ಮಂಗಳೂರು : ಇಂದಿನ ತಾಂತ್ರಿಕ ಯುಗದಲ್ಲಿ ಯುವಜನರು ಮತ್ತು ವಿದ್ಯಾರ್ಥಿಗಳು ದೃಶ್ಯ ಮಾಧ್ಯಮಗಳತ್ತ ಆಕರ್ಷಿತರಾಗಿದ್ದು, ರಂಗಭೂಮಿಯತ್ತ ಗಮನ ಹರಿಸುವುದು ಕಡಿಮೆ ಯಾಗುತ್ತಿರು ವುದು ಆತಂಕಕಾರಿ ಎಂದು ಪ್ರಶಸ್ತಿ ಪುರಸ್ಕೃತ ಕೊಂಕಣಿ ಚಲನಚಿತ್ರದ ನಿರ್ದೇಶಕ ಕಾಸರಗೋಡು ಚಿನ್ನಾ ತಿಳಿಸಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಪ್ರಾಯೋಜ ಕತ್ವದಲ್ಲಿ ರಂಗಸ್ಪಂದನ (ರಿ) ಮಂಗಳೂರು ಇವರು ಪುರಭವನದಲ್ಲಿ ಹಮ್ಮಿ ಕೊಂಡಿರುವ 2 ದಿನದ ಸಾಂಸ್ಕೃತಿಕ ರಂಗಹಬ್ಬದಲ್ಲಿ ಅತಿಥಿಯಾಗಿ ಮಾತಾಡುತ್ತಿದ್ದರು. `80 ನೇ ದಶಕದ ನಂತರ ರಂಗಭೂಮಿಯ ಚಾಲನೆ ಕಡಿಮೆಯಾಗುವುದಕ್ಕೆ ಕಾರಣ ಹುಡುಕುವುದಕ್ಕಿಂತ ಮಕ್ಕಳಲ್ಲಿ ರಂಗಭೂಮಿಯ ಬಗ್ಗೆ ಆಸಕ್ತಿ ಹುಟ್ಟಿಸುವ ರಂಗಶಿಬಿರ, ನಾಟಕಸ್ಪರ್ಧೆಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ಏರ್ಪಡಿಸುವುದು ಒಳಿತು ಎಂದರು. ಅಂತರ್ಕಾಲೇಜು ನಾಟಕ ಸ್ಪರ್ಧೆ ಏರ್ಪಡಿಸುವಲ್ಲಿ ಜಿಲ್ಲಾಡಳಿತ ಜೊತೆ ವಿವಿಧ ಭಾಷಾ ಅಕಾಡೆಮಿಗಳು ಹೆಜ್ಜೆ ಇರಿಸಬೇಕು ಜೊತೆಗೆ ಹವ್ಯಾಸಿ ಟಿಕೇಟು ರಹಿತ ನಾಟಕಗಳಿಗೆ ಮಂಗಳೂರು ಪುರಭವನ ರೂಪಾಯಿ 5000 ಕ್ಕೆ ಲಭ್ಯವಾಗುವಂತಾಗ ಬೇಕೆಂದರು.
ಸಾಂಸ್ಕೃತಿಕ ರಂಗಹಬ್ಬವನ್ನು ಜ್ಯೋತಿ ಪ್ರಜ್ವಲಿಸಿ ಚಾಲನೆ ನೀಡಿದ ಹಿರಿಯ ರಂಗಕರ್ಮಿ ಡಾ.ಪಿ.ಸಂಜೀವ ದಂಡೆಕೇರಿ ಅವರು ಸಾಂಸ್ಕೃತಿಕ ಉತ್ಸವಗಳಿಗೆ ಪ್ರೇಕ್ಷಕರು ಹೆಚ್ಚು ಬರುವ ಮೂಲಕ ರಂಗಭೂಮಿಯನ್ನು ಉಳಿಸಿ ಬೆಳೆಸಬೇಕು. ಬಹುಭಾಷಾ ಪ್ರದೇಶ ವಾಗಿರುವ ಮಂಗಳೂರಲ್ಲಿ ತುಳುನಾಟಕಗಳು ಬಿಟ್ಟರೆ ಉಳಿದ ಭಾಷಾ ನಾಟಕಗಳು ವಿರಳ ವಾಗುವುದಕ್ಕೆ ತನ್ನ ಬೇಸರವನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಪಣಂಬೂರು ಬೀಚ್ ಅಭಿವೃದ್ಧಿ ಯೋಜನಾ ಕಾರ್ಯನಿರ್ವಾಹಣಾಧಿಕಾರಿ ಯತೀಶ್ ಬೈಕಂಪಾಡಿ ತುಳು ಕೂಟ(ರಿ) ಕುಡ್ಲದ ಅಧ್ಯಕ್ಷ ಬಿ.ದಾಮೋದರ ನಿಸರ್ಗ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಈ ಬಾರಿಯ ಗೌರವ ಪುರಸ್ಕೃತರಾದ ಕಾಸರಗೋಡು ಚಿನ್ನಾರವರನ್ನು ಅಭಿನಂದಿಸಲಾಯಿತು. ರಂಗಸ್ಪಂದನ ಸಂಚಾಲಕ ವಿ.ಜಿ.ಪಾಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.