ಮಂಗಳೂರು : ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜಪಟ್ಟಾಭಿಷೇಕ ಮಹೋತ್ಸವ 2016ರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬುಧವಾರ ಸಂಜೆ ಚಾಲನೆ ದೊರೆತಿದೆ. ಜೋಗಿ ಮಠದ ಪರಿಸರದ ಶ್ರೀ ಸಿದ್ಧಗುರು ಸುಂದರನಾಥ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾನಿಧ್ಯ ವಹಿಸಿದ್ದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಅವರು, ಸಂತರು ಸಮಾಜವೆಂಬ ಕೆರೆಯಲ್ಲಿ ಮೀನುಗಳಿದ್ದಂತೆ. ಮೀನುಗಳಿಂದ ಕೆರೆ ಶುದ್ಧವಾಗುವಂತೆ ಸಂತರಿಂದ ಸಮಾಜ ಶುದ್ಧವಾಗುತ್ತದೆ. ಸಾಧು ಸಂತರು ಇರುವುದರಿಂದಲೇ ಭಾರತವಿಂದು ಸಮೃದ್ಧವಾಗಿದೆ. ಸಂತರು ಸಮಾಜವನ್ನು ಭಾವನಾತ್ಮಕವಾಗಿ ಬೆಸೆಯುವ ಕೆಲಸವನ್ನು ಮಾಡುತ್ತಾರೆ ಎಂದರು.
ಆಧ್ಯಾತ್ಮಿಕತೆ ಮನಸ್ಸಿನಿಂದ ಬರಬೇಕು. ಆಧ್ಯಾತ್ಮಿಕತೆಯಿಂದ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ನಮ್ಮಲ್ಲಿರುವ ಕ್ರಿಯಾಶೀಲತೆಯು ಉತ್ತಮ ಕೆಲಸಗಳಿಗೆ ಬಳಕೆಯಾದರೆ ಸಮಾಜಕ್ಕೆ ಒಳಿತಾಗುತ್ತದೆ. ಸಂಘಟನೆಯು ಸಮಾಜದ ಒಳಿತಿಗೆ ಬಳಕೆಯಾಗಬೇಕು ಎಂದು ಹೇಳಿದರು.ನಾಥ ಪಂಥಕ್ಕೂ ಒಡಿಯೂರು ಕ್ಷೇತ್ರಕ್ಕೂ ಇರುವ ಸಂಬಂಧವನ್ನು ಸ್ವಾಮೀಜಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರಾವಳಿ ಕಾಲೇಜು ಸಮೂಹದ ಅಧ್ಯಕ್ಷ ಎಸ್. ಗಣೇಶ್ ರಾವ್, ಗುರು ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿಯಾಗಿದ್ದು, ಸಮಾಜಕ್ಕೆ ದೀಪವಾಗಿ ಪ್ರತಿನಿಧಿಸುತ್ತದೆ ಎಂದರು.ಮುಖ್ಯ ಅತಿಥಿಯಾಗಿದ್ದ ಉದಯವಾಣಿ ಪತ್ರಿಕೆ ಸಹ ಉಪಾಧ್ಯಕ್ಷ ಕೆ. ಆನಂದ, ನಮ್ಮ ಧರ್ಮ, ಸಮಾಜ, ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು, ಈ ದಿಸೆಯಲ್ಲಿ ನಮ್ಮ ಯುವ ಪೀಳಿಗೆಯನ್ನು ಸಿದ್ಧಗೊಳಿಸಬೇಕೆಂದರು.
ಇನ್ನೊಬ್ಬ ಮುಖ್ಯ ಅತಿಥಿ ವಿಶ್ವ ಹಿಂದು ಪರಿಷತ್ ಕಾರ್ಯಾಧ್ಯಕ್ಷ ಜಿತೇಂದ್ರ ಎಸ್. ಕೊಟ್ಟಾರಿ, 1.50 ಲಕ್ಷಕ್ಕೂ ಅಧಿಕ ವರ್ಷದ ಇತಿಹಾಸ ಇರುವ ನಾಥ ಪಂಥ ಸಸನಾತನ ಹಿಂದು ಧರ್ಮದೊಂದಿಗೆ ಮಿಳಿತವಾಗಿದೆ. ಭಾರತದ ಆಧ್ಯಾತ್ಮಿಕತೆಯಿಂದ ಜಗತ್ತನ್ನು ಬೆಳಗುವ ಕೆಲಸವಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಗಾಯಕಿ ಕಸ್ತೂರಿ ಹಾಗೂ ಹೊರೆ ಕಾಣಿಕೆಯನ್ನು ನಿರ್ವಹಿಸಿದ ವಿನಯಾನಂದ ಹಾಗೂ ಅರುಣ್ ಕುಮಾರ್ ಕದ್ರಿಯವರನ್ನು ಸನ್ಮಾನಿಸಲಾಯಿತು. ಯಶ್ ವರ್ಲ್ಡ್ ಹ್ಯಾಬಿಟಾಟ್ ಮತ್ತು ಪ್ರಾಜೆಕ್ಟ್ನ ಅಧ್ಯಕ್ಷ ಎ. ಸುರೇಶ್ ರೈ, ಮಂಗಳೂರು ಪಾಲಿಕೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮೋಹನ್ದಾಸ್ ಶೆಟ್ಗಿ, ಗೋಕುಲ್ ಕೇಟರರ್ಸ್ನ ಗೋಕುಲ್ ಕದ್ರಿ ಅತಿಥಿಗಳಾಗಿದ್ದರು.
ಕರ್ನಾಟಕ ಜೋಗಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಜೋಗಿ, ಪದಾಧಿಕಾರಿಗಳಾದ ಸತೀಶ್ ಮಾಲೆಮಾರ್, ಸುರೇಶ್ ಕೆ. ಉಪಸ್ಥಿತರಿದ್ದರು. ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠ ಪರ್ಯಾಯ ರಾಜ ಪಟ್ಟಾಭಿಷೇಕ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ್ ಸ್ವಾಗತಿಸಿ, ಪತ್ರಕರ್ತ ಯಶು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು. ಪಲ್ಲವಿ ಪ್ರಾರ್ಥಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.