೆ. ನಮ್ಮ ಸರ್ಕಾರ ದೇಶದ ಬಡವರಿಗಾಗಿ ಇದೆ ಎಂದರು.
ಪ್ರತಿಪಕ್ಷಗಳಿಗೆ ಟಾಂಗ್ ನೀಡಿದ ಅವರು, ದೇಶ ಬದಲಾಗುತ್ತಿದೆ ಆದರೆ ಕೆಲ ಜನರ ಮನಸ್ಥಿತಿ ಮಾತ್ರ ಬದಲಾಗುತ್ತಿಲ್ಲ ಎಂದರು.
ನಾವು ಶಾಲೆ, ರಸ್ತೆ, ಶೌಚಾಲಯ ನಿರ್ಮಾಣಕ್ಕೆ, ಬಡವರ ಬದುಕು ಬದಲಾಯಿಸಲು ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಎರಡು ವರ್ಷಗಳ ಹಿಂದೆ ಭ್ರಷ್ಟಾಚಾರ ಉತ್ತುಂಗದಲ್ಲಿತ್ತು, ಆದರೀಗ ಅದರ ಪ್ರಮಾಣ ತಗ್ಗಿದೆ. ನನ್ನ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪವಿಲ್ಲ. ಹಿಂದಿನ ಸರ್ಕಾರ ದೇಶದ ಸಂಪತ್ತನ್ನು ಲೂಟಿ ಮಾಡಿತ್ತು ಎಂದಿದ್ದಾರೆ.
ಮುಂದೆಯೂ ಉತ್ತಮ ರೀತಿಯ ಆಡಳಿತ ನೀಡಿ ಜನತೆಯ ಸೇವೆ ಮಾಡುವ ಭರವಸೆಯನ್ನು ಅವರು ಜನರಿಗೆ ನೀಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.