ಮಂಗಳೂರು : ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರ ವಿರುದ್ಧ ಶಿಸ್ತು ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ಇಂದು ನಗರದ ಪೊಲೀಸ್ ಆಯುಕ್ತರ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು.
ಠಾಣೆಯ ಅಂದಿನ ನಿರೀಕ್ಷಕರಾಗಿದ್ದ ಪ್ರಮೋದ್ ಕುಮಾರ್ರವರು ನ್ಯಾಯಾಲಯದ ಆದೇಶದಂತೆ ಆರೋಪಿಯೊಬ್ಬನನ್ನು ಬಂಧಿಸಿದ್ದಕ್ಕಾಗಿ ಅವರ ಮೇಲೆ ರಾಜಕೀಯ ಒತ್ತಡಗಳು ಬಂದಾಗ ಅದನ್ನು ಲೆಕ್ಕಿಸದೆ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪರಿಣಾಮವಾಗಿ ರಾಜಕೀಯ ಪ್ರಭಾವಕ್ಕೊಳಗಾಗಿ ಅವರನ್ನು ಮೌಖಿಕ ಆದೇಶದ ಮೇರೆಗೆ ರಜೆಯ ಮೇಲೆ ಕಳುಹಿಸುವ ನಿರ್ಧಾರವನ್ನು ಮೇಲಾಧಿಕಾರಿಗಳು ಕೈಗೊಂಡಾಗ ಠಾಣೆಯ ಸಿಬಂದಿಗಳು ನಿರೀಕ್ಷಕರ ಪರವಾಗಿ ಬೆಂಬಲಕ್ಕೆ ನಿಂತರು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಇಲಾಖೆಯು ಈ ಸಿಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಇಲಾಖೆಗೆ ವರದಿಯನ್ನು ಕಳುಹಿಸಿಕೊಟ್ಟಿರುತ್ತದೆ. ಇದನ್ನು ತಿಳಿದ ಮಂಗಳೂರಿನ ಪ್ರಜ್ಞಾವಂತ ನಾಗರೀಕರು ಇಲಾಖೆಯ ಈ ವರ್ತನೆಗೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿ ವರದಿಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದರು.ಇಂದಿನ ಪ್ರತಿಭಟನೆಯು ಮಂಗಳೂರಿನ ಸಾಮಾಜಿಕ ಕಾರ್ಯಕರ್ತರ ನೇತೃತ್ವದಲ್ಲಿ ನಡೆಯಿತು.
ಸಾಮಾಜಿಕ ಮುಂದಾಳು ಫ್ರಾಂಕ್ಲಿನ್ ಮೊಂತೆರೋ ಮಾತನಾಡಿ, ಪೊಲೀಸರಿಗೆ ಆಗಿರುವ ಈ ಅನ್ಯಾಯವನ್ನು ಮಂಗಳೂರಿನ ಸಮಸ್ತ ಜನತೆಯು ಒಕ್ಕೊರಲಿನಿಂದ ಖಂಡಿಸುತ್ತದೆ. ಯಾವ ರೀತಿಯಲ್ಲಿ ನಮ್ಮ ದೇಶದ ಗಡಿ ಭಾಗದಲ್ಲಿ ಸೈನಿಕರು ಈ ದೇಶವನ್ನು ಕಾಯುತ್ತಾರೋ ಅದೇ ರೀತಿ ದೇಶದ ಒಳಗಡೆ ಪೊಲೀಸರು ಕೂಡಾ ಇದೇ ರೀತಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಆ ಸಂದರ್ಭದಲ್ಲಿ ಅವರ ಮೇಲೆ ನಿರಂತರವಾಗಿ ಅವರ ಕರ್ತವ್ಯದ ಅವಧಿಯಲ್ಲಿ ಮಾನಸಿಕ ಒತ್ತಡಗಳು ಬಂದಾಗ ಅವರ ಕರ್ತವ್ಯ ನಿರ್ವಹಣೆಗೆ ಬಹಳಷ್ಟು ಅಡ್ಡಿಯಾಗುತ್ತಿದೆ.
ತಮ್ಮ ಮೇಲಾಧಿಕಾರಿ ದಕ್ಷತೆಯಿಂದ ದುಡಿಯುವಾಗ ಅವರಿಗೆ ಅನ್ಯಾಯವಾದಾಗ ಅವರಿಗೆ ನೈತಿಕ ಬೆಂಬಲ ಸೂಚಿಸುವುದು ಮಾನವ ಸಹಜ ಗುಣ. ಆದರಿಂದ ಸಮಾಜದ ಮೇಲೆ ದುಷ್ಪರಿಣಾಮ ಆಗುವಂತಹದು ಏನೂ ಇಲ್ಲ. ಆದ್ದರಿಂದ ಭ್ರಷ್ಟ ರಾಜಕೀಯ ವ್ಯವಸ್ಥೆಗೆ ನಿಯಂತ್ರಣ ತರಬೇಕಾದರೆ ಪೊಲೀಸರಲ್ಲಿ ನೈತಿಕತೆ ತುಂಬುವುದು ಅತೀ ಅವಶ್ಯ. ಆದ್ದರಿಂದ ಅವರ ಮೇಲೆ ಕೈಗೊಳ್ಳಲು ನಿರ್ಧರಿಸಿರುವ ಶಿಸ್ತು ಕ್ರಮವನ್ನು ಕೂಡಲೇ ಕೈ ಬಿಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.ಸಂದೀಪ್ ಪೂಜಾರಿ ಬೊಂದೇಲ್, ರಾಮ ಅಮೀನ್ ಪಚ್ಚನಾಡಿ, ಅಜಿತ್ ಶೆಟ್ಟಿ ಕಾವೂರು, ಹೆರಾಲ್ಡ್ ಮೊದಲಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.