ಮಂಗಳೂರು : ಕವಿಗೆ ಮನುಷ್ಯರ ನಡುವೆ ಅನುಬಂಧವನ್ನು ಬೆಳೆಸುವ ಶಕ್ತಿಯಿದೆ. ಹಾಗಾಗಿ ಕವಿಗೆ ಗಡಿ ಎಂಬುದಿಲ್ಲ. ಭಾಷೆಯ ಮೇಲಿನ ಹಿಡಿತದಿಂದ ಎಲ್ಲರ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತಾನೆ ಎಂದು ಡಾ. ವಸಂತಕುಮಾರ ಪೆರ್ಲ ನುಡಿದರು. ಬಂಟ್ವಾಳದ ಎಸ್.ವಿ.ಎಸ್. ಕಾಲೇಜಿನ ಸಭಾಂಗಣದಲ್ಲಿ ಆಕಾಶವಾಣಿ ಮಂಗಳೂರು ಕೇಂದ್ರವು ಸಂತ ಆಗ್ನೆಸ್ ಕಾಲೇಜು ಹಾಗೂ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಲಾದ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ವಿದ್ಯಾರ್ಥಿಗಳ ಒಂದು ದಿನದ ಕವಿತಾ ಕಮ್ಮಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕವಿತಾ ಕಮ್ಮಟಗಳು ಯುವಜನರಲ್ಲಿ ಸೃಜನಶೀಲತೆಯನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ ಯುವಕರು ಕಲೆ, ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ. ಪಾಂಡುರಂಗ ನಾಯಕ ನುಡಿದರು.
ಮಂಗಳೂರಿನ ಸಂತ ಆಗ್ನೆಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಂಪೂರ್ಣಾನಂದ ಬಳ್ಕೂರು ಅವರು ಕವಿತೆಯ ವಸ್ತುವಿನ ಆಯ್ಕೆ ಮತ್ತು ನಿರ್ವಹಣೆ ಕುರಿತು ತಿಳಿಸಿದರು. ಬಂಟ್ವಾಳದ ಎಸ್.ವಿ.ಎಸ್. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನಾಗವೇಣಿ ಮಂಚಿ ಅವರು ಕವಿತೆಯ ಬಂಧ ಹಾಗೂ ತಾಂತ್ರಿಕ ಅಂಶಗಳ ಕುರಿತು ತಿಳಿಸಿದರು. ಕೊನೆಯ ಗೋಷ್ಠಿಯಲ್ಲಿ ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಡಾ. ಬಿ. ಎಂ. ಶರಭೇಂದ್ರ ಸ್ವಾಮಿ ಅವರು ಕವಿತಾ ರಚನೆಯ ವಿನ್ಯಾಸದ ಕುರಿತು ತಿಳಿಸಿದರು.
ಇಪ್ಪತ್ತು ಕಾಲೇಜಿನ ನಲವತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದ ಕವಿತಾ ಕಮ್ಮಟದಲ್ಲಿ ವಿದ್ಯಾರ್ಥಿಗಳಿಂದ ಕವಿತೆಯನ್ನು ಬರೆಸಲಾಯಿತು. ಮದ್ಯಾಹ್ನ ಏರ್ಪಡಿಸಲಾದ ಕವಿಗೋಷ್ಠಿಯಲ್ಲಿ ಆಯ್ದ ಹತ್ತು ವಿದ್ಯಾರ್ಥಿಗಳಿಂದ ಸ್ವರಚಿತ ಕವನವನ್ನು ವಾಚಿಸಿದರು.
ಸಾಂಸ್ಕೃತಿಕ ವಿಸ್ಮೃತಿಗೆ ಒಳಗಾಗ್ತಾ ಇರುವ ಇಂದಿನ ದಿನಮಾನದಲ್ಲಿ ಯುವ ತಲೆಮಾರನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಸೀಯತೆಗೆ ಒತ್ತುಕೊಟ್ಟು ಮತ್ತೆ ಜನಸಮುದಾಯದೆಡೆಗೆ ತೆರಳುವ ಪ್ರಯತ್ನ ಆಕಾಶವಾಣಿ, ಎಸ್.ವಿ.ಎಸ್. ಕಾಲೇಜು ಹಾಗೂ ಸಂತ ಅಗ್ನೇಸ್ ಕಾಲೇಜು ಮಾಡುತ್ತಿರುವದು ತುಂಬಾ ಸಂತಸವಾಗಿದೆ ಎಂದು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಮಂಗಳ ಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ ನುಡಿದರು. ಪ್ರೊ. ಎಂ. ಸುಪ್ರಿಯ ಎ.ಸಿ ಅವರು ಸ್ವಾಗತಿಸಿದರು. ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಕೆ. ಅಶೋಕ ವಂದನಾರ್ಪಣೆ ಮಾಡಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.