ನವದೆಹಲಿ: ಪೂರ್ವ ದೆಹಲಿಯ ಶಾಕುರ್ ಸ್ಲಂನ್ನು ತೆರವುಗೊಳಿಸಿದ ರೈಲ್ವೇ ಇಲಾಖೆಯ ಕಾರ್ಯ ಇದೀಗ ದೆಹಲಿಯ ಎಎಪಿ ಸರ್ಕಾರ ಮತ್ತು ಕೇಂದ್ರದ ನಡುವೆ ಮತ್ತೊಂದು ಸುತ್ತಿನ ಜಟಾಪಟಿಗೆ ವೇದಿಕೆ ಸೃಷ್ಟಿಸಿದೆ.
ಮೂಲಸೌಕರ್ಯ ಪ್ರಕ್ರಿಯೆ ಕಾರ್ಯ ಆರಂಭಿಸಲು ರೈಲ್ವೇ ಇಲಾಖೆ ಜಮೀನು ಅಗತ್ಯಬಿದ್ದ ಕಾರಣ ರೈಲ್ವೇ ಇಲಾಖೆ ಶಾಕುರ್ ಸ್ಲಂನಲ್ಲಿನ 1200 ಗುಡಿಸಲುಗಳನ್ನು ಶನಿವಾರ ತೆರವುಗೊಳಿಸಲು ಆರಂಭಿಸಿದೆ. ಇದಕ್ಕೂ ಮುನ್ನ ಸ್ಲಂ ನಿವಾಸಿಗಳಿಗೆ 3 ಬಾರಿ ನೋಟಿಸ್ ನೀಡಿದೆ.
ಆದರೂ ಅಲ್ಲಿದ್ದ ಜನ ಗುಡಿಸಲನ್ನು ತೆರವುಗೊಳಿಸಿರಲಿಲ್ಲ. ಆದರೆ ರೈಲ್ವೇ ಇಲಾಖೆ ತೆರವು ಕಾರ್ಯಾಚರಣೆ ಆರಂಭಿಸಿದೆ. ಈ ವೇಳೆ ಗುಡಿಸಲಲ್ಲಿದ್ದ ಮಗುವೊಂದು ಸಾವನ್ನಪ್ಪಿದೆ. ಇದೀಗ ಇದಕ್ಕೆ ಕೇಂದ್ರವೇ ಕಾರಣ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸುತ್ತಿದ್ದು, ಈ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದಾರೆ.
ಮಗುವಿನ ಸಾವಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. 6 ಡಿಗ್ರಿ ಚಳಿ ಇರುವ ಇಂತಹ ಸಂದರ್ಭದಲ್ಲಿ ತೆರವು ಕಾರ್ಯಾಚರಣೆ ನಡೆಸಿ ಬಡವರನ್ನು ಕೇಂದ್ರ ಬೀದಿಗೆ ತಳ್ಳಿದೆ ಎಂದು ಅವರು ಆರೋಪಿಸಿದ್ದಾರೆ. ರೈಲ್ವೇ ಸಚಿವರಿಗೂ ದೂರು ಕೊಡುವುದಾಗಿ ತಿಳಿಸಿದ್ದಾರೆ.
ಆದರೆ ಮಗು ತೆರವು ಕಾರ್ಯಾಚರಣೆ ನಡೆಸುವುದಕ್ಕೂ ಮುನ್ನವೇ ಮೃತಪಟ್ಟಿದೆ, ಅದರ ಪೋಷಕರು ಮನೆ ಬಿಡಲು ಸಜ್ಜಾಗುತ್ತಿದ್ದ ವೇಳೆ ಬಟ್ಟೆಯ ಮೂಟೆಯೊಂದು ಅದರ ಮೇಲೆ ಬಿದ್ದು ಮೃತಪಟ್ಟಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಮಗುವಿನ ಸಾವನ್ನು ಕೇಜ್ರಿವಾಲ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.