ಮಂಗಳೂರು : ದೇಶಕ್ಕೆ ಗುರುಪೀಠವೇ ಶ್ರೇಷ್ಠವಾದುದು. ದೇಶದ ರಾಜಕಾರಣ ಹಳಿತಪ್ಪಿದಾಗ ಸರಿದಾರಿಗೆ ತರಲು ಗುರುಪರಂಪರೆ ಬೇಕು ಎಂದು ಸಂಸದ ನಳಿನ್ಕುಮಾರ್ ಕಟೀಲು ನುಡಿದರು.
ಕದಳೀ ಶ್ರೀಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವದಂಗವಾಗಿ ಜೋಗಿಮಠ ಪರಿಸರದ ಶ್ರೀಸಿದ್ಧಗುರು ಸುಂದರನಾಥ ವೇದಿಕೆಯಲ್ಲಿ ನಡೆದ ಐದನೇ ದಿನದ ಧಾರ್ಮಿಕ ಸಭೆಯಲ್ಲಿ ಅವರು `ನಾಥ ಸಂಭ್ರಮ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು.ಭಾರತ ಋಷಿ ಪರಂಪರೆಯ ದೇಶ. ಭಗವಂತನ ಅವತಾರದ ಭೂಮಿ. ಜಗತ್ತಿಗೆ ಆಧ್ಯಾತ್ಮದ ಕೊಡುಗೆ ನೀಡಿದೆ. ಭಾರತದ ಆತ್ಮವೇ ಆಧ್ಯಾತ್ಮ. ಇಡೀ ಹಿಂದು ಸಮಾಜವನ್ನು ಸಂರಕ್ಷಣೆ ಮಾಡುವವರು ಮಠಾಧಿಪತಿಗಳು, ಸಾಧುಸಂತರು. ನಾಥ ಪಂಥ ಶ್ರೇಷ್ಠ ಪಂಥ ಎಂದು ಅಭಿಪ್ರಾಯಪಟ್ಟರು.ಜೀವನದಲ್ಲಿ ಎಷ್ಟೇ ಉನ್ನತ ಸ್ಥಾನಮಾನಕ್ಕೆ ಏರಿದರೂ ಋಷಿ ಮುನಿಗಳ ಸಹವಾಸಕ್ಕಿಂತ ದೊರಕುವ ಶ್ರೇಷ್ಠತೆಗಿಂತ ಬೇರೊಂದಿಲ್ಲ. ಸೈನಿಕರು ದೇಶದ ರಕ್ಷಣೆ ಮಾಡಿದರೆ, ಸಂತರು ಸನಾನತ ಸಂಸ್ಕೃತಿಯ ರಕ್ಷಕರು ಎಂದರು.
ನಾಥ ಪರಂಪರೆ, ನಾಥ- ಜೋಗಿಮಠದ ನಂಟಿನ ಕುರಿತು ವಿವರಿಸಿದ ಝಂಡಿ ಸಮಿತಿ ಅಧ್ಯಕ್ಷ ಮಹಂತ ಶ್ರೀ ಸೂರಜ್ನಾಥ ಜೀ, ಭಾರತದ ಪರಂಪರೆಯಿಂದಲೇ ವಿಶ್ವಕ್ಕೆ ಒಳಿತಾಗುವುದು. ಭಾರತದ ಶ್ರೇಷ್ಠ ಪರಂಪರೆಯನ್ನು ಮುನ್ನಡೆಸಬೇಕು ಎಂದರು. ಶ್ರೀ ಯೋಗೇಶ್ವರದ ಮಠದ ಮಠಾಧಿಪತಿ ರಾಜಯೋಗಿ ಶ್ರೀ ಸಂಧ್ಯಾನಾಥ್ ಜೀ, ಮಂಗಳೂರಿನಲ್ಲಿ ಹುಟ್ಟಿದವರು ಪುಣ್ಯವಂತರು. ಪರ್ಯಾಯೋತ್ಸವದಂತಹ ಧಾರ್ಮಿಕ ಕಾರ್ಯಗಳ ಮುಖಾಂತರ ಸಮಾಜಕ್ಕೆ ಒಳಿತಾಗಲಿ ಎಂದರು.
ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಕ ಬ್ಯಾಂಕ್ ಆಡಳಿತ ನಿರ್ದೇಶಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಜಯರಾಮ ಭಟ್, ಪಾಲಿಕೆ ಸದಸ್ಯ ಡಿ.ಕೆ. ಅಶೋಕ್ಕುಮಾರ್, ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ಕುಮಾರ್ ಜೋಗಿ, ಪತ್ರಕರ್ತ ರಾಮಕೃಷ್ಣ ಆರ್., ಜೋಗಿ ಸಮಾಜದ ಪ್ರಮುಖ ವೈ.ಡಿ. ಮಧುಕರ್, ಭಂಡಾರಿ ಬಿಲ್ಡರ್ಸ್ನ ಲಕ್ಷ್ಮೀಶ ಭಂಡಾರಿ, ಉದ್ಯಮಿ ರತ್ನಾಕರ ಜೈನ್, ರಾಜಸ್ಥಾನಿ ಸಮಾಜದ ಭಗವಾನ್ ಸಿಂಗ್ ಉಪಸ್ಥಿತರಿದ್ದರು.
ಭಂಡಾರಿ ಬಿಲ್ಡರ್ಸ್ನ ಲಕ್ಷ್ಮೀಶ್ ಭಂಡಾರಿ ನಿರ್ಮಿಸಿಕೊಟ್ಟ ಶ್ರೀ ಮಠದ ನೂತನ ಮಹಾದ್ವಾರವನ್ನು ಮಹಂತ ಸೋಮನಾಥ್ಜೀ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ನಿರ್ಗಮನ ಮಠಾಧಿಪತಿ ಶ್ರೀ ರಾಜಯೋಗಿ ಶ್ರೀ ಸಂಧ್ಯಾನಾಥ್ ಜೀ, ಝುಂಡಿ ಸಮಿತಿ ಅಧ್ಯಕ್ಷ ಸೂರಜ್ನಾಥ್ ಜೀ,ಝಂಡಿ ಉಪಾಧ್ಯಕ್ಷ ಮಹಂತ ಶ್ರೀ ಕೃಷ್ಣಾನಾಥ್ ಜೀ, ಮಹಂತ ಸೋಮನಾಥ್ ಜೀ, ಮಹಂತ ಶ್ರೀ ಶಿವನಾಥ್ಜೀ, ಮಹಂತ ಶ್ರೀ ರವೀಂದ್ರನಾಥ ಜೀ, ಮಹಂತ ಡಾ. ಶ್ರೀಕೃಷ್ಣಾನಾಥ್ ಜೀ ಮಹಾರಾಷ್ಟ್ರ ಅವರನ್ನು ಗೌರವಿಸಲಾಯಿತು.
ಪಟ್ಟಾಭಿಷೇಕ ಮಹೋತ್ಸವ ಸಮಿತಿಯ ಎಚ್.ಕೆ.ಪುರುಷೋತ್ತಮ, ಕಿರಣ್ ಕುಮಾರ್ ಜೋಗಿ ಹಾಗೂ ದ್ವಾರನಿರ್ಮಿಸಿಕೊಟ್ಟ ಲಕ್ಷ್ಮೀಶ ಭಂಡಾರಿಯವರನ್ನು ಮತ್ತು ಮೋಹನ್ ಮರಕಡ, ಗೋಪಾಲ್, ಗಿರಿಧರ್, ವಾಸುದೇವ ಜೋಗಿಯವರನ್ನು ಸನ್ಮಾನಿಸಲಾಯಿತು.ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್.ಕೆ. ಪುರುಷೋತ್ತಮ ಸ್ವಾಗತಿಸಿದರು. ಹರೀಶ್ ಜೋಗಿ ಶಕ್ತಿನಗರ ಕಾರ್ಯಕ್ರಮ ನಿರ್ವಹಿಸಿದರು.ಬಳಿಕ ಸನಾತನ ನಾಟ್ಯಾಲಯದಿಂದ `ರಾಷ್ಟ್ರದೇವೋಭವ’ ಕಾರ್ಯಕ್ರಮ ನಡೆಯಿತು.
ರಂಗಮಂದಿರಕ್ಕೆ ಅನುದಾನ ಭರವಸೆ : ಸಂಸದ ನಳಿನ್ಕುಮಾರ್ ಕಟೀಲ್ ನೂತನ ರಂಗ ಮಂದಿರ ನಿರ್ಮಾಣಕ್ಕೆ ತನ್ನ ಸಂಸದರ ನಿಧಿಯಿಂದ 5 ಲಕ್ಷ ರೂ.ಗಳನ್ನು ತಕ್ಷಣ ಬಿಡುಗಡೆ ಮಾಡುವುದಾಗಿ ಘೋಷಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.