ಮಂಗಳೂರು : ಶಿಕ್ಷಣವು ಕೆಲಸ ಕೇಂದ್ರಿತವಾಗಿರಬೇಕು ಹಾಗೂ ಪ್ರತಿಯೊಬ್ಬನೂ ಕೆಲಸ ಕೇಂದ್ರಿತ ಯೋಜನೆಗಳ ಬಗ್ಗೆ ತಿಳಿದುಕೊಳ್ಳುವುದು ಇಂದಿನ ಅಗತ್ಯ ಎಂದು ಎ.ಜೆ. ಉದ್ಯಮ ಆಡಳಿತ ಸಂಸ್ಥೆಯ ನಿರ್ದೇಶಕರಾದ ಪ್ರೊ. ಜಯಪ್ರಕಾಶ್ ರಾವ್ ಹೇಳಿದರು.
ಅವರು ಇತ್ತೀಚೆಗೆ ಬೆಸೆಂಟ್ ಸಂಧ್ಯಾ ಕಾಲೇಜಿನಲ್ಲಿ ನಡೆದ ಕೆಲಸ ಆಧಾರಿತ ಶಿಕ್ಷಣ ಎಂಬ ಒಂದು ದಿನದ ಯು.ಜಿ.ಸಿ. ಪ್ರಾಯೋಜಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಾ, ಶಿಕ್ಷಣದ ಜೊತೆಗೆ ಕೆಲಸ ಕೇಂದ್ರಿತ ಯೋಜನೆಗಳ ಮಹತ್ವವನ್ನು ವಿವರಿಸಿದರು. ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಕೈಗಾರಿಕೆಗಳ ಅವಶ್ಯಕತೆಗಳಿಗೆ ತಕ್ಕಂತೆ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಙಾನವನ್ನು ನೀಡಬೇಕಾಗುತ್ತದೆ. ಕೌಶಲ್ಯಾಧಾರಿತ ಯೋಜನೆಗಳ ತಯಾರಿ ಅತೀ ಮುಖ್ಯವಾಗಿರುತ್ತದೆ.
ಆಧುನಿಕ ತಂತ್ರಜ್ಙಾನದ ಕ್ರಾಂತಿಯಿಂದಾಗಿ ಇಂದಿನ ಯುವಜನತೆಯು ಹೆಚ್ಚಿನ ಕೌಶಲ್ಯಭರಿತ ಜ್ಙಾನವನ್ನು ಪಡೆಯಲು ಸಹಕಾರಿಯಾಗಿದೆ ಎಂದರಲ್ಲದೆ ಸಾಂಧರ್ಭಿಕವಾದ ಕಾರ್ಯಾಗಾರವನ್ನು ಆಯೋಜಿಸಿದ ಸಂಧ್ಯಾ ಕಾಲೇಜನ್ನು ಅಭಿನಂದಿಸಿದರು.
ಕಾರ್ಯಾಗಾರದಲ್ಲಿ ಡಾ. ಅಂಜಲಿ ಗಣೇಶ್, ಕುಮಾರಿ ಸುಮಿತ ಆಚಾರ್, ಶ್ರೀ ಸೂರಜ್ ಫ್ರಾನ್ಸಿಸ್ ನೊರೋನ್ಹ ಮತ್ತು ಶ್ರೀ ಜೀವನ್ ಶೆಟ್ಟಿಯವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ. ಕಾರ್ಮೆಲಿಟ ಗೋವಿಯಸ್ರವರು ಅತಿಥಿಗಳನ್ನು ಸ್ವಾಗತಿಸಿದರು ಹಾಗೂ ಕಾರ್ಯಾಗಾರವನ್ನು ಆಯೋಜಿಸಿದ ಉದ್ದೇಶಗಳನ್ನು ವಿವರಿಸಿದರು. ಕಾರ್ಯಾಗಾರದ ಸಂಯೋಜಕರಾದ ಪ್ರೊ. ಗೋಪಾಲ ರೆಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಾಣಿಜ್ಯ ನಿಕಾಯದ ಮುಖ್ಯಸ್ಥರಾದ ಪ್ರೊ. ಈಶ್ವರ ಪೂಜಾರಿ, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಬೆಸೆಂಟ್ ಸಂಧ್ಯಾ ಕಾಲೇಜಿನ ಹಾಗೂ ಇತರ ಕಾಲೇಜುಗಳ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಾಗಾರದ ಪ್ರಯೋಜನ ಪಡೆದರು. ಡಾ ವಾಸಪ್ಪ ಗೌಡ ಧನ್ಯವಾದ ಸಮರ್ಪಿಸಿದರು, ಕುಮಾರಿ ಪೂಜಾ ಕಾರ್ಯಕ್ರಮವನ್ನು ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.