ಪಾಟ್ನಾ : ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯೊಳಗೆ ಅಡುಗೆ, ಹೋಮ-ಹವನಗಳನ್ನು ಬಿಹಾರದಲ್ಲಿ ಮಾಡುವಂತಿಲ್ಲ. ಒಂದೊಮ್ಮೆ ಮಾಡಿದರೆ 2 ವರ್ಷ ಜೈಲೇ ಗತಿ!
ಇಂತಹದೊಂದು ವಿಲಕ್ಷಣ ಆದೇಶವನ್ನು ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಬಿಹಾರದಲ್ಲಿ ಹೊರಡಿಸಿದೆ. ಬಿಸಿಲ ಧಗೆ ಹೆಚ್ಚಿದ್ದು, ಒಂದೊಮ್ಮೆ ಗಾಳಿ ಬೀಸಿದರೆ ಬೆಂಕಿ ಕಿಡಿಗಳು ಗಾಳಿಯಲ್ಲಿ ಹಾರಿ ಹತ್ತಿರವಿರುವ ಗುಡಿಸಲುಗಳಿಗೆ ತಾಗಿ ಅಗ್ನಿ ಅವಘಡಗಳು ಹೆಚ್ಚುತ್ತವೆ ಎನ್ನುವ ಕಾರಣಕ್ಕೆ ಈ ವಿಚಿತ್ರ ಆದೇಶವನ್ನು ಹೊರಡಿಸಿದ್ದಾರೆ.
ಕೆಲ ದಿನಗಳ ಹಿಂದೆ ಬೇಗುಸರಾಯಿ ಗ್ರಾಮದಲ್ಲಿ 300 ಗುಡಿಸಲು ಸುಟ್ಟು ಭಸ್ಮವಾಗಿದ್ದವು. ಈ ಘಟನೆಯ ನಂತರ ಅಗ್ನಿ ಅವಘಡಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಬಿಹಾರದ ಹಲವು ಜಿಲ್ಲೆಗಳಲ್ಲಿ ಈ ಆದೇಶವನ್ನು ಜಾರಿಗೊಳಿಸುವಂತೆ ನಿತೀಶ್ ಕುಮಾರ್ ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ. ನೆಲಕ್ಕೆ ಬಿದ್ದಿರುವ ವಿದ್ಯುತ್ ತಂತಿಗಳನ್ನು ಕೂಡಲೇ ದುರಸ್ತಿಗೊಳಿಸಬೇಕೆಂದು ವಿದ್ಯುತ್ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ಅಗ್ನಿ ಅವಘಡಗಳಿಗೆ ತುತ್ತಾಗಿರುವವರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಹಾಗೂ ಹೆಚ್ಚಿನ ಅಗ್ನಿಶಾಮಕಗಳನ್ನು ಖರೀದಿಸಿ ಸೇವೆ ಮಾಡುವಂತೆ ನಿತೀಶ್ ಕುಮಾರ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಆದೇಶದ ಪ್ರಕಾರ ಯಾರೂ ಕೂಡಾ ಬೆಳಗ್ಗೆ 9 ರಿಂದ ಸಂಜೆ 6 ರ ವರೆಗೆ ಅಡುಗೆ, ಹೋಮ ಹವನ ಮಾಡಕೂಡದು. ಏನಿದ್ದರೂ ಅವೆಲ್ಲವನ್ನೂ 9 ಗಂಟೆಯ ಒಳಗೇ ಮುಗಿಸಬೇಕು. ಸೌದೆ ಒಲೆಯಿಂದ ಅಡುಗೆ ಮಾಡುವಂತಿಲ್ಲ. ನಿಯಮವನ್ನು ಉಲ್ಲಂಘಿಸಿದರೆ 2 ವರ್ಷ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ.
ಅಗ್ನಿ ಅವಘಡಗಳಿಗೆ ನಿಖರವಾದ ಕಾರಣಗಳನ್ನು ತಿಳಿದುಕೊಳ್ಳುವ ಕುರಿತು ಸಮೀಕ್ಷೆಯನ್ನು ನಡೆಸಲಾಗಿದ್ದು, ಗಾಳಿ ಬೀಸಿದಾಗ ಬೆಂಕಿಯ ಕಿಡಿಗಳು ಹಾರಿ ಹೋಗಿ ಗುಡಿಸಲಿಗೆ ತಾಗಿ ಅಗ್ನಿ ಅವಘಡಗಳು ಹೆಚ್ಚುತ್ತಿವೆ ಎನ್ನಲಾಗಿದೆ.
ದೇಶಾದ್ಯಂತ ಬಿಸಿಲ ಧಗೆ ಹೆಚ್ಚುತ್ತಿದ್ದು ಬಿಸಿಲಿಗೆ ಸುಮಾರು 100 ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ತೆಲಂಗಾಣ, ಆಂಧ್ರಪ್ರದೇಶ ಮತ್ತು ಓಡಿಶಾದಲ್ಲಿ ಅತಿ ಹೆಚ್ಚು ಬಿಸಿಲಿನ ಉಷ್ಣಾಂಶ ದಾಖಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.