ಮಂಗಳೂರು : ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜಪಟ್ಟಾಭಿಷೇಕ ಮಹೋತ್ಸವದ ಹಿನ್ನೆಲೆಯಲ್ಲಿ ಮಠ ಪರಿಸರದ ಶ್ರೀ ಸಿದ್ಧಗುರು ಸುಂದರನಾಥ ವೇದಿಕೆಯಲ್ಲಿ ಫೆ. ೨೬ರಿಂದ ನಡೆಯುತ್ತಿರುವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಕಳೆದ ಸಂಜೆ ಸಂಪನ್ನಗೊಂಡಿದೆ.
ಸೋಮವಾರ ಸಂಜೆ ನಡೆದ ಆರನೇ ದಿನದ ಧಾರ್ಮಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಜೋಗಿ ಸಮಾಜದ ಮುಂದಾಳು, ಮಂಗಳೂರು ಮಹಾನಗರ ಪಾಲಿಕೆ ತೆರಿಕೆ ಮತ್ತು ಹಣಕಾಸು ಅಫೀಲು ಸ್ಥಾಯಿ ಸಮಿತಿ ಅಧ್ಯಕ್ಷ ಹರಿನಾಥ್ ಕೆ., ಜೋಗಿ ಸಮುದಾಯದ ಹಿನ್ನೆಲೆ, ಹಿರಿಮೆಯನ್ನು ವಿವರಿಸಿ ಹಿಂದೆ ಜೋಗಿ ಮಠದ ಅಧೀನದಲ್ಲಿ ಸುಮಾರು 600 ಕ್ಕೂ ಅಧಿಕ ಎಕರೆ ಭೂಮಿ ಇತ್ತು. ಕಾಲ ಕ್ರಮೇಣ ಈ ಭೂಮಿ ಸ್ವಾಧೀನಗೊಂಡು ಈಗ ಕೆಲವೇ ಕೆಲವು ಎಕರೆ ಭೂಮಿ ಇದೆ. ನಮಗೆ ಇಲ್ಲಿಯ ಒಂದು ಮರಳಿನ ಆಸೆಯೂ ಇಲ್ಲ. ಮುಂದಿನ ದಿನಗಳಲ್ಲಿ ಜೋಗಿ ಮಠಕ್ಕೆ ಸೇರಿದ ಒಂದೇ ಒಂದು ಅಡಿ ಭೂಮಿಯನ್ನು ಸ್ವಾಧೀನ ಪಡಿಸಲು ಬಿಡುವುದಿಲ್ಲ. ಯಾವುದೇ ಹೋರಾಟ ಮಾಡಿಯಾದರೂ ಭೂಮಿ ಉಳಿಸುತ್ತೇವೆ ಎಂದರು.
ಜೋಗಿ ಸಮಾಜವು ಸಮಾಜದ ಎಲ್ಲರೊಂದಿಗೆ ಒಂದಾಗಿ ಬದುಕುತ್ತಿದೆ. ಹಿಂದೆ ಆರ್ಥಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದ ಜೋಗಿ ಸಮಾಜ ಇಂದು ಹಂತ ಹಂತವಾಗಿ ಮೇಲೇರುತ್ತದೆ. ದೇಶ ವಿದೇಶ ಸೇರಿದಂತೆ ಸುಮಾರು 4 ಲಕ್ಷ ಮಂದಿ ಜೋಗಿ ಸಮುದಾಯದವರಿದ್ದಾರೆ. ಜೋಗಿ ಬಾಂಧವರಿಗೆ ಕೀಳರಿಮೆ ಬೇಡ. ಸ್ವಾಭಿಮಾನಿಯಾಗಿ ಬದುಕಿ ಎಂದು ಕರೆ ನೀಡಿದರು.
ಇನ್ನೊಬ್ಬ ಮುಖ್ಯ ಅತಿಥಿ ಮಾಜಿ ಮೇಯರ್ ಮಹಾಬಲ ಮಾರ್ಲ, ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಇಂದಿನ ಅವಶ್ಯಕತೆ. ನಾನು ಈ ಮಠದ ಒಬ್ಬ ಭಕ್ತ. ಇದೇ ಪರಿಸರದವ. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಂದ ಸಮಾಜ ಒಗ್ಗೂಡಲು ಸಾಧ್ಯ ಮಾತ್ರವಲ್ಲ ಶಾಂತಿ, ಸೌಹಾರ್ದತೆಗೂ ಪೂರಕ ಎಂದರು.
ಮತ್ತೊಬ್ಬ ಮುಖ್ಯ ಅತಿಥಿ ಮಂಗಳೂರು ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ ಸುಧೀರ್ ಶೆಟ್ಟಿ ಕಣ್ಣೂರು, ಸನಾತನ ಹಿಂದು ಧರ್ಮ ಹಾಗೂ ಸೈನಿಕರಿಂದ ಈ ದೇಶದೊಳಗೆ ಶಾಂತಿ ನೆಲೆಸಿದೆ. ಸಂಘರ್ಷದ ಬದಲು ಪ್ರೀತಿಯ ವಾತಾವರಣ ಬೇಕು. ಜೋಗಿ ಮಠಕ್ಕೆ ಸೇರಿದ ಭೂಮಿಯನ್ನು ಸ್ವಾಧೀನ ಮಾಡಬಾರದು. ಭೂಮಿ ಉಳಿಸುವ ಹೋರಾಟದಲ್ಲಿ ನಾನು ಕೈ ಜೋಡಿಸುತ್ತೇನೆ ಎಂದರು.
ಅಧ್ಯಕ್ಷತೆವಹಿಸಿದ್ದ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಟ್ರಸ್ಟಿ ಪಿ. ರಮಾನಾಥ ಹೆಗ್ಡೆ ಶುಭ ಕೋರಿದರು. ಕಾರ್ಪೊರೇಟರ್ ರಾಜೇಶ್ ಕೆ., ಶ್ರೀ ಕ್ಷೇತ್ರ ಕದ್ರಿಯ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಮಾತನಾಡಿದರು. ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಕಾರ್ಯದರ್ಶಿ ಸತೀಶ್ ಮಾಲೆಮಾರ್, ಜೋಗಿ ಸಮಾಜದ ಕೃಷ್ಣಾನಂದ ಸೂರ್ಯ, ಜೋಗಿ ಮಹಿಳಾ ವೇದಿಕೆ ಪ್ರಧಾನ ಕಾರ್ಯದರ್ಶಿ ಪ್ರಿಯಾ ಸುನೀಲ್ ಜೋಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗೋರಕ್ಷನಾಥ ಯುವ ವೇದಿಕೆಯ ಸುಮನ್, ಮಹೇಶ್ರವನ್ನು ಗೌರವಿಸಲಾಯಿತು. ಹರೀಶ್ ಜೋಗಿ ಶಕ್ತಿನಗರ ಸ್ವಾಗತಿಸಿದರು, ಕದಳೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜಪಟ್ಟಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ ವಂದಿಸಿದರು. ಬಂಟಕಲ್ಲು ಪ್ರಭಾಕರ ಜೋಗಿ ಕಾರ್ಯಕ್ರಮ ನಿರ್ವಹಿಸಿದರು.ಬಳಿಕ ಹೊಸನಗರ ಶ್ರೀ ರಾಮಚಂದ್ರ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ `ದಕ್ಷಯಜ್ಞ – ಗಿರಿಜಾ ಕಲ್ಯಾಣ’ ಪುಣ್ಯ ಕಥಾ ಬಯಲಾಟ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.